ಮಂಗಳೂರು:ಆಹಾರ ಸಚಿವರ ಕ್ಷೇತ್ರದಲ್ಲೇ ಪಡಿತರ ವಿತರಣೆಗೆ ವಿಘ್ನ
ಮಂಗಳೂರು, ಸೆಪ್ಟೆಂಬರ್ 22 : ಸರ್ವರ್ ಸಮಸ್ಯೆಯ ನೆಪವೊಡ್ಡಿ ಕಳೆದ ನಾಲ್ಕು ದಿನಗಳಿಂದ ಜನರಿಗೆ ಪಡಿತರ ನೀಡದೆ ಸತಾಯಿಸುತ್ತಿರುವ ಘಟನೆ ಆಹಾರ ಸಚಿವರ ತವರು ಕ್ಷೇತ್ರದಲ್ಲಿ ನಡೆದಿದೆ.
ಆಹಾರ ಸಚಿವ ಯುಟಿ ಖಾದರ್ ಪ್ರತಿನಿಧಿಸುವ ಉಳ್ಳಾಲ ವಿಧಾನಸಭಾ ಕ್ಷೇತ್ರದ ತೊಕ್ಕೊಟ್ಟುವಿನ ನ್ಯಾಯಬೆಲೆ ಅಂಗಡಿಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸರ್ವರ್ ಸಮಸ್ಯೆಯ ನೆಪವೊಡ್ಡಿ ಇಲ್ಲಿನ ಪಡಿತರ ಅಂಗಡಿ ಸಿಬ್ಬಂದಿ ಜನರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ನಾಳೆಯೂ ಸಮಸ್ಯೆ ಪುನರಾವರ್ತನೆ ಆದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದಾರೆ.

ಮಂಗಳೂರು ನಗರಕ್ಕೆ ತಾಗಿಕೊಂಡಿರುವ ಪ್ರದೇಶದಲ್ಲಿಯೇ ಈ ರೀತಿ ಸಮಸ್ಯೆಯಾದರೆ ಇನ್ನೂ ಗ್ರಾಮೀಣ ಪ್ರದೇಶದಲ್ಲಿ ಪಡಿತರ ಅಂಗಡಿಯೇ ಮುಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆಹಾರ ಸಚಿವರ ಊರಲ್ಲಿಯೇ ಕಳೆದ ನಾಲ್ಕು ದಿನಗಳಿಂದ ಸರ್ವರ್ ಸಮಸ್ಯೆ ಬಗೆಹರಿಯದಿರೋದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ ಖಾದರ್ ಅವರ ತವರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೇ ಆಹಾರ ದೊರೆಯದಿರುವುದು ರಾಜ್ಯ ಪಡಿತರ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.












Click it and Unblock the Notifications