'ಪಂಪ್ ವೆಲ್ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ರಾಜ್ಯ ಸರಕಾರ ಹೊಣೆ'
ಮಂಗಳೂರು, ನವೆಂಬರ್ 19: ಮಂಗಳೂರಿನ ಪಂಪ್ ವೆಲ್ ಮಹಾವೀರ ಸರ್ಕಲ್ ನ ಫ್ಲೈ ಓವರ್ ವಿಚಾರ ಮತ್ತೇ ಚರ್ಚೆಗೆ ಗ್ರಾಸವಾಗಿದೆ. ಈ ಕಾಮಗಾರಿ ಬಿಜೆಪಿ ಮತ್ತು ಕಾಂಗ್ರೆಸ್ ರಾಜಕಾರಣಿಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆ ಕಲ್ಪಿಸಿದೆ.
ಫ್ಲೈ ಓವರ್ ಕಾಮಗಾರಿ 2010 ರಲ್ಲಿ ಅರಂಭವಾಗಿದ್ದರೂ ಈ ವರೆಗೆ ಮೇಲ್ಸೇತುವೆ ಪೂರ್ಣಗೊಂಡಿಲ್ಲ. ಈ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ಸಂಸದ ನಳಿನ ಕುಮಾರ್ ಕಟೀಲ್ ಅವರ ನಿರ್ಲಕ್ಷ ದೋರಣೆ ಕಾರಣ ಎಂದು ಕಾಂಗ್ರೆಸ್ ಟೀಕಿಸಿದೆ. ಈ ಕುರಿತು ಪ್ರತಿಭಟನೆಗಳನ್ನು ನಡೆಸಿದೆ. ಆದರೆ ನಳಿನ್ಕುಮಾರ್ ಕಾಮಗಾರಿ ತಡಕ್ಕೆ ರಾಜ್ಯ ಸರ್ಕಾರ ಕಾರಣ ಎಂದಿದ್ದಾರೆ.
ಸಂಸದ ನಳಿನ್ ಕುಮಾರ್ ಕಟೀಲ್ ಪಂಪ್ವೆಲ್ ಫ್ಲೈಓವರ್ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಈ ಫ್ಲೈ ಓವರ್ ಕಾಮಗಾರಿ ವಿಳಂಭಕ್ಕೆ ರಾಜ್ಯ ಸರಕಾರ ನೇರ ಹೊಣೆ ಎಂದು ಆರೋಪಿಸಿದ್ದಾರೆ.

ರಾಜ್ಯ ಸರ್ಕಾರ ನಿಗದಿತ ಸಮಯದಲ್ಲಿ ಭೂಮಿ ಒತ್ತುವರಿ ಮಾಡದ ಕಾರಣ ಪಂಪ್ವೆಲ್ ಫ್ಲೈಓವರ್ ಕಾಮಗಾರಿ ತಡವಾಗಿದೆ. ಪ್ರಸ್ತುತ ಕಾಮಗಾರಿ ಕೊನೇ ಹಂತಕ್ಕೆ ತಲುಪಿದ್ದು, ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳೂರು ಹೊರವಲಯದ ತೊಕ್ಕೊಟ್ಟು ಮೇಲ್ಸೇತುವೆಯಲ್ಲಿಯೂ ಡಿಸೆಂಬರ್ ಅಂತ್ಯಕ್ಕೆ ಸಂಚಾರ ಆರಂಭವಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಅಭಿವೃದ್ಧಿಯಲ್ಲಿ ರಾಜಕಾರಣ ಬೇಡ ಎಂದು ಮೌನವಾಗಿದ್ದೆ. ರಾಜ್ಯ ಮತ್ತು ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಬಿ.ಸಿ. ರೋಡ್ನಿಂದ ಸುರತ್ಕಲ್ ಮುಕ್ಕವರೆಗಿನ 30 ಕಿ.ಮೀ.ರಸ್ತೆಗೆ 13 ವರ್ಷ ತೆಗೆದುಕೊಳ್ಳಲಾಗಿತ್ತು. ಅದರಲ್ಲಿ ಬೈಕಂಪಾಡಿ ಸೇತುವೆ ಸೇರಿರಲಿಲ್ಲ. ಅದನ್ನು ನನ್ನ ಅವಧಿಯಲ್ಲಿ ನವಯುಗದ ಮೂಲಕ ಮಾಡಲಾಯಿತು ಎಂದು ಅವರು ಹೇಳಿದರು.












Click it and Unblock the Notifications