Get Updates
Get notified of breaking news, exclusive insights, and must-see stories!

ಸೌಜನ್ಯಾ ಪ್ರಕರಣ: ಮೋಸ ಮಾಡಿದವರು ನ್ಯಾಯ ಕೊಡಿಸಲು ಸಾಧ್ಯನಾ?, ಬಿಜೆಪಿ ನಾಯಕರ ವಿರುದ್ಧ ವಸಂತ ಬಂಗೇರ ಕಿಡಿ

ಮಂಗಳೂರು, ಆಗಸ್ಟ್‌, 28: ಸೌಜನ್ಯ ಹತ್ಯೆ ಪ್ರಕರಣದಲ್ಲಿ ಮರುತನಿಖೆಗಾಗಿ ರಾಜ್ಯ ಸರ್ಕಾರಕ್ಕೆ ಕರಾವಳಿ ಬಿಜೆಪಿ ಶಾಸಕರು ಮನವಿ ಮಾಡಿದ್ದು, ಈ ವಿಚಾರವಾಗಿ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬೆಳ್ತಂಗಡಿ ತಹಶೀಲ್ದಾರ್ ಕಚೇರಿ ಎದುರಲ್ಲಿ ಎಡಪಂಥೀಯ ಮತ್ತು ಪ್ರಗತಿಪರ ಸಂಘಟನೆಗಳ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ವಸಂತ ಬಂಗೇರ, ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿದೆ. ಈಗ ಅವರೇ ಮರುತನಿಖೆ ಮಾಡಬೇಕಾಗಿದೆ. ಬಿಜೆಪಿ ಶಾಸಕ, ಸಂಸದರು ಮೋದಿಯರಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಮೋದಿಗೆ ಹೇಳುವ ಬದಲು ಸಿದ್ದರಾಮಯ್ಯ ಬಳಿ ನ್ಯಾಯ ಕೇಳುತ್ತಿದ್ದಾರೆ. ಇವರಿಗೆ ಧೈರ್ಯ ಇಲ್ಲದಿದ್ದರೆ ನಾನು‌ ಇವರನ್ನು ಮೋದಿಯವರ ಬಳಿ ಕರೆದುಕೊಂಡು ಹೋಗಿ 3 ಬಾರಿ ಎಂಪಿ ಆಗಿದ್ದವರೆಂದು ಪರಿಚಯ ಮಾಡಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.

sowjanya-rape-and-murder-case

ಎಂದೂ ಓದದ ಮಾಣಿ ಅಮಾವಾಸ್ಯೆ ದಿನ ಓದಿದ ಎನ್ನುವಂತೆ ಬಿಜೆಪಿಯವರು ಭಾನುವಾರ ಇಲ್ಲಿ ಪ್ರತಿಭಟನೆ ಮಾಡಿದರು. ತಹಶೀಲ್ದಾರ್ ಕಚೇರಿಗೆ ಬೀಗ ಹಾಕಿರುವಾಗ ಇವರು ಪ್ರತಿಭಟನೆಯ ನಾಟಕ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಿಗೆ ಈಗ ನೆನಪು ಬಂದಿದೆ. 14 ವರ್ಷಗಳಿಂದ ಸಂಸದರಾಗಿರುವ ನಳಿನ್ ಕುಮಾರ್ ಕಟೀಲ್‌ ಈವರೆಗೆ ಸೌಜನ್ಯಾ ಬಗ್ಗೆ ಧ್ವನಿ ಎತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊಲೆಯಾಗಿ 11 ವರ್ಷಗಳಾಗಿದ್ದು ಸೌಜನ್ಯಾ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲು ಆಗಲಿಲ್ಲ ಯಾಕೆ? ಮುರುಗನ್ ಎಂಬ ಒಳ್ಳೆಯ ಸಿಬಿಐ ಅಧಿಕಾರಿ ತನಿಖೆ ಮಾಡುತ್ತಿದ್ದಾಗ ಅವರನ್ನು ಬದಲಾವಣೆ ಮಾಡಿದರು. ಮೋದಿ ಸರ್ಕಾರ ಇದ್ದಾಗಲೇ ಅಧಿಕಾರಿಯನ್ನು ಬದಲಿಸಿ ತನಿಖೆಯ ದಿಕ್ಕು ತಪ್ಪಿಸಿದ್ದು ಯಾರು? ಹಾಗಾದರೆ ಸೌಜನ್ಯಾ ತನಿಖೆಯನ್ನು ದಿಕ್ಕು ತಪ್ಪಿಸಿದ್ದು ಯಾರು? ಇದಕ್ಕೆ ಕಾರಣಕರ್ತರು ಯಾರು? ಎಂದು ವಸಂತ ಬಂಗೇರ ಪ್ರಶ್ನಿಸಿದರು.

ನನ್ನನ್ನು ಸೌಜನ್ಯಾ ಪ್ರಕರಣದಲ್ಲಿ ಅಪರಾಧಿ ಅಂತೀರಲ್ಲ ಸುನೀಲ್ ಕುಮಾರ್ ತಾಕತ್ತು ಇದ್ದರೆ ಮೋದಿಗೆ ಹೇಳಿ ನನ್ನನ್ನು ಸಿಬಿಐನಿಂದ ಬಂಧಿಸಿ. ಇದೇ ಸುನೀಲ್ ಕುಮಾರ್ ಕಾರ್ಕಳದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದಾಗ ಸುಚಿತ್ರಾ ಶೆಟ್ಟಿ ಕೊಲೆಯಾದಾಗ, ನ್ಯಾಯ ಕೊಡಿಸುತ್ತೇನೆಂದು ವೋಟು ಕೇಳಿದ್ದರು. ಹಾಗಾದರೆ ಇದುವರೆಗೂ ಯಾಕೆ ನ್ಯಾಯ ಕೊಡಿಸಿಲ್ಲ ನೀವು. ಹಾಗೆಯೇ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜನಿಗೆ 5 ವರ್ಷ ಸೌಜನ್ಯಾ ನೆನಪಾಗಿಲ್ಲ ಎಂದು ಕಿಡಿಕಾರಿದರು.

40 ಪರ್ಸೆಂಟ್ ಕೊಳ್ಳೆ ಹೊಡೆದ ರಾಜ್ಯದ ಏಕೈಕ ಶಾಸಕ ಹರೀಶ್ ಪೂಂಜ ಈಗ ಸೌಜನ್ಯಾ ಪರ ನ್ಯಾಯ ಕೇಳುತ್ತಿದ್ದಾರೆ. ಇವರೆಲ್ಲ ಸೇರಿ ನನಗೆ ರಕ್ಷಣೆ ಕೊಡಲು ಬಂದಿದ್ದಾರೆ, ನನಗೆ ದೇವರಿದ್ದಾನೆ. ಇವರ ಭದ್ರತೆ ಬೇಕಿಲ್ಲ. ಇವರಿಗೆ ಯಾವ ಯೋಗ್ಯತೆ ಇದೆ. ಜನರನ್ನು ಮೋಸ ಮಾಡಿ ಗೆದ್ದವರು ಇವರು. ನನಗೀಗ 78 ವರ್ಷ, ಇವರೆಲ್ಲ ರಾಜಕೀಯದ ಪಾಠ ನನ್ನಿಂದ ಕಲಿಯಬೇಕಾಗಿದೆ ಎಂದು ಬಂಗೇರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನಾ ಸಭೆಯಲ್ಲಿ ಎಡಪಂಥೀಯ ಚಿಂತಕರಾದ ಗುಲ್ಬರ್ಗ ಮೂಲದ ಕೆ.ನೀಲಾ, ಡಾ. ಮೀನಾಕ್ಷಿ ಬಾಲಿ, ಮಲ್ಲಿಗೆ ಸಿರಿಮನೆ, ನಾಟಕಕಾರ ಜೆನ್ನಿ, ರವಿಕರಣ ಪುಣಚ, ಬಿ.ಎಂ. ಭಟ್, ವಿಷ್ಣುಮೂರ್ತಿ ಭಟ್, ಯಾದವ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ನರೇಂದ್ರ ನಾಯಕ್, ಒಡನಾಡಿ ಸ್ಟಾನ್ಲಿ, ಜಯನ್ ಮಲ್ಪೆ ಮತ್ತಿತರರು ಇದ್ದರು.

ಇನ್ನು ಪುತ್ತೂರಿನಲ್ಲೂ ವಿದ್ಯಾರ್ಥಿನಿ ಸೌಜನ್ಯ ಕೊಲೆ, ಅತ್ಯಾಚಾರ ಪ್ರಕತಣದ ಮರು ತನಿಖೆಗೆ ಒತ್ತಾಯಿಸಲಾಗಿದೆ. ಅಭಿನವ ಮಿತ್ರ ಮಂಡಳಿ, ಪ್ರಜಾಪ್ರಭುತ್ವ ವೇದಿಕೆ ಬೆಳ್ತಂಗಡಿ ನೇತೃತ್ವದಲ್ಲಿ ಪುತ್ತೂರಿನಲ್ಲಿ ಪ್ರತಿಭಟನಾ ಜಾಥಾ ನಡೆದಿದೆ. ಪುತ್ತೂರಿನ ಬೊಳುವಾರು ವೃತ್ತದಿಂದ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದವರೆಗೆ ನಡೆದ ಜಾಥಾದಲ್ಲಿ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ, ಪ್ರಸಾದ್ ಅತ್ತಾವರ, ಪ್ರವೀಣ್ ವಾಲ್ಕೆ ಮೊದಲಾದವರು ಭಾಗಿಯಾಗಿದ್ದಾರೆ‌‌.

ಸೌಜನ್ಯ ಕೊಲೆ ಅತ್ಯಾಚಾರದ ಹೋರಾಟಗಾರರು ನ್ಯಾಯಾಲಯದಲ್ಲಿ ಮರು ತನಿಖೆಗೆ ಅರ್ಜಿ ಸಲ್ಲಿಸಬೇಕು ಎನ್ನುವ ಗೃಹಸಚಿವ ಜಿ‌. ಪರಮೇಶ್ವರ್ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಹೋರಾಟದ ಮುಂದಾಳು ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ಪ್ರಕರಣ ಇಡೀ ದೇಶದಲ್ಲಿ ಸುದ್ದಿಯಾಗುತ್ತಿದೆ. ಮಾಜಿ ನ್ಯಾಯಾಧೀಶರು, ವೈದ್ಯರು, ದೊಡ್ಡ ದೊಡ್ಡ ಸಂಘಟನೆಗಳು ನಮ್ಮ ಜೊತೆ ಸೇರಿಕೊಂಡಿದೆ. ಅವರೆಲ್ಲಾ ಸೇರಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದರು.

ಸರ್ಕಾರವೇ ಮೊದಲು ತನ್ನ ತೀರ್ಮಾನ ಹೇಳಬೇಕು. ಆ ಬಳಿಕ ನಾವು ನಮ್ಮ ತೀರ್ಮಾನ ತೆಗೆದುಕೊಳ್ಳುತ್ತೇವೆ. ಇಡೀ ಹಿಂದೂ ಸಮಾಜಕ್ಕಾಗಿ ನಾವು ಯೋಚನೆ ಮಾಡಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಗೃಹಸಚಿವರಿಗೆ ಈಗ ನಡೆಯುತ್ತಿರುವ ಹೋರಾಟ ಸಾಕಾಗಿಲ್ಲ ಎಂದು ತೋರುತ್ತಿದೆ. ಅವರು ಜನ ಇನ್ನೂ ಬೀದಿಗಿಳಿದು ಹೋರಾಟ ಮಾಡಬೇಕೆಂದು ಕಾಯುತ್ತಿದ್ದಾರೆ. ಅಲ್ಲಿ ತನಗೆ ತಮಗೆ ಎಚ್ಚರ ಆಗೋದಿಲ್ಲ ಎನ್ನುವ ರೀತಿ ಮಾತನಾಡುತ್ತಿದ್ದಾರೆ. ಹೋರಾಟ ತೀವ್ರ ಸ್ವರೂಪಕ್ಕೆ ಬಂದು ಶಾಂತಿಭಂಗ ಆಗಬಾರದು ಎನ್ನುವುದಾದರೆ ಗೃಹಸಚಿವರು ಇಂತಹ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಎಂದರು.

ಸರ್ಕಾರ ತಮ್ಮ ಸ್ವ ಇಚ್ಛೆಯಿಂದ ಮರು ತನಿಖೆಗೆ ಬೇಕಾದ ವ್ಯವಸ್ಥೆ ಮಾಡಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ 20 ದಿನಗಳ ನ್ಯಾಯಾಲಯದ ಕಾಲಾವಕಾಶವಿದೆ. ಅದಕ್ಕೆ ಮೊದಲು ನಾವು ತೀರ್ಮಾನ ತೆಗೆದುಕೊಳ್ಳುತ್ತೇವೆ. ಈ ಹೋರಾಟ ತೀವ್ರ ಸ್ವರೂಪಕ್ಕೆ ಬರಲು ಸರಕಾರವೇ ಕಾರಣ. ನಮ್ಮನ್ನಾಳುವವರು ಮಾಡಿದ ತಪ್ಪಿನ ಪರಿಣಾಮ ಇದು. ರಾಜಕೀಯದವರು ಮಾಡಿದ ತಪ್ಪನ್ನು ಜನ ಅನುಭವಿಸುವಂತಾಗಿದೆ. ಸೌಜನ್ಯ ಪ್ರಕರಣ ಮುಚ್ಚಿ ಹೋಗಲು ರಾಜಕೀಯದವರೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಪ್ರಕರಣ ಅವರ ಕೈಯಿಂದಲೇ ಮತ್ತೆ ರೀ ಓಪನ್ ಆಗಬೇಕು. ನಾವು ಈ ನಾಡಿನ ಪ್ರಜೆಗಳು. ಪ್ರಕರಣವನ್ನು ಮರು ತನಿಖೆಗೆ ಒಪ್ಪಿಸಿ ಎಂದು ನಾವು ಸರಕಾರದ ಮುಂದೆ ಬಿಕ್ಷೆ ಬೇಡಬೇಕಾ? ಕಾನೂನಿನ ಹೋರಾಟ ಎಲ್ಲಿ ಮಾಡಬೇಕು ಅಲ್ಲಿ ಮಾಡುತ್ತೇವೆ. ಇಡೀ ದೇಶದಲ್ಲಿ ಈ ಸಂಬಂಧ ವ್ಯವಸ್ಥೆಗಳು ನಡೆಯುತ್ತಿದೆ. ರಾಜಕೀಯದವರಿಗೆ 5 ವರ್ಷ ಮಾತ್ರ ಶಕ್ತಿ. ಆದರೆ ನಮ್ಮಂತಹ ಪ್ರಜೆಗಳಿಗೆ ನಿರಂತರ ಶಕ್ತಿಯಿದೆ ಎಂದರು.

ಸೌಜನ್ಯ ಪ್ರಕರಣ ಈ ರೀತಿಯಾಗಲು ಬಿಜೆಪಿ ಮಾಡಿದ ತಪ್ಪೇ ಕಾರಣ. ನ್ಯಾಯಪೀಠದಲ್ಲಿ ಆದ ಅತ್ಯಾಚಾರ, ಕೊಲೆ ಇದು. ಇಲ್ಲಿ ನ್ಯಾಯ ಸಿಗದಿದ್ದರೆ ಇಡೀ ಸನಾತನ ಧರ್ಮ ಅವಸಾನವಾಗಲಿದೆ. ಸೌಜನ್ಯ ಇಲ್ಲಿ ಒಂದು ಕಾರಣ ಮಾತ್ರ. ಅತ್ಯಾಚಾರಿಗಳ ಪರ ನಿಂತವರಿಗೂ ಶಿಕ್ಷೆಯಾಗಬೇಕು. ಅತ್ಯಾಚಾರದ ರಕ್ತ ಅಣ್ಣಪ್ಪ ಸ್ವಾಮಿ ಮತ್ತು ಮಂಜುನಾಥ ಸ್ವಾಮಿಯ ಮೇಲೆ ಚಿಮ್ಮಿದೆ. ಆ ರಕ್ತವನ್ನು ತೊಳೆಯುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ಹೇಳಿದ್ದಾರೆ..

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+