ಮಂಗಳೂರು: ಗಾಂಜಾ ಮಾರಾಟಕ್ಕಿಳಿದ ಕಾಲೇಜು ವಿದ್ಯಾರ್ಥಿಗಳ ಬಂಧನ
ಮಂಗಳೂರು, ಅಕ್ಟೋಬರ್ 24: ನಗರದ ಶ್ರೀನಿವಾಸ ಕಾಲೇಜು ಹಾಗೂ ಬಲ್ಮಠದ ಪರಿಸರದಲ್ಲಿ ಗಾಂಜಾ ಮಾರಾಟ ಮಾಡುತಿದ್ದ 3 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಮಂಗಳೂರಿನ ರೌಡಿ ನಿಗ್ರಹದ ದಳದ ಪೊಲೀಸರು ಬಂಧಿಸಿದ್ದಾರೆ.
ನಗರದ ಬಲ್ಮಠ ಆರ್ಯ ಸಮಾಜ ರಸ್ತೆಯಲ್ಲಿರುವ ಬೆಲ್ವನ್ ಎಂಬವರ ಕಟ್ಟಡದ 4ನೇ ಮಹಡಿಯಲ್ಲಿ ಬಾಡಿಗೆ ವಾಸವಾಗಿರುವವರು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಮಂಗಳೂರಿನ ರೌಡಿ ನಿಗ್ರಹ ದಳಕ್ಕೆ ಖಚಿತ ಮಾಹಿತಿ ದೊರೆತಿತ್ತು.

ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ರೌಡಿ ನಿಗ್ರಹ ದಳದ ಪೊಲೀಸರು ಪಾಂಡೇಶ್ವರ ಶ್ರೀನಿವಾಸ ಕಾಲೇಜಿನ 3ನೇ ವರ್ಷದ ಇಂಟೀರಿಯರ್ ಡಿಸೈನಿಂಗ್ ವಿದ್ಯಾರ್ಥಿಗಳಾದ ಕೇರಳ ಕೊಟ್ಟಾಯಂ ನಿವಾಸಿ ಶಹೀನ್ ಕೆ. ಆಯೂಬ್(21), ಕೇರಳದ ವೆಡೆಟ್ಟಪುರಂ ನಿವಾಸಿ ಶೆಹನ್ ಬಶೀರ್(20), ಕೇರಳದ ಕಣ್ಣೂರು ನಿವಾಸಿ ಸಚಿನ್ ಪ್ರದೀಪನ್(20) ಎಂಬವರನ್ನು ಬಂಧಿಸಿದ್ದಾರೆ.
ಬಂಧಿತರಿಂದ 12 ಗಾಂಜಾ ಪ್ಯಾಕೇಟುಗಳು ಸೇರಿದಂತೆ ಒಟ್ಟು 400 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಬೆಲೆ ಸುಮಾರು ರೂ. 10 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ಬಂಧಿತ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ ಸುಮಾರು 1 ವರ್ಷದಿಂದ ಕೇರಳದಿಂದ ಗಾಂಜಾವನ್ನು ತಂದು, ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಿರುವುದು ತಿಳಿದುಬಂದಿದೆ. ಈಶ್ವರನ್ ಎಂಬವನು ಈ ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲಾಯ್ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ .
ಸೇಲ್ಸ್ ಆಫರ್:
ಗಾಂಜಾ ಪೊರೈಕೆ ಮಾಡುವ ಈಶ್ವರನ್ ಈ ವಿದ್ಯಾರ್ಥಿಗಳಿಗೆ ಗಾಂಜಾ ಮಾರಾಟ ಮಾಡಲು ಆಫರ್ ನೀಡುತಿದ್ದ.
ತಲಾ 50 ಗ್ರಾಂ ತೂಕದ ಗಾಂಜಾ 5 ಪಾಕೆಟ್ ಖರೀದಿಸಿದರೆ ಒಂದು ಪಾಕೆಟನ್ನು ಉಚಿತವಾಗಿ ನೀಡುವಂತಹ ವ್ಯವಸ್ಥೆಯನ್ನು ಮಾಡಿ ಮಾರಾಟ ಮಾಡಲು ಉತ್ತೇಜನ ನೀಡುತ್ತಿದ್ದ ಎನ್ನಲಾಗಿದೆ.











Click it and Unblock the Notifications