ವೋಟಿಂಗ್ ಮಾಡಿ ಕರ್ತವ್ಯ ಮೆರೆದ ಅನಾರೋಗ್ಯ ಪೀಡಿತರು, ನವ ವಧು
ಮಂಗಳೂರು ಏಪ್ರಿಲ್ 18:ಲೋಕಸಭಾ ಚುನಾವಣೆಗೆ ಮತದಾನ ಮಾಡುವಂತೆ ಚುನಾವಣಾ ಆಯೋಗ ಸೇರಿದಂತೆ ಆಯಾ ಜಿಲ್ಲಾಡಳಿತ ಮತದಾನ ಜಾಗೃತಿ ಅಭಿಯಾನ ನಡೆಸಿವೆ. ಮತದಾನದ ಮಹತ್ವವನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿವೆ. ಈ ನಡುವೆ ಕರಾವಳಿ ಜಿಲ್ಲೆಗಳಲ್ಲಿ ಮತದಾನದ ಮಹತ್ವವನ್ನು ಎಲ್ಲಾ ರೀತಿಯಲ್ಲೂ ಸಾರುವಂತೆ ಚಿತ್ರಣ ಕಂಡುಬಂದಿದೆ.
ಮೂರು ವಾರಗಳ ಹಿಂದೆ ಕುಂದಾಪುರದ ಗೋಳಿಯಂಗಡಿ ಸಮೀಪ ನಡೆದ ಅಪಘಾತದಲ್ಲಿ ಬಲವಾದ ಪೆಟ್ಟು ಬಿದ್ದು ನರಳುತ್ತಿರುವ ಉಳ್ತೂರಿನ ನಿವಾಸಿ ಜಯಶೀಲ ಪೂಜಾರಿ ಸ್ಟೆಕ್ಚರ್ ನಲ್ಲೇ ಬಂದು ತಮ್ಮ ಮತ ಚಲಾಯಿಸಿದ್ದಾರೆ. ಪೂಜಾರಿ ಅವರಿಗೆ ಮಗ್ಗುಲನ್ನು ಸಹ ಬಳಸಲು ಆಗದ ಸ್ಥಿತಿಯಲ್ಲಿದ್ದರೂ ಮಂಜಾನೆ 11:00 ಗಂಟೆಗೆ ಮೊದಲೇ ತಮ್ಮ ಮತ ಚಲಾಯಿಸಿ ಪ್ರೇರಣೆಯಾಗಿದ್ದಾರೆ.
ನಗರದ ಕೋಡಿಯಾಲ್ ಬೈಲ್ ನಲ್ಲಿರುವ ಮತಗಟ್ಟೆಗೆ ಅನಾರೋಗ್ಯ ಪೀಡಿತ ರೋಗಿಯೊಬ್ಬರು ಬಂದು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಮತ ಕೇಂದ್ರಕ್ಕೆ ಆಕ್ಸಿಜನ್ ಸಿಲಿಂಡರ್ ನೊಂದಿಗೆ ಬಂದು ತಮ್ಮ ಮತ ಚಲಾಯಿಸಿ ತೆರಳಿದ್ದಾರೆ.

ಎಂಡೋಪೀಡಿತ ಕೂಡ ಮತ ಚಲಾವಣೆ ಮಾಡಿದ್ದು ಬೆಳಕಿಗೆ ಬಂದಿದೆ. ಎಂಡೋ ಸಂತ್ರಸ್ತ ಪುರುಷೋತ್ತಮ ಗಣೇಶ (38) ಮತ ಚಲಾಯಿಸಿದ್ದು, ಪುರುಷೋತ್ತಮ ಗಣೇಶ ಪುತ್ತೂರಿನ ಕೃಷ್ಣನಗರ ಬೂತ್ ನಲ್ಲಿ ಮತದಾನ ಮಾಡಿದರು. ಅವರು ವೀಲ್ ಚೇರ್ ಮೂಲಕ ಆಗಮಿಸಿ ಮತ ಚಲಾವಣೆ ಮಾಡಿದರು. ಪುರುಷೋತ್ತಮ್ ಲೋಕಸಭೆಗೆ ಇದೇ ಪ್ರಥಮ ಬಾರಿಗೆ ಮತ ಚಲಾಯಿಸಿದ್ದಾರೆ.

ಅನಾರೋಗ್ಯ ಪೀಡಿತರು ಮಾತ್ರವಲ್ಲದೇ, ನವ ಜೀವನಕ್ಕೆ ಕಾಲಿರಿಸುವ ಮೊದಲು ನವ ವಧು ವರರರು ತಮ್ಮ ಹಕ್ಕನ್ನು ಚಲಾಯಿಸಿ ಮದುವೆ ಮಂಟಪಕ್ಕೆ ತರಳಿದ್ದಾರೆ. ಮದುವೆ ಮಂಟಪಕ್ಕೆ ತೆರಳುವ ಮುನ್ನ ಬಂಟ್ವಾಳದ ಸೂರ್ಯ ನಿವಾಸಿ ನವ್ಯ ತಮ್ಮ ಮತ ಚಲಾಯಿಸಿದ್ದಾರೆ. ಸೂರ್ಯ ನಿವಾಸಿ ಕೂಸಪ್ಪ ಗೌಡರ ಪುತ್ರಿ ನವ್ಯ ಇಂದು ಸೂರ್ಯ ಸರಕಾರಿ ಶಾಲೆಯಲ್ಲಿ ಮತ ಚಲಾವಣೆ ಮಾಡಿ ನಂತರ ಉಪ್ಪಿನಂಗಡಿ ಮದುವೆ ಮಂಟಪಕ್ಕೆ ತೆರಳಿದರು.












Click it and Unblock the Notifications