'ಅಮೇಠಿಗೆ ರೈಲ್ವೆ ಹಳಿ ತರಲಾಗದ ರಾಹುಲ್ ಅಭಿವೃದ್ದಿ ಬಗ್ಗೆ ಮಾತನಾಡುತ್ತಾರೆ'
ಮಂಗಳೂರು, ಮೇ 08: ರಾಹುಲ್ ಗಾಂಧಿ ರಾಜ್ಯಕ್ಕೆ ಬಂದು ಅಭಿವೃದ್ಧಿಯ ವಿಚಾರ ಮಾತನಾಡುತ್ತಾರೆ. ಆದರೆ ಗಾಂಧಿ ಕುಟುಂಬ 60 ವರ್ಷಗಳಿಂದ ಪ್ರತಿನಿಧಿಸುವ ಅಮೇಠಿ ಕ್ಷೇತ್ರಕ್ಕೆ ಕನಿಷ್ಠ ರೈಲ್ವೇ ಹಳಿಯನ್ನು ತರಲು ಸಾಧ್ಯವಾಗಿಲ್ಲ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ವಾಗ್ದಾಳಿ ನಡೆಸಿದ್ದಾರೆ.
ಬೆಳ್ತಂಗಡಿಯಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಭ್ಯರ್ಥಿ ಹರೀಶ್ ಪೂಂಜಾ ಪರ ಮತಯಾಚನೆ ನಡೆಸಿದರು.
ಬೆಳ್ತಂಗಡಿಯ ಅಳದಂಗಡಿಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕಾಂಗ್ರೆಸ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು.

ಗಾಂಧಿ ಕುಟುಂಬ 60 ವರ್ಷಗಳಿಂದ ಪ್ರತಿನಿಧಿಸುವ ಅಮೇಠಿ ಕ್ಷೇತ್ರದ ಬಡ ಜನರ ಕಷ್ಟವನ್ನು ನೀವು ನೋಡಿಯೇ ಹೇಳಬೇಕಷ್ಟೆ. ನಾಲ್ಕು ತಲೆಮಾರುಗಳಿಂದ ಸಾಧ್ಯವಾಗದ ಕೆಲಸ ಅಮೇಠಿಯಲ್ಲಿ ಈಗ ಆಗುತ್ತಿದೆ. ಅಮೇಠಿಗೆ ರೈಲ್ವೆ ಹಳಿ ಬರಲು ಮೋದಿ ಬರಬೇಕಾಯ್ತು ಎಂದು ಜನರು ಹೇಳುತ್ತಿದ್ದಾರೆ. ತನ್ನ ಕ್ಷೇತ್ರವನ್ನೇ ಸುಧಾರಣೆ ಮಾಡಲಾಗದ ವ್ಯಕ್ತಿ ಕರ್ನಾಟಕದಲ್ಲಿ ಅಭಿವೃದ್ಧಿ ಪಾಠ ಮಾಡುತ್ತಾರೆ ಎಂದು ಕಿಡಿಕಾರಿದರು.

ಮೋದಿ ಸರಕಾರದ ಅಭಿವೃದ್ಧಿಯೇ ರಾಹುಲ್ ಗಾಂಧಿಗೆ ಚಿಂತೆಯಾಗಿದೆ .ಶೌಚಾಲಯ ಕಟ್ಟೋಕೆ ಹೋದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆಯಾಗುತ್ತದೆ. ಸರ್ಜಿಕಲ್ ಸ್ಟೈಕ್ ಆದಾಗ ರಾಹುಲ್ ಗಾಂಧಿ ಅವರಿಗೆ ಸಮಸ್ಯೆ ಕಾಡುತ್ತದೆ. ಬಡತನ ನಿರ್ಮೂಲನೆಗೆ ಪ್ರಯತ್ನ ಮಾಡಿದಾಗ ಕೂಡ ರಾಹುಲ್ ಗಾಂಧಿಗೆ ಸಮಸ್ಯೆಯಾಗುತ್ತೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications