ಉಳ್ಳಾಲದಲ್ಲಿ ಭಾರೀ ಕಡಲ್ಕೊರೆತ, ಜನರಿಗೆ ಆತಂಕ
ಮಂಗಳೂರು, ಜುಲೈ 01 : ಭಾರೀ ಮಳೆಯಿಂದಾಗಿ ಉಳ್ಳಾಲ ಹಾಗೂ ಉಚ್ಚಿಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಕಡಲ್ಕೊರೆತದಿಂದಾಗಿ ಹಲವಾರು ಮನೆಗಳು ಅಪಾಯಕ್ಕೆ ಸಿಲುಕಿವೆ. 5 ವರ್ಷಗಳಿಂದ ಉಚ್ಚಿಲ ಸಮುದ್ರ ತೀರದಲ್ಲಿರುವ ಕಡಲ್ಕೊರೆತ ಈಗ ರೌದ್ರಾವತಾರ ತಾಳಿದ್ದು, ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ನ್ಯೂ ಉಚ್ಚಿಲದಿಂದ-ಉಚ್ಚಿಲ ಕೋಟೆವರೆಗಿನ ಸಮುದ್ರ ತೀರದ ಜನರು ಭಯಭೀತರಾಗಿದ್ದಾರೆ. ಉಳ್ಳಾಲದಲ್ಲಿ ಒಂದು ಮನೆ, ಉಚ್ಚಿಲದಲ್ಲಿ ಎರಡು ಮನೆಗಳು ತೀರಾ ಅಪಾಯದಲ್ಲಿವೆ. ಉಳಿದಂತೆ ಪರಿಸರದ ಸುಮಾರು 50 ಮನೆಗಳು ಕುಸಿತದ ಭೀತಿಯಲ್ಲಿವೆ. [ಕಡಲಕಿನಾರೆಯ ಕಥಾ ಪ್ರಸಂಗಗಳು]

ಉಳ್ಳಾಲದ ಕೋಟೆಪುರ ಬಳಿಯ ಅಬೂಬಕ್ಕರ್ ಅವರ ಮನೆ ಕುಸಿಯುವ ಭೀತಿಯಲ್ಲಿದ್ದು, ಮನೆಮಂದಿ ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿದ್ದಾರೆ. ಉಚ್ಚಿಲದಲ್ಲಿ ಮನೆಯ ಅಂಗಳಕ್ಕೆ ಬಂದ ಸಮುದ್ರದ ಅಲೆಯಿಂದ ಮಹಿಳೆಯೊಬ್ಬರು ಬಿದ್ದು ಗಾಯಗೊಂಡಿದ್ದಾರೆ. [ಕರಾವಳಿಯಲ್ಲಿ ಮಳೆ ಆರ್ಭಟ : ಸಮುದ್ರ ಕೊರೆತದ ಭೀತಿ]
ಐದು ವರ್ಷಗಳಿಂದ ಕಡಲ್ಕೊರೆತ ಇದ್ದರೂ ಈವರೆಗೆ ಜನಪ್ರತಿನಿಧಿಗಳು ಪರಿಶೀಲಿಸಿ ಭರವಸೆ ನೀಡಿದ್ದಾರೆಯೇ ಹೊರತು ಸಮಸ್ಯೆ ಪರಿಹಾರವಾಗಿಲ್ಲ. ಪ್ರತಿ ವರ್ಷವೂ ಇಲ್ಲಿನ ಜನರು ಕಡಲ್ಕೊರೆತದಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸಚಿವ ಯು.ಟಿ.ಖಾದರ್ ಭೇಟಿ : ಸಚಿವ ಯು.ಟಿ.ಖಾದರ್ ಅವರು ಗುರುವಾರ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಗಳಾದ ಕೋಟೆಪುರ, ಮೊಗವೀರ ಪಟ್ನಾ, ಸೋಮೇಶ್ವರ ಉಚ್ಚೀಲಾ, ಕಿಲಿರಿಯಾ ನಗರ , ಮುಕ್ಕಚ್ಚೇರಿ ಮೊದಲಾದ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದರು.
'ಉಚ್ಚೀಲದಲ್ಲೂ ಶಾಶ್ವತ ಕಾಮಗಾರಿ ನಡೆಸುವ ಸಲುವಾಗಿ ರಾಜ್ಯದಿಂದ ಕೇಂದ್ರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಈ ಭಾಗದ ಸಂತ್ರಸ್ತರು ನಿವೇಶನಕ್ಕಾಗಿ ಸರಕಾರಕ್ಕೆ ಮನವಿ ಮಾಡಿದ್ದು, ಸಂತ್ರಸ್ತರ ಪಟ್ಟಿಯನ್ನು ಜಿಲ್ಲಾಧಿಕಾರಿಗೆ ನೀಡಿದರೆ ಕಂದಾಯ ಇಲಾಖೆ ಮೂಲಕ ಪರಿಶೀಲಿಸಿ ನಿವೇಶನ ಕಲ್ಪಿಸಲಾಗುವುದು' ಎಂದರು.
ಸಂತ್ರಸ್ತರ ಅಸಮಾಧಾನ : ಸಮುದ್ರ ಕಿನಾರೆಯಲ್ಲಿ ವಾಸವಿರುವ ಸಂತ್ರಸ್ತರು ಕಡಲ್ಕೊರೆತಕ್ಕೆ ಸಂಬಂಧಿಸಿ ನಡೆಯುತ್ತಿರುವ ಕಾಮಗಾರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಮಳೆಗಾಲದಲ್ಲಿ ಎಲ್ಲರೂ ಭರವಸೆ ನೀಡಿ ಹೋಗುತ್ತಾರೆ. ನಂತರ ಆ ಭಾಗಕ್ಕೆ ಯಾರೂ ಬರುವುದಿಲ್ಲ.
ಉಳ್ಳಾಲ, ಕೋಟೆಪುರ, ಮೊಗವೀರ ಪಟ್ನಾ ದಲ್ಲಿ ಎಡಿಬಿ ಯೋಜನೆಯಡಿ ನಡೆಯುತ್ತಿರುವ ಶಾಶ್ವತ ಕಡಲ್ಕೊರೆತ ತಡೆ ಕಾಮಗಾರಿ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಸಮುದ್ರಕ್ಕೆ ಹಾಕಲಾದ ಕೋಟಿಗಟ್ಟಲೆ ಮೌಲ್ಯದ ಮರಳು ಚೀಲಗಳು ಸಮುದ್ರ ಪಾಲಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.












Click it and Unblock the Notifications