ಹಿಂದೂ ಮುಸ್ಲಿಂ ವೈಷಮ್ಯ: ಎತ್ತ ಸಾಗುತ್ತಿದೆ ಮಂಗಳೂರು?
ಹಿಂದೂ ಮುಸ್ಲಿಂ ಐಕ್ಯತೆಯ ಸಂಕೇತದಂತಿದ್ದ ದಕ್ಷಿಣ ಕನ್ನಡ ಜಿಲ್ಲೆ ಇತ್ತೀಚಿನ ಹಲವು ವರ್ಷಗಳಲ್ಲಿ ಬೇಡವಾದ ಕಾರಣಕ್ಕೆ ಸುದ್ದಿಯಲ್ಲಿದೆ. ಸದಾ ಒಂದಲ್ಲಾ ಒಂದು ಘಟನೆಗಳು ಜಿಲ್ಲೆಯ ಪಾವಿತ್ರ್ಯತೆಯನ್ನೇ ಹಾಳು ಕೆಡವುತ್ತಿದೆ.
ಸಹೋದರರಂತೆ ಬದಕಲು ಇತ್ತಂಡದ ಸಮುದಾಯಗಳು ಬಯುಸುತ್ತಿದ್ದರೂ ರಾಜಕೀಯ ಮತ್ತು ಇತರ ಲಾಭ ಪಡೆದುಕೊಳ್ಳುತ್ತಿರುವವರಿಗೆ ಇದು ಬೇಡವಾಗಿದೆ. ಇದರಿಂದ ಜಿಲ್ಲೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ವಿಷಮಿಸುತ್ತಾ ಸಾಗುತ್ತಿದೆ.
ಸುದ್ದಿಯಾಗದ ಇರಿತ ಪ್ರಕರಣಗಳು ಮಂಗಳೂರು ವ್ಯಾಪ್ತಿಯಲ್ಲಿ ನಡೆಯುತ್ತಲೇ ಇದೆ. ಇನ್ನು ಲವ್ ಜಿಹಾದ್, ಗೋಸಾಗಾಣಿಕೆಗೆ ಕೊನೆಯೇ ಇಲ್ಲದಂತಾಗಿದೆ. ಕೂತಲ್ಲೇ, ಫೋನಿನಲ್ಲೇ ಡೀಲ್ ಮಾಡುವ ಲ್ಯಾಂಡ್ ಮಾಫಿಯಾ ದುಬೈ ಪೂಜಾರಿಯ ಭಯದಿಂದ ವ್ಯಾಪಾರಿಗಳು, ವಾಣಿಜ್ಯೋದ್ಯಮಿಗಳು ನಿರ್ಭೀತಿಯಿಂದ ವ್ಯವಹಾರ ನಡೆಸದಂತಾಗಿದೆ. (ಹಿಂದೂ ಸಂಘಟನೆಗಳಿಂದ ಗುರುಪುರ ಬಂದ್)
ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುವಂತಿಲ್ಲ, ತಮ್ಮ ಪಾಡಿಗೆ ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳುವ ಭಕ್ತರ ವ್ಯಾನಿನ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. ಪ್ರತಿಭಟಿಸಿದರೆ ತಲ್ವಾರ್ ಪ್ರತ್ಯಕ್ಷವಾಗುತ್ತಿದೆ. ಗಾಯಗೊಂಡವರನ್ನು ವಿಚಾರಿಸಲು ಆಸ್ಪತ್ರೆಗೆ ಭೇಟಿ ನೀಡಿದರೆ ಅವರ ಮೇಲೆಯೇ ಎಫ್ ಐ ಆರ್ ದಾಖಲಿಸಲಾಗುತ್ತಿರುವುದು ಇದು ಮಂಗಳೂರಿನ ಪ್ರಸಕ್ತ ವಸ್ತುಸ್ಥಿತಿ.
ಸಾಮಾಜಿಕ ತಾಣದಲ್ಲಿ ದ್ವೇಷ ಕಕ್ಕುವವರನ್ನು ನೋಡಿಯೂ ನೋಡದಂತೆ ಪೊಲೀಸ್ ವ್ಯವಸ್ಥೆ ಸುಮ್ಮನಿದೆ. ಜಿಲ್ಲಾಡಳಿತ ಕಾಟಾಚಾರದ ಕ್ರಮಕ್ಕೆ ಮುಂದಾಗಿದ್ದರೆ, ಜನಪ್ರತಿನಿಧಿಗಳು ದಿವ್ಯ ಮೌನಕ್ಕೆ ಶರಣಾಗಿದ್ದಾರೆ. ಪೊಲೀಸರು ರಾಜಕೀಯ ಪ್ರತಿನಿಧಿಗಳ ಅಣತಿಯಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ವಿರುದ್ದ ಸೊಲೆತ್ತಿದ್ದವರನ್ನು 'ಕೋಮುವಾದಿ" ಎನ್ನುವ ಹಣೆಪಟ್ಟಿಗೆ ಸೇರಿಸುತ್ತಿರುವುದಕ್ಕೆ ರಾಜಕೀಯ ಮೇಲಾಟವೇ ಕಾರಣ ಎಂದು ವಿವರಿಸ ಬೇಕಾಗಿಲ್ಲ.
ಮಂಗಳೂರು ವ್ಯಾಪ್ತಿಯಲ್ಲೇ ಈ ಪರಿಸ್ಥಿತಿಯಾದರೆ ನಗರದ ಹೊರವಲಯದ ಮತ್ತು ಕೋಮು ಸೌಹಾರ್ದತೆಗೆ ಕಪ್ಪುಚುಕ್ಕೆಯಂತಿರುವ ಉಳ್ಳಾಲ ನಗರದ ಪರಿಸ್ಥಿತಿ ಇನ್ನು ಹೇಗಿರಬೇಡ? (ದತ್ತ ಮಾಲಾಧಿಕಾರಿಗಳ ಮೇಲೆ ಹಲ್ಲೆ)
ಎರಡು ಕೋಮಿನ ನಡುವಿನ ದ್ವೇಷದ ಅಲೆಗಳು ಎಳ್ಳಮವಾಸ್ಯೆಯ ದಿನದ ಸಮುದ್ರದ ಅಲೆಯಂತೆ ಪ್ರತೀದಿನ ಸಮಾಜದ ಮೇಲೆ ಅಪ್ಪಳಿಸುತ್ತಲೇ ಇರುತ್ತದೆ. ಕೆಲವೊಂದು ವರದಿಯಾದರೆ, ಇನ್ನೆಷ್ಟೋ ಘಟನೆಗಳು ಮಾಧ್ಯಮಗಳ ಮುಂದೆ ಬರುವುದೇ ಇಲ್ಲ.
ಉಳ್ಳಾಲದಲ್ಲಿ ಹಿಂದೊಮ್ಮೆ ರೇವ್ ಪಾರ್ಟಿ ನಡೆಯುತ್ತಿದ್ದಾಗ ಪೊಲೀಸರಿಗೆ ಮಾಹಿತಿ ನೀಡಿದ್ದಕ್ಕೆ ಒಂದು ಕೋಮಿನ ಮೂವರನ್ನು ಜೈಲಿಗಟ್ಟಲಾಗಿತ್ತು. ಪ್ರಮುಖವಾಗಿ ರಾಜ್ಯದಲ್ಲಿ ನಿರ್ದಿಷ್ಟ ಪಕ್ಷದ ಸರಕಾರ ಅಧಿಕಾರದಲ್ಲಿದ್ದಾಗ ಕೋಮು ಗಲಭೆಗಳು ಹೆಚ್ಚುತ್ತಲೇ ಇರುತ್ತವೆ ಎನ್ನುವುದಕ್ಕೆ ಉದಾಹರಣೆಗಳು ಹಲವಾರು.
"ಒಡೆದು ಆಳುತ್ತಿರುವುದು" ಈ ಭಾಗದಲ್ಲಿ ಬಹಿರಂಗವಾಗಿಯೇ ನಡೆಯುತ್ತದೆ. ಸ್ವದೇಶ - ಸ್ವಧರ್ಮಕ್ಕೆ ಅಡ್ಡಿ ರಾಜಾರೋಷವಾಗಿಯೇ ಆಗುತ್ತಿದೆ. ಇತ್ತೀಚಿನ ಘಟನೆಗಳು ಜಿಲ್ಲೆಯಲ್ಲಿನ ಜೀವನವನ್ನೇ ಬದಲಿಸಿವೆ. ಮನುಷ್ಯ ಮನುಷ್ಯರ ನಡುವಿನ ಸಂಬಂಧಗಳನ್ನು ಪ್ರಶ್ನಿಸುವಂತೆ ಮಾಡಿವೆ.
ಕ್ಷುಲ್ಲಕ ಕಾರಣಗಳಿಗೆ ಆರಂಭವಾಗುವ ಕೋಮು ಗಲಭೆಗಳು ಹೆಣ ಬೀಳುವ ಮಟ್ಟಿಗೆ ಸಾಗುತ್ತದೆ. ಸಹದ್ಯೋಗಿಗಳಿಗೆ ಡ್ರಾಪ್ ಕೊಟ್ಟರೆ, ಅನ್ಯಧರ್ಮೀಯರಿಗೆ ಸಹಾಯ ಮಾಡಿದರೂ ಹಲ್ಲೆ ನಡೆಯುವುದು ಗ್ಯಾರಂಟಿ.
ಚರ್ಚ್ ಮೇಲಿನ ದಾಳಿಯಿಂದ ಹಿಡಿದು, ಇತರ ಕೋಮು ಗಲಭೆಗಳು ಜಿಲ್ಲೆಯ ಮಾನವನ್ನು ಮೂರು ಕಾಸಿಗೆ ಹರಾಜು ಹಾಕಿದೆ. ಪ್ರವಾಸೋದ್ಯಮ ಮತ್ತು ಶಿಕ್ಷಣಕ್ಕೆ ಹೆಸರಾಗಿದ್ದ ಮಂಗಳೂರು ಗಲಭೆ ನಗರವಾಗಿ ಪರಿವರ್ತನೆಯಾಗಿರುವುದು ವಿದ್ಯಾವಂತರ ನಾಡಿಗಾದ ಅವಮಾನ. (ಮಂಗಳೂರಿನಲ್ಲಿ ಫೇಸ್ ಬುಸ್ ಉಗ್ರರು)
ಹಿಂದೂ ಮತ್ತು ಮುಸ್ಲಿಂ ನಡುವಣ ದ್ವೇಷದ ಬೆಂಕಿಗೆ ತುಪ್ಪ ಸುರಿಯುವಂತಹ ಘಟನೆಗಳು ವರದಿಯಾಗುತ್ತಲೇ ಇವೆ. ದುಡಿಯುವ ವಯಸ್ಸಿನಲ್ಲಿ ದುಡ್ಡಿನ ವ್ಯಾಮೋಹ ತೋರಿಸಿ ಬೇಡದ ದಾರಿಗೆ ದೂಕುತ್ತಿರುವ ಸಮಾಜದ್ರೋಹಿಗಳು ಮಾತ್ರ ವ್ಯಂಗ್ಯ ನಗು ಬೀರುತ್ತಲೇ ಇದ್ದಾರೆ.
ಬಹುಸಂಖ್ಯಾತರಾಗಲಿ, ಅಲ್ಪಸಂಖ್ಯಾತರಾಗಲಿ ಮಾನವೀಯತೆ, ಮನುಷ್ಯತ್ವದ ಮುಂದೆ ಯಾವುದೇ ದೊಡ್ದದಲ್ಲ. ಸ್ವಚ್ಚ ಭಾರತದ ಕನಸಿನಂತೆ, ಎಲ್ಲರಿಗೂ ಸ್ವಚ್ಚ ಮನಸ್ಸನ್ನೂ ಇತ್ತಂಡಗಳಿಗೂ ಶ್ರೀರಾಮ, ಅಲ್ಲಾ ಕರುಣಿಸಲಿ.