ಶಿರಾಡಿ ಘಾಟ್ 2ನೇ ಹಂತದ ಕಾಮಗಾರಿ ಟೆಂಡರ್ ರದ್ದು
ಮಂಗಳೂರು, ಜನವರಿ. 16 : ಹೊಸ ವರ್ಷದಲ್ಲಿ ಶಿರಾಡಿ ಘಾಟ್ ರಸ್ತೆಯ ಎರಡನೇ ಹಂತದ ಕಾಮಗಾರಿ ಆರಂಭವಾಗುತ್ತೆ ಎಂದು ಘೋಷಿಸಲಾಗಿತ್ತು. ಹೀಗಾಗಿ ಜನವರಿ 3ರಿಂದ ಶಿರಾಡಿ ಘಾಟ್ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು. ಆದರೆ, ಈಗ ದಿಢೀರನೆ ಇದಕ್ಕೆಲ್ಲಾ ಬೆಂಕಿ ಬಿದ್ದಿದೆ.
ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ 2ನೇ ಹಂತದ ಕಾಮಗಾರಿ ಟೆಂಡರ್ ರದ್ದುಗೊಳಿಸಲಾಗಿದೆ.
ಹೈದರಾಬಾದ್ ಮೂಲದ ಜಿವಿಆರ್ ಇನ್ ಫ್ರಾ ಪ್ರಾಜೆಕ್ಟ್ ಲಿ. 13 ಕಿ.ಮೀ. ಉದ್ದದ ಶಿರಾಡಿ ಘಾಟ್ ರಸ್ತೆಯ 2ನೇ ಹಂತದ ಕಾಮಗಾರಿ ಟೆಂಡರ್ ಪಡೆದಿತ್ತು.[ಮುಗಿಯದ ' ಶಿರಾಡಿ' ಗೋಳು, ನಿಲ್ಲದ ಪ್ರಯಾಣಿಕರ ಗೋಳು!]
ಆದರೆ, ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಕಾರಣ ರಾಜ್ಯ ಸರ್ಕಾರ ಟೆಂಡರ್ ರದ್ದುಗೊಳಿಸಿದೆ. ಲೋಕೋಪಯೋಗಿ ಇಲಾಖೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಯೋಜನೆ ಕುರಿತು ವಿವರವಾದ ವರದಿಯನ್ನು ಮತ್ತೊಮ್ಮೆ ಸಲ್ಲಿಸಲಿದೆ.
ವರದಿಗೆ ಒಪ್ಪಿಗೆ ಸಿಕ್ಕಿದ ಬಳಿಕ ಮತ್ತೊಮ್ಮೆ 2ನೇ ಹಂತದ ಕಾಮಗಾರಿಗಾಗಿ ಟೆಂಡರ್ ಕರೆಯಲಾಗುತ್ತದೆ ಎಂದು ಮೂಲಗಳು ' ಒನ್ ಇಂಡಿಯಾ' ಕ್ಕೆ ತಿಳಿಸಿವೆ.
2015ರ ನವೆಂಬರ್ ನಲ್ಲಿ ಟೆಂಡರ್ ನೀಡಲಾಗಿತ್ತು. 2017ರ ಜನವರಿ 3 ರಿಂದ ಕಾಮಗಾರಿ ಆರಂಭಿಸಿ 18 ತಿಂಗಳಿನಲ್ಲಿ ಪೂರ್ಣಗೊಳಿಸಬೇಕು ಎಂದು ಷರತ್ತು ಹಾಕಲಾಗಿತ್ತು.[ಜನವರಿ 3 ರಿಂದ ಬೆಂಗಳೂರು-ಮಂಗಳೂರು ಶಿರಾಡಿ ಘಾಟ್ ಬಂದ್]
ಆದರೆ, ಟೆಂಡರ್ ಪಡೆದ ಕಂಪನಿ ಕಾಮಗಾರಿಗೆ ಯಾವುದೇ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಆದ್ದರಿಂದ ಟೆಂಡರ್ ರದ್ದುಗೊಳಿಸಲಾಗಿದೆ.
ಮೊದಲ ಹಂತದ 13 ಕಿ.ಮೀ ಕಾಂಕ್ರೀಟ್ ರಸ್ತೆ ಕಾಮಗಾರಿ 2015ರ ಆಗಸ್ಟ್ ನಲ್ಲಿ ಪೂರ್ಣಗೊಂಡಿದೆ. 90.27 ಕೋಟಿ ವೆಚ್ಚದಲ್ಲಿ ಎರಡನೇ ಹಂತದ ಕಾಮಗಾರಿಗೆ ಟೆಂಡರ್ ಕರೆಯಲಾಗಿತ್ತು.
ಕೆಂಪುಹೊಳೆ ಸೇತುವೆಯಿಂದ ಅಡ್ಡಹೊಳೆ ಸೇತುವೆ ತನಕ ಸುಮಾರು 13 ಕಿ.ಮೀ. ರಸ್ತೆಯನ್ನು ಕಾಂಕ್ರೀಟ್ ರಸ್ತೆಯಾಗಿ ನಿರ್ಮಾಣ ಮಾಡಲು ಟೆಂಡರ್ ಕರೆಯಲಾಗಿತ್ತು. ಈಗ ಟೆಂಡರ್ ರದ್ದಾಗಿರುವುದರಿಂದ ಕಾಮಗಾರಿ ತಡವಾಗಿ ಆರಂಭವಾಗಲಿದೆ.