ದಕ್ಷಿಣ ಕನ್ನಡ ಎಸ್ಪಿ ವರ್ಗಾವಣೆ : ಪೂಜಾರಿ ವಾಗ್ದಾಳಿ!
ಮಂಗಳೂರು, ಜನವರಿ 22 : 'ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಪದೇ-ಪದೇ ವರ್ಗಾವಣೆ ಮಾಡುವುದು ಸರಿಯಲ್ಲ. ವರ್ಗಾವಣೆ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಇದ್ದರೆ ಅದರ ಪರಿಣಾಮವನ್ನು ಅವರು ಅನುಭವಿಸುತ್ತಾರೆ' ಎಂದು ಜನಾರ್ದನ ಪೂಜಾರಿ ಹೇಳಿದರು.
ಸೋಮವಾರ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, 'ತಪ್ಪು ನಿರ್ಧಾರಗಳ ಬಗ್ಗೆ ಮುಖ್ಯಮಂತ್ರಿ, ಸಚಿವರನ್ನು ಹೇಳುವವರು, ಕೇಳುವವರು ಇಲ್ಲವೇ ? ಎಂದು ಪ್ರಶ್ನಿಸಿದರು'.
'ದಕ್ಷಿಣ ಕನ್ನಡದ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಅವರ ವರ್ಗಾವಣೆ ಹಿಂದೆ ಮುಖ್ಯಮಂತ್ರಿಗಳ ಕೈವಾಡವಿದ್ದರೆ ಅದನ್ನು ನಾನು ಖಂಡಿಸುತ್ತೇನೆ. ಜಿಲ್ಲಾ ಉಸ್ತುವಾರಿ ಸಚಿವರ ಮಾತನ್ನು ಕೇಳುವುದಿಲ್ಲವೆಂದು ವರ್ಗಾವಣೆ ಮಾಡಿದ್ದಲ್ಲಿ, ಮುಂದೆ ಅದರ ಪರಿಣಾಮವನ್ನು ಚುನಾವಣೆಯಲ್ಲಿ ಅವರು ಅನುಭವಿಸುತ್ತಾರೆ' ಎಂದರು.

ಜನವರಿ 20ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿತ್ತು. ಡಾ.ರವಿಕಾಂತೇ ಗೌಡ ಅವರನ್ನು ನೂತನ ಎಸ್ಪಿಯಾಗಿ ನೇಮಕ ಮಾಡಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಫೋನ್ ಕರೆಗಳನ್ನು ಸುಧೀರ್ ಕುಮಾರ್ ರೆಡ್ಡಿ ಅವರು ಸ್ವೀಕರಿಸುತ್ತಿರಲಿಲ್ಲ. ಆದ್ದರಿಂದ, ಅವರನ್ನು ವರ್ಗಾವಣೆ ಮಾಡಿಸಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.












Click it and Unblock the Notifications