ಉಳ್ಳಾಲದಲ್ಲಿ ಹೆಚ್ಚಿದ ಉಬ್ಬರ, ಕಡಲ್ಕೊರೆತ ಭೀತಿ; ಆತಂಕದಲ್ಲಿ ಜನ
ಉಳ್ಳಾಲ, ಜೂನ್ 2: ಮುಂಗಾರು ಸಮೀಪಿಸುತ್ತಿದ್ದಂತೆ ಮಂಗಳೂರು ಹಾಗೂ ಉಡುಪಿಯ ಸಮುದ್ರ ತೀರ ಪ್ರದೇಶಗಳಲ್ಲಿ ಉಬ್ಬರ ಹೆಚ್ಚಾಗಿದೆ. ಉಳ್ಳಾಲದ ಕಿಲೇರಿಯ ನಗರ, ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಮನೆ ಹಾಗೂ ಮಸೀದಿಗಳಿಗೆ ಬುಧವಾರ ಮಧ್ಯಾಹ್ನದಿಂದ ಅಲೆಗಳು ಅಪ್ಪಳಿಸಲು ಆರಂಭವಾಗಿದ್ದು, ಜನ ಭೀತಿ ಎದುರಿಸುತ್ತಿದ್ದಾರೆ.
ಕಿಲೇರಿಯ ನಗರದಲ್ಲಿರುವ 10ಕ್ಕೂ ಅಧಿಕ ಮನೆಗಳು, ಮಸೀದಿಗಳಿಗೆ ಅಲೆಗಳು ಅಪ್ಪಳಿಸಲು ಆರಂಭವಾಗಿದೆ. ಮಳೆ ಆರಂಭವಾಗುತ್ತಿದಂತೆ ಸಮುದ್ರದ ಅಲೆಗಳ ರಭಸ ಮತ್ತಷ್ಟು ಹೆಚ್ಚಾಗುವುದರಿಂದ ಸ್ಥಳೀಯರ ಆತಂಕಕ್ಕೀಡಾಗಿದ್ದಾರೆ.

ಬ್ರೇಕ್ ವಾಟರ್ ನಿಂದ ತೊಂದರೆ
ಕೋಟೆಪುರ, ಮೊಗವೀರ ಪಟ್ನ ಭಾಗದಲ್ಲಿ ಶಾಶ್ವತ ಬ್ರೇಕ್ ವಾಟರ್ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಸಮುದ್ರದ ಅಲೆಗಳು ಕಿಲೇರಿಯನಗರ, ಸುಭಾಷ್ ನಗರ, ಉಚ್ಚಿಲ, ಸೋಮೇಶ್ವರ ಭಾಗದಲ್ಲಿ ಅಪ್ಪಳಿಸಲು ಆರಂಭವಾಗಿದೆ. ಏಕಕಾಲದಲ್ಲಿ ಉಳ್ಳಾಲದಿಂದ ತಲಪಾಡಿ ಭಾಗದವರೆಗೂ ಸುರಕ್ಷಾ ಕ್ರಮ ಕೈಗೊಂಡು ಕಾಮಗಾರಿ ಆರಂಭಿಸಿದ್ದರೆ ಇಂತಹ ತೊಂದರೆ ಮರುಕಳಿಸುತ್ತಿರಲಿಲ್ಲ ಅನ್ನುವುದು ಸ್ಥಳೀಯರ ಆರೋಪ.

"ಕಳೆದ ವರ್ಷವೂ ಪರಿಹಾರದ ಭರವಸೆ ಮಾಧ್ಯಮಗಳಲ್ಲಿ ಮಾತ್ರ ಕಂಡಿದ್ದೇವೆ. ಆದರೆ ಫಲಾನುಭಾವಿಗಳಿಗೆ ಮಾತ್ರ ಇನ್ನೂ ತಲುಪಿಲ್ಲ. ಸಚಿವರು, ಸಂಬಂಧಿಸಿದ ಅಧಿಕಾರಿಗಳು ಕೊಡಲೇ ಸ್ಥಳಕ್ಕೆ ಭೇಟಿ ನೀಡಿ ಶಾಶ್ವತ ಕ್ರಮ ಕೈಗೊಳ್ಳಬೇಕಿದೆ," ಎಂದು ಸ್ಥಳೀಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.












Click it and Unblock the Notifications