ಪಿಎಫ್ಐ ನಿಷೇಧ; ಹತ್ಯೆಯಾದ ಶರತ್ ಮಡಿವಾಳ ತಂದೆ ಪ್ರತಿಕ್ರಿಯೆ ಹೀಗಿದೆ
ಮಂಗಳೂರು, ಸೆ. 28: ದೇಶಾದ್ಯಂತ ಪಿಎಫ್ಐ ನಿಷೇಧವಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಬಿಜೆಪಿ, ಹಿಂದೂ ಪರ ಸಂಘಟನೆಗಳು ಖುಷಿ ವ್ಯಕ್ತಪಡಿಸಿವೆ. ರಾಜ್ಯದಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಹತ್ಯೆಯಾದ ಹಿಂದೂ ಸಂಘಟನೆಯ ಕಾರ್ಯಕರ್ತರ ಹೆತ್ತವರೂ ಕೇಂದ್ರದ ಈ ನಿರ್ಧಾರಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಪಿಎಫ್ಐ ಶಾಶ್ವತವಾಗಿ ನಿಷೇಧವಾಗಬೇಕು ಅಂತಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
2017 ಜುಲೈ4 ರಂದು ಬಂಟ್ವಾಳದ ಬಿಸಿರೋಡ್ ನಲ್ಲಿ ಪಿಎಫ್ಐ ಕಾರ್ಯಕರ್ತರಿಂದ ಹತ್ಯೆಯಾದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಕೂಡಾ ಕೇಂದ್ರ ಸರ್ಕಾರದ ಈ ನಿರ್ಧಾರಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ.
ಪಿಎಫ್ಐ ನಿಷೇಧದ ಜೊತೆಗೆ ಅದರ ಆಸ್ತಿ, ಬ್ಯಾಂಕ್ ಖಾತೆಗಳೂ ಮುಟ್ಟುಗೋಲು: ಕೇಂದ್ರದ ಕ್ರಮ
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಬೆಳಗ್ಗೆ ಮಾಧ್ಯಮಗಳಲ್ಲಿ ಪಿಎಫ್ಐ ನಿಷೇಧದ ಕುರಿತು ಸುದ್ದಿ ನೋಡಿ ಬಹಳ ಖುಷಿಯಾಗಿದೆ. ನನ್ನ ಮಗ ಶರತ್ ಮಡಿವಾಳ ಯಾವ ತಪ್ಪು ಮಾಡದ ಅಮಾಯಕ. ಅವನನ್ನು ಪಿಎಫ್ಐನವರು ಕೊಲೆ ಮಾಡಿದ್ದಾರೆ. ಪಿಎಫ್ಐ ನವರು ಹಲವು ಅಮಾಯಕರನ್ನು ಹತ್ಯೆ ಮಾಡಿದ್ದಾರೆ. ಕೇಂದ್ರ ಸರ್ಕಾರ ಪಿಎಫ್ಐ ಅನ್ನು ಶಾಶ್ವತವಾಗಿ ನಿಷೇಧ ಮಾಡಬೇಕು" ಎಂದು ತನಿಯಪ್ಪ ಮಡಿವಾಳ ಆಗ್ರಹಿಸಿದ್ದಾರೆ.
"ಪಿಎಫ್ಐ ನಿಷೇಧ ಆಗಬೇಕು ಎಂದು 2017 ರಿಂದಲೂ ನಾನು ಸಾಕಷ್ಟು ಬಾರಿ ಜನ ಪ್ರತಿನಿಧಿಗಳಿಗೆ ಮನವಿ ಮಾಡಿದ್ದೆ. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಮನವಿ ಮಾಡಿದ್ದೇನೆ. ಈಗ ನನ್ನ ಆಸೆ ಪೂರೈಸಿದೆ. ಶರತ್ ಮಡಿವಾಳ ಹತ್ಯೆ ಪ್ರಕರಣದಲ್ಲಿ 18 ಮಂದಿ ಪಿಎಫ್ಐ ಕಾರ್ಯಕರ್ತರನ್ನು ಬಂಧನ ಮಾಡಲಾಯಿತು. ಎಲ್ಲರೂ ಬೇಲ್ ಪಡೆದು ಹೊರಗೆ ಬಂದಿದ್ದಾರೆ. ಈ ಪ್ರಕರಣದ ಎಫ್ಐಆರ್ ಸರಿಯಾಗಿ ದಾಖಲಾಗಿಲ್ಲ. ಪೊಲೀಸರು ತನಿಖೆ ವೇಳೆ ನನ್ನ ಹೇಳಿಕೆಯನ್ನು ಪಡೆಯಲಿಲ್ಲ" ಎಂದುದ ತನಿಯಪ್ಪ ಮಡಿವಾಳ ಆರೋಪಿಸಿದ್ದಾರೆ.
"ಪಿಎಫ್ಐ ಸಂಘಟನೆಯನ್ನು ಶಾಶ್ವತ ವಾಗಿ ನಿಷೇಧ ಮಾಡಬೇಕು. ಕೇವಲ ಐದು ವರ್ಷ ನಿಷೇಧ ಮಾಡಿದರೆ ಅವರು ಮತ್ತೆ ಎದ್ದು ನಿಲ್ಲುತ್ತಾರೆ. ಪಿಎಫ್ಐ ಅನ್ನು ಶಾಶ್ವತವಾಗಿ ನಿಷೇಧ ಮಾಡಿದರೆ ಮಾತ್ರ ನೆಮ್ಮದಿಯಿಂದ ಇರಲು ಸಾಧ್ಯ. ಪಿಎಫ್ಐ ನವರು ಅಮಾಯಕರನ್ನೇ ಹುಡುಕಿ ಹತ್ಯೆ ಮಾಡುತ್ತಾರೆ. ಹಿಂದೂ ಧರ್ಮ ಅಂತಾ ಹೋಗುವ ಯುವಕರನ್ನು ಟಾರ್ಗೆಟ್ ಮಾಡುತ್ತಾರೆ. ನನ್ನ ಮಗ ಭಗವಾಧ್ವಜ ಹಿಡಿದ ಎನ್ನುವ ಏಕ ಮಾತ್ರ ಕಾರಣಕ್ಕೆ ಕೊಲೆ ಮಾಡಿದ್ದಾರೆ. ಶರತ್ ಧ್ವಜ ಹಿಡಿದು ಸಾಗುವ ಫೋಟೋವನ್ನು ಕೊಲೆಗಡುಕರು ತೆಗೆದಿದ್ದರು" ಎಂದು ಶರತ್ ಮಡಿವಾಳ ಅವರ ತಂದೆ ತನಿಯಪ್ಪ ಮಡಿವಾಳ ಆರೋಪಿಸಿದ್ದಾರೆ.