ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್!
ಮಂಗಳೂರು, ನ.12: ಈ ಹಿಂದೆ ಘೋಷಿಸಿದಂತೆ ಸರ್ಕಾರ ಕಟ್ಟುನಿಟ್ಟಾಗಿ ಶಿರಾಡಿ ಘಾಟ್ ರಸ್ತೆಯನ್ನು ಡಿ.1ರಿಂದ ಆರು ತಿಂಗಳ ಕಾಲ ಬಂದ್ ಮಾಡಲಿದೆ. ಆದರೆ, ಅಷ್ಟೇ ಮುತುವರ್ಜಿಯಿಂದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುವುದೇ? ಕಾದು ನೋಡಬೇಕಿದೆ. ಬೆಂಗಳೂರು ಹಾಗೂ ಮಂಗಳೂರು ನಡುವಿನ ಸಂಪರ್ಕ ಕಡಿತಗೊಳ್ಳಲಿದ್ದು, ಆರು ತಿಂಗಳು ನಿದ್ದೆಗೆ ಜಾರಲಿರುವ ರಸ್ತೆಗೆ ಮೇಕಪ್ ಮಾಡುವ ಕಾರ್ಯ ಭರದಿಂದ ಸಾಗಲಿದೆ.
ಡಿ.1ರಿಂದ ರಸ್ತೆ ಕಾಮಗಾರಿ ಆರಂಭವಾಗಲಿದ್ದು, 47 ಕಿ.ಮೀ ಉದ್ದದ ರಸ್ತೆಯ ದುರಸ್ತಿಗೆ 155.18 ಕೋಟಿ ರು ತಗುಲಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಹೇಳಿದೆ. ಶಿರಾಡಿ ಘಾಟ್ ನಲ್ಲಿ ಕಾಮಗಾರಿ ನಡೆಯುವ ವೇಳೆಯಲ್ಲಿ ಕರಾವಳಿ ಹಾಗೂ ರಾಜಧಾನಿ ಬೆಂಗಳೂರಿನ ನಡುವೆ ಸಂಚರಿಸುವ ವಾಹನಗಳ ಸಂಚಾರಕ್ಕೆ ಐದು ಪರ್ಯಾಯ ಮಾರ್ಗಗಳನ್ನು ಜಿಲ್ಲಾಡಳಿತ ಸೂಚಿಸಿದೆ.

ಬೆಂಗಳೂರಿನಿಂದ ಧರ್ಮಸ್ಥಳ, ಕುಕ್ಕೆ ಸುಬ್ರಮಣ್ಯ ಸೇರಿದಂತೆ ದಕ್ಷಿಣ ಕನ್ನಡದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಭಕ್ತಾದಿಗಳು ಈಗ ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕಾಗುತ್ತದೆ. ಕಾರ್ತಿಕ ಮಾಸದಲ್ಲಿ ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಕಾರ್ಯಕ್ರಮ(ನ.18ರಿಂದ ಆರಂಭ) ನಡೆಯಲಿದ್ದು, ಇದಕ್ಕಾಗಿ ನಾಡಿನ ವಿವಿಧೆಡೆಗಳಿಂದ ಭಕ್ತಾದಿಗಳು ಮಂಜುನಾಥನ ಸನ್ನಿಧಿಗೆ ಬರಲಿದ್ದಾರೆ. ಹೀಗಾಗಿ ಭಕ್ತಾದಿಗಳ ಅನುಕೂಲಕ್ಕಾಗಿ ಮಾರ್ಗಸೂಚಿಗಳನ್ನು ನೀಡಲಾಗಿದೆ. [ಪರ್ಯಾಯ ಮಾರ್ಗಗಳು ಇಲ್ಲಿವೆ]
ಹಾಸನ ಜಿಲ್ಲೆ ಮಾರನಹಳ್ಳಿಯಿಂದ ಗುಂಡ್ಯದವರೆಗಿನ 26 ಕಿ.ಮೀ. ರಸ್ತೆಯನ್ನು 150 ಕೋಟಿ ವೆಚ್ಚದಲ್ಲಿ ಕಾಂಕ್ರಿಟೀಕರಣಗೊಳಿಸಲಾಗುತ್ತದೆ. ಕಾಂಕ್ರೀಟ್ ರಸ್ತೆ 8.5 ಮೀ ಅಗಲ ಹಾಗೂ 1 ಅಡಿ ದಪ್ಪ ಇರಲಿದೆ. 65 ಕೋಟಿ ವೆಚ್ಚದಲ್ಲಿ 13 ಕಿ.ಮೀ. ಉದ್ದದ ರಸ್ತೆ ಕಾಂಕ್ರಿಟೀಕರಣವನ್ನು ಮಂಗಳೂರಿನ ಓಷನ್ ಕನ್ಸ್ ಸ್ಟ್ರಕ್ಷನ್ಸ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಕೆಂಪುಹೊಳೆಯಿಂದ ಗುಂಡ್ಯ ತನಕದ 13 ಕಿ.ಮೀ ದೂರವನ್ನು 85.28 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ ಎಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರಿಂಗ್ ವಿಭಾಗದ ಕಾರ್ಯಕಾರಿ ಇಂಜಿನಿಯರ್ ಸಿ ನಟರಾಜ್ ಹೇಳಿದ್ದಾರೆ.












Click it and Unblock the Notifications