ಎಲ್ಲವೂ ಅಂದುಕೊಂಡಂತೆ ಆದರೆ ಶೀಘ್ರವೇ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತ
Recommended Video
ಮಂಗಳೂರು, ಆಗಸ್ಟ್ 30: ಕಡಲತಡಿಯ ಮಂಗಳೂರು ಹಾಗೂ ರಾಜ್ಯ ರಾಜಧಾನಿ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಇದೀಗ ಬಂದ್ ಆಗಿದೆ. ಕಳೆದ 20 ದಿನಗಳಿಂದ ಬಂದ್ ಆಗಿರುವ ಮಂಗಳೂರು - ಬೆಂಗಳೂರಿನ ಈ ಪ್ರಮುಖ ಸಂಪರ್ಕ ಕೊಂಡಿ ಯಾವಾಗ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ಬಕ ಪಕ್ಷಿಗಳಂತೆ ಜನರು ಕಾದು ಕುಳಿತಿದ್ದಾರೆ.
ಗುಡ್ಡ ಕುಸಿತದ ಸರಣಿ ಘಟನೆಗಳು ಸಂಭವಿಸಿದ ಪರಿಣಾಮ ಅಪಾಯದ ಆತಂಕದ ನಡುವೆ ಹೆದ್ದಾರಿಯನ್ನು ಬಂದ್ ಮಾಡಲಾಗಿತ್ತು. ಆದರೆ ಕಾಮಗಾರಿಗಳು ಮುಕ್ತಾಯ ಹಂತದಲ್ಲಿದ್ದು, ಈಗ ಸದ್ಯದಲ್ಲೇ ಶಿರಾಡಿ ಘಾಟ್ ಸಂಚಾರಕ್ಕೆ ಮುಕ್ತಗೊಳ್ಳುವ ಎಲ್ಲಾ ಸೂಚನೆಗಳು ಗೋಚರಿಸತೊಡಗಿದೆ.
ನೋಡಿ ಸ್ವಾಮೀ ಚಾರ್ಮಾಡಿ ಘಾಟ್ ಅವಸ್ಥೆ: ನಾವೇನು ಊರಿಗೆ ಹೋಗೋದು ಬೇಡ್ವಾ?
ಈ ಹಿಂದೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ರಸ್ತೆ ಕುಸಿಯುವ ಭೀತಿ ಎದುರಾಗಿತ್ತು. ಘಾಟ್ ರಸ್ತೆಯಲ್ಲಿ 6 ಕಡೆಗಳಲ್ಲಿ ಭೂ ಕುಸಿತ ಉಂಟಾಗಿ ಒಂದೆಡೆ ರಸ್ತೆ ಕೆಳಗಿನ ಮಣ್ಣು ಜರಿದ್ದಿತ್ತು. ಇನ್ನೊಂದೆಡೆ ಭಾರೀ ಗುಡ್ಡ ಜರಿದು ಕಲ್ಲುಬಂಡೆ ಸೇರಿದಂತೆ ಭಾರೀ ಪ್ರಮಾಣದ ಮಣ್ಣು ರಸ್ತೆಗೆ ಬಿದ್ದಿತ್ತು.
ಶಿರಾಡಿ ಘಾಟ್ 'ಬಂದ್' ಹಿಂದೆ ಭಾರೀ ಗುಮಾನಿ: ತುರ್ತಾಗಿ ಆಗಬೇಕಿದೆ 'ಸತ್ಯ ಶೋಧನೆ'
ಈ ಹಿನ್ನೆಲೆಯಲ್ಲಿ ಶಿರಾಡಿ ಘಾಟ್ ನಾಳೆ ತೆರೆಯುತ್ತದೆ, ಐದು ತಿಂಗಳ ಬಳಿಕ ತೆರೆಯುತ್ತದೆ ಎನ್ನುವ ಉಹಾಪೋಹಗಳು ಹರಡುತ್ತಿದ್ದವು. ಆದ್ದರಿಂದ ಶಿರಾಡಿ ಘಾಟ್ ರಸ್ತೆಯ ಇಂದಿನ ಸ್ಥಿತಿಗತಿಯ ಕುರಿತ ವಿಸ್ತೃತ ವರದಿಯನ್ನು ಇಲ್ಲಿ ಕೊಡಲಾಗಿದೆ.
ಕಾಂಕ್ರೀಟ್ ರಸ್ತೆಯೇ ಕುಸಿದು ಬೀಳುವ ಅಪಾಯ
ಕಳೆದ 20 ದಿನಗಳಿಂದ ಮಂಗಳೂರು ಹಾಗೂ ಬೆಂಗಳೂರನ್ನು ಸಂಪರ್ಕಿಸುವ ಪ್ರಮುಖ ಸಂಪರ್ಕ ರಸ್ತೆ ರಾಷ್ಟ್ರೀಯ ಹೆದ್ದಾರಿ 75 ರ ಶಿರಾಡಿ ಘಾಟ್ ನಲ್ಲಿ ಗುಡ್ಡ ಕುಸಿತದ ಘಟನೆಗಳು ನಡೆದ ಹಿನ್ನೆಲೆಯಲ್ಲಿ ಅಪಾಯವನ್ನು ಪರಿಗಣಿಸಿ ಈ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು.
ಭಾರೀ ಮಳೆಯ ಕಾರಣ ಒಂದೆಡೆ ರಸ್ತೆಯ ಕೆಳ ಭಾಗದಿಂದ ಮಣ್ಣು ಕುಸಿಯುತ್ತಿದ್ದರೆ, ಇನ್ನೊಂದೆಡೆ ಗುಡ್ಡ ಕುಸಿದು ರಸ್ತೆಯ ಮೇಲೆ ಬೀಳುತ್ತಿತ್ತು. ಘಾಟ್ ರಸ್ತೆಯಲ್ಲಿ ಸರಣಿ ಗುಡ್ಡ ಕುಸಿತ ಘಟನೆ ನಡೆದು, ಇನ್ನು ಕೆಲವು ಕಡೆಗಳಲ್ಲಿ ಗುಡ್ಡಗಳು ಕುಸಿಯುವ ಅಪಾಯ ಎದುರಾಗಿತ್ತು.
ಮತ್ತೊಂದೆಡೆ ರಸ್ತೆಯ ತಡೆಗೋಡೆ ಕುಸಿದು ಬಿದ್ದವು. ಇತ್ತೀಚೆಗೆ ಅಡ್ಡಹೊಳೆಯಿಂದ ಕೆಂಪುಹೊಳೆಯವರೆಗೆ ಘಾಟ್ ನ 13 ಕಿಲೋ ಮೀಟರ್ ರಸ್ತೆಯ ಸಂಪೂರ್ಣ ಕಾಂಕ್ರೀಕರಣ ಕಾಮಗಾರಿಯೂ ಮುಗಿದಿತ್ತು. ಆದರೆ ಈ ರಸ್ತೆಯ ಮೂರು ತಿರುವುಗಳಲ್ಲಿ ಕಾಂಕ್ರೀಟ್ ರಸ್ತೆಗೆ ನಿರ್ಮಿಸಿದ ತಡೆಗೋಡೆ ಜಾರಿ ಕೆಂಪುಹೊಳೆ ಸೇರಿತ್ತು. ಈ ಹಿನ್ನೆಲೆಯಲ್ಲಿ ಈ ರಸ್ತೆಯಲ್ಲಿ ವಾಹನ ಸಂಚಾರ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು.
ಭಾರೀ ಮಳೆ ಸುರಿಯುತ್ತಿದ್ದ ಕಾರಣ ರಸ್ತೆಯ ತಳ ಭಾಗದಲ್ಲಿ ನೀರಿನ ಕೊರೆತ ಉಂಟಾಗಿತ್ತು. ಇದರಿಂದಾಗಿ ಕಾಂಕ್ರೀಟ್ ರಸ್ತೆಯೇ ಕುಸಿದು ಬೀಳುವ ಅಪಾಯ ಎದುರಾಗಿತ್ತು. ತಡೆಗೋಡೆಗಳಿಲ್ಲದೆ ಈ ಘಾಟಿ ರಸ್ತೆಯಲ್ಲಿ ರಾತ್ರಿ ಸಮಯದಲ್ಲಿ ಪ್ರಯಾಣ ಅತ್ಯಂತ ಅಪಾಯ ಕಾರಿ ಎಂದು ಅಂದಾಜಿಸಲಾಗಿತ್ತು.
ಒಂದು ವಾರದಲ್ಲಿ ಎಲ್ಲಾ ಕಾಮಗಾರಿಗಳು ಮುಕ್ತಾಯ
ಕಳೆದ 20 ದಿನಗಳಿಂದ ಘಾಟಿ ರಸ್ತೆ ಬಂದ್ ಮಾಡಿ ರಸ್ತೆ ಮೇಲೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣು ಹಾಗು ಕಲ್ಲು ಬಂಡೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಲಾಗಿತ್ತು. 6 ಜೆಸಿಬಿ ಯಂತ್ರಗಳ ಸಹಾಯದಿಂದ ಈಗಾಗಲೇ ರಸ್ತೆ ಮೇಲೆ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣನ್ನು ತೆರವುಗೊಳಿಸಲಾಗಿದೆ.
ರಸ್ತೆಗಳ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಕುಸಿದಿದ್ದ ರಸ್ತೆ ತಿರುವುಗಳ ತಡೆಗೋಡೆಗಳನ್ನು ನಿರ್ಮಿಸಲಾಗುತ್ತಿದೆ. ಈ ಅಪಾಯಕಾರಿ ತಿರುವುಗಳಲ್ಲಿ ರಿಫ್ಲೆಕ್ಟರ್ಸ್ ಗಳನ್ನು ಅಳವಡಿಸುವ ಕಾರ್ಯ ನಡೆಯಬೇಕಿದೆ. ಅಲ್ಲದೆ ಗುಂಡ್ಯಾ ಗಡಿಭಾಗದಿಂದ ಮಾರನಹಳ್ಳಿವರೆಗೆ ಕುಸಿದಿದ್ದ ರಸ್ತೆಯನ್ನು ದುರಸ್ತಿಗೊಳಿಸಲಾಗಿದೆ.
ಒಂದೆಡೆ ಭಾರೀ ಗಾತ್ರದ ಗುಡ್ಡಗಳಿಂದ ಮಣ್ಣಿನ ಜೊತೆಗೆ ರಸ್ತೆಗೆ ಬಂದು ಬಿದ್ದಿದ್ದ ಬಹೃತ್ ಗಾತ್ರದ ಬಂಡೆಗಳನ್ನು ತೆರವುಗೊಳಿಸಲಾಗಿದೆ. ನಿರ್ಮಾಣಗೊಂಡಿರುವ ರಸ್ತೆ ತಡೆಗೋಡೆಗಳ ಕ್ಯುರಿಂಗ್ ಕಾರ್ಯ ನಡೆಯುತ್ತಿದ್ದು, ಒಂದು ಮಾಹಿತಿಯ ಪ್ರಕಾರ ಒಂದು ವಾರದಲ್ಲಿ ಎಲ್ಲಾ ಕಾಮಗಾರಿಗಳು ಮುಕ್ತಾಯಗೊಳ್ಳಲಿದೆ.
ಶಿರಾಡಿ ಘಾಟ್ ಬಂದ್: ಕೈಕೊಟ್ಟ ಸಚಿವ ರೇವಣ್ಣನವರ ವಾಸ್ತುಶಾಸ್ರ!
ಇಂಜಿನಿಯರ್ ಸುಬ್ಬರಾಮ್ ಹೊಳ್ಳ ಹೇಳುವಂತೆ
ಹಿರಿಯ ಎಂಜಿನಿಯರ್ ಗಳು ಹಾಗೂ ಅಧಿಕಾರಿಗಳು ಕಾಮಗಾರಿಗಳ ಬಗ್ಗೆ ಪರಿಶೀಲನೆ ನಡೆಸಿ ರಸ್ತೆ ಸುರಕ್ಷತೆ ಬಗ್ಗೆ ಪರೀಕ್ಷೆ ನಡೆಸಲಿದ್ದು, ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಹಿರಿಯ ಎಂಜಿನಿಯರ್ ಗಳಿಬ್ಬರೂ ನಿನ್ನೆ ಶಿರಾಡಿ ಘಾಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆದ ಸುಬ್ಬರಾಮ್ ಹೊಳ್ಳ ಅವರನ್ನು ಒನ್ ಇಂಡಿಯಾ ಸಂಪರ್ಕಿಸಿದಾಗ ಶಿರಾಡಿ ಘಾಟ್ ನಲ್ಲಿ ಈಗಾಗಲೇ ಶೇಕಡ 95 ರಷ್ಟು ಕಾಮಗಾರಿ ಮುಕ್ತಾಯವಾಗಿದೆ. ರಸ್ತೆಯಲ್ಲಿ ಬಿದ್ದಿದ್ದ ಭಾರೀ ಪ್ರಮಾಣದ ಮಣ್ಣು , ಬಂಡೆಕಲ್ಲುಗಳನ್ನು ತೆರವುಗೊಳಿಸಲಾಗಿದೆ.
ಇಲಾಖೆಯ ಹಿರಿಯ ಎಂಜಿನಿಯರ್ ಗಳು ಶಿರಾಡಿ ಘಾಟ್ ರಸ್ತೆಗೆ ಭೇಟಿ ಪರಿಶೀಲನೆ ನಡೆಸಿದ್ದಾರೆ. ಅವರಿಂದ ವರದಿಗಾಗಿ ಕಾಯಲಾಗುತ್ತಿದೆ. ರಸ್ತೆ ಸಂಚಾರಕ್ಕೆ ಸುರಕ್ಷಿತವಾಗಿದೆ ಎಂಬ ವರದಿ ಬರಬೇಕಿದೆ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಅತಿ ಶೀಘ್ರವಾಗಿ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ಮುಕ್ತಗೊಳ್ಳಲಿದೆ.
ರಸ್ತೆಯಲ್ಲಿಯೇ ಊಟ, ನಿದ್ದೆ
ಈ ನಡುವೆ ಕಳೆದ 20 ದಿನಗಳಿಂದ ಟ್ರಕ್ ಚಾಲಕರು ಶಿರಾಡಿ ಘಾಟ್ ನಲ್ಲಿ ಸಿಲುಕಿ ಕೊಂಡಿದ್ದು ಇತ್ತ ಚಾರ್ಮಾಡಿ ಘಾಟ್ ನಲ್ಲೂ ಹೋಗಲಾರದೆ ಗಾಳಿ-ಮಳೆಗೆ ರಸ್ತೆಯಲ್ಲೇ ದಿನದೂಡುತ್ತಿದ್ದಾರೆ.
ಪಂಜಾಬ್ ಮೂಲದ 7 ಟ್ರಕ್ ಚಾಲಕರು ಶಿರಾಡಿ ಘಾಟ್ ನ ಚೆಕ್ ಪೋಸ್ಟ್ ಗುಂಡ್ಯಾ ಬಳಿ ರಸ್ತೆಯಲ್ಲೇ ಪ್ಲಾಸ್ಟಿಕ್ ಟೆಂಟ್ ನಿರ್ಮಿಸಿದ್ದು, ರಸ್ತೆಯಲ್ಲಿಯೇ ಊಟ, ನಿದ್ದೆ ಮಾಡುತ್ತಿದ್ದಾರೆ. ಇತ್ತ ಕೈಯಲ್ಲಿ ಹಣವೂ ಖಾಲಿಯಾಗಿದ್ದು, ಮಳೆಗೆ ಮಲಗೋಕೂ ಆಗದೆ ಒದ್ದಾಡುತ್ತಿದ್ದು ಘಾಟ್ ರಸ್ತೆ ತೆರವುಗೊಳ್ಳುವ ದಿನವನ್ನು ಕಾಯುತ್ತಿದ್ದಾರೆ.