ಬಿಜೆಪಿ ಸಮಾವೇಶದಿಂದ ಹಿಂತಿರುಗುತ್ತಿದ್ದ ಬಸ್ ಮೇಲೆ ಕಲ್ಲು ತೂರಾಟ
ಮಂಗಳೂರು, ಫೆಬ್ರವರಿ 21 : ಉಡುಪಿಯ ಮಲ್ಪೆಯಲ್ಲಿ ಬಿಜೆಪಿ ಆಯೋಜಿಸಿದ್ದ ಮೀನುಗಾರಿಕಾ ಸಮಾವೇಶಕ್ಕೆ ತೆರಳಿ ಹಿಂದಿರುಗುತ್ತಿದ್ದ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಘಟನೆ ಮಂಗಳೂರಿನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮಂಗಳೂರು ಹೊರವಲಯದ ಬೆಂಗರೆ ಎಂಬಲ್ಲಿ ಈ ಘಟನೆ ನಡೆದಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದ ಮೀನುಗಾರಿಕಾ ಸಮಾವೇಶಕ್ಕೆ ಮಂಗಳೂರು ಹೊರವಲಯದ ಬೆಂಗರೆ ಪ್ರದೇಶದಿಂದ ನೂರಾರು ಮೀನುಗಾರರು ತೆರಳಿದ್ದರು. ಆದರೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಮೀನುಗಾರರಿದ್ದ ಬಸ್ಸಿಗೆ ಬೆಂಗರೆ ಎಂಬಲ್ಲಿ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಿದೆ.
ಭ್ರಷ್ಟಾಚಾರವೇ ಕಾಂಗ್ರೆಸ್ ಸರಕಾರದ ಮೆಡಲ್: ಅಮಿತ್ ಶಾ ವ್ಯಂಗ್ಯ
ಸಮಾವೇಶಕ್ಕೆ ತೆರಳಿದ್ದ ಬಸ್ ಗಳು ರಾತ್ರಿ ಮರಳುತ್ತಿದ್ದಂತೆ ಬಸ್ ಗಳ ಮೇಲೆ ದುಷ್ಕರ್ಮಿಗಳು ಗುಂಪು ಕಲ್ಲು ತೂರಲು ಪ್ರಾರಂಭಿಸಿದೆ. ಘಟನೆ ಬಳಿಕ ಬಸ್ ನಿಲ್ಲಿಸಿ, ಒಳಗೆ ಇದ್ದವರೂ ಕಲ್ಲು ತೂರಾಟ ನಡೆಸಿದ್ದಾರೆ. ಉಭಯ ಗುಂಪುಗಳ ಮಧ್ಯೆ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಪಿಎಸ್ ಐ ಸೇರಿ ಐವರಿಗೆ ಗಾಯಗಳಾಗಿವೆ. ಗಾಯಗೊಂಡವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಗುಂಪು ಚದುರಿಸಲು ಯತ್ನಿಸುತ್ತಿದ್ದಾಗ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣೆ ಪಿಎಸ್ಐ ಪೂವಪ್ಪ ಅವರ ತಲೆಗೆ ಗಾಯವಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ರವಾನಿಸಲಾಗಿತ್ತು. ಘಟನೆ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.