ಮೇ 19ರಂದು ದಕ್ಷಿಣ ಕನ್ನಡ ಬಂದ್, ಯಾಕೆ ಏನು ಎತ್ತ?
ಮಂಗಳೂರು, ಮೇ 18 : ಎತ್ತಿನಹೊಳೆ ಯೋಜನೆ ವಿರೋಧಿಸಿ ಕರೆ ನೀಡಿರುವ ಬಂದ್ ವಾಪಸ್ ಪಡೆಯುವಂತೆ ನಡೆಸಿದ ಸಂಧಾನ ಸಭೆ ಮುರಿದು ಬಿದ್ದಿದೆ. ಮೇ 19ರ ಗುರುವಾರ ಸ್ವಯಂ ಪ್ರೇರಿತ ದಕ್ಷಿಣ ಕನ್ನಡ ಬಂದ್ ನಡೆಯುವುದು ಖಾತ್ರಿಯಾಗಿದೆ.
ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ವಿವಿಧ ಸಂಘಟನೆಗಳ ಜೊತೆ ನಡೆಸಿದ ಮಾತುಕತೆ ವಿಫಲವಾಗಿದೆ. 'ಎತ್ತಿನಹೊಳೆ ಯೋಜನೆ ಬಗ್ಗೆ ಈ ಹಿಂದೆ ಸಭೆ ಕರೆಯಲಾಗಿದ್ದರೂ ಹೋರಾಟಗಾರರು ಭಾಗವಹಿಸಿಲ್ಲ . ಮತ್ತೊಮ್ಮೆ ಸಭೆ ನಡೆಸುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಬಂದ್ ತೀರ್ಮಾನ ಕೈ ಬಿಡಿ' ಎಂದು ಜಿಲ್ಲಾಧಿಕಾರಿಗಳು ಮಾಡಿದ ಮನವಿಗೆ ಸ್ಪಂದನೆ ಸಿಕಿಲ್ಲ. [ಎತ್ತಿನಹೊಳೆಗೆ ವಿರೋಧ, ಮೇ 19ರಂದು ದಕ್ಷಿಣ ಕನ್ನಡ ಬಂದ್]

ಮಾಧ್ಯಮಗಳ ಜೊತೆ ಮಾತನಾಡಿದ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಅವರು, 'ಎತ್ತಿನಹೊಳೆ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸರ್ಕಾರಕ್ಕೆ ಸ್ಪಷ್ಟತೆ ಇಲ್ಲ. ಕೆಲವು ಚುನಾಯಿತ ಪ್ರತಿನಿಧಿಗಳು ಮತ್ತು ಉದ್ಯಮಿಗಳ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ' ಎಂದು ಆರೋಪಿಸಿದರು. ['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]
'ಯಾವುದೇ ವೈಜ್ಞಾನಿಕ ಅಧ್ಯಯನ ಮಾಡದೆ ದಕ್ಷಿಣ ಕನ್ನಡ ಜಿಲ್ಲೆಗೆ ಈ ಯೋಜನೆಯಿಂದ ಅನ್ಯಾಯವಾಗುವುದಿಲ್ಲ ಎಂದು ಹೇಳುವುದು ಎಷ್ಟು ಸಮಂಜಸ?. 36 ವರ್ಷ ಕಾಮಗಾರಿ ನಡೆದ ವಾರಾಹಿ ಯೋಜನೆಯ ನೀರು ಇನ್ನೂ ಫಲಾನುಭವಿಗಳಿಗೆ ಸಿಕ್ಕಿಲ್ಲ. ಹೀಗಿರುವಾಗ ಈ ಯೋಜನೆ ಮುಗಿಯಲು ಎಷ್ಟು ವರ್ಷ ಬೇಕು ? ಈ ಪ್ರದೇಶದಿಂದ 24 ಟಿಎಂಸಿ ನೀರು ಅಲ್ಲಿ ಮುಟ್ಟಲು ಸಾಧ್ಯವೇ?' ಎಂದು ವಿಕಯಕುಮಾರ್ ಶೆಟ್ಟಿ ಪ್ರಶ್ನಿಸಿದರು. [ನೀರಿನ ಅಭಾವ, ನೇತ್ರಾವತಿ ನದಿಗೆ ಕಾವಲು!]
ಮಂಗಳೂರಿನಲ್ಲಿ ಬರ : ಸಾಮಾಜಿಕ ಹೋರಾಟಗಾರ ಎಂ.ಜಿ.ಹೆಗಡೆ ಮಾತನಾಡಿ, 'ಸ್ಮಾರ್ಟ್ ಸಿಟಿ ಬಗ್ಗೆ ಮಾತನಾಡುವ ನಾವು ಎತ್ತಿನಹೊಳೆ ಯೋಜನೆ ಆಗದೆಯೇ ಇಲ್ಲಿನ ನೀರಿನ ಬರ ಎದುರಿಸುತ್ತಿದ್ದೇವೆ. ಯೋಜನೆ ಪೂರ್ಣಗೊಂಡರೆ ಮಂಗಳೂರಿನ ಪರಿಸ್ಥಿತಿ ಏನು?' ಎಂದರು.












Click it and Unblock the Notifications