'ಸತ್ಯನಾರಾಯಣ ಪೂಜೆ' ಮಾಡಿ ಕೆಲಸ ಕಳ್ಕೊಂಡ ಯಾದವ ಸನಿಲ್
ಮಂಗಳೂರು, ಫೆಬ್ರವರಿ 10 : ಸತ್ಯನಾರಾಯಣ ಪೂಜೆ ಮಾಡಿಸುವುದು ಒಂದು ನಂಬಿಕೆ, ಆ ಮೂಲಕ ಒಳಿತಾಗಲಿ ಎಂಬುದು ಹಾರೈಕೆ. ಆದರೆ ಸತ್ಯನಾರಾಯಣ ಪೂಜೆ ಮಾಡಿದ ಕಾರಣಕ್ಕೇ ಇದ್ದ ಕೆಲಸ ಕಳೆದುಕೊಂಡ ಪ್ರಸಂಗವೊಂದು ಇಲ್ಲಿದೆ. ಆದರೆ ಈ ಘಟನೆ ನಡೆದದ್ದು ಭಾರತದಲ್ಲಿ ಅಲ್ಲ.
ಕೊಲ್ಲಿ ರಾಷ್ಟ್ರದಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿದ ಫಲವಾಗಿ 15 ವರ್ಷಗಳಿಂದಿದ್ದ ಉದ್ಯೋಗ ಕಳೆದುಕೊಂಡು, ಈಗ ಮಂಗಳೂರಿನಲ್ಲಿ ಗಾರೆ ಕೆಲಸ ಮಾಡುತ್ತಿರುವ ಪ್ರಸಂಗ ಬೆಳಕಿಗೆ ಬಂದಿದೆ. ಕುವೈತ್ ನಲ್ಲಿ ಸತ್ಯನಾರಾಯಣ ಪೂಜೆಯನ್ನು ಮಾಡಿ, ಅಲ್ಲಿ ಬಂಧನಕ್ಕೊಳಗಾಗಿ, ಭಾರತಕ್ಕೆ ವಾಪಸಾದ ವ್ಯಕ್ತಿ ತನ್ನ ಕುಟುಂಬ ನಿರ್ವಹಣೆಗೆ ಇದೀಗ ಗಾರೆ ಕೆಲಸದಲ್ಲಿ ಸಹಾಯಕರಾಗಿ ದುಡಿಯುತ್ತಿದ್ದಾರೆ.
ಮಂಗಳೂರು ಹೊರವಲಯದ ಕಿನ್ನಿಗೋಳಿ ಸಮೀಪದ ಏಳಿಂಜೆ ನಿವಾಸಿ ಯಾದವ ಸನಿಲ್ ಸಂಕಷ್ಟ ಸ್ಥಿತಿಯಲ್ಲಿರುವ ವ್ಯಕ್ತಿ. 15 ವರ್ಷ ಕುವೈತ್ ನಲ್ಲಿ ಕ್ಯಾಟರಿಂಗ್ ವೃತ್ತಿಯಲ್ಲಿ ಯಾದವ್ ಸನಿಲ್ ತಮ್ಮನ್ನು ತೊಡಗಿಕೊಂಡಿದ್ದರು. ಕಡು ಬಡತನದಲ್ಲೇ ಬೆಳೆದ ಯಾದವ್ ಸನಿಲ್, ಕುಟುಂಬ ನಿರ್ವಹಣೆಗೆ ಕಷ್ಟವಾದ ಕಾರಣ 2001ರಲ್ಲಿ ಕುವೈತ್ ಗೆ ತೆರಳಿದ್ದರು. ಮೂರು ಸಾವಿರ ಉದ್ಯೋಗಿಗಳನ್ನು ಹೊಂದಿರುವ ಪೈಲ್ ಎಂಬ ಕ್ಯಾಟರಿಂಗ್ ಸರ್ವೀಸ್ ನಲ್ಲಿ ತೊಡಗಿಸಿಕೊಂಡಿದ್ದರು.

15 ವರ್ಷ ವಿವಿಧ ಪೂಜೆ
ದೇವರು, ಧಾರ್ಮಿಕತೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದ ಯಾದವ್ ಸನಿಲ್, ಕುವೈತ್ ನಲ್ಲಿ ನವಚೇತನ ವೆಲ್ ಫೇರ್ ಅಸೋಸಿಯೇಷನ್ ಎಂಬ ಸಂಸ್ಥೆಯ ಮೂಲಕ 15 ವರ್ಷಗಳ ಕಾಲ ಪ್ರತೀ ವರ್ಷ ಸತ್ಯನಾರಾಯಣ ಪೂಜೆ, ಅಯ್ಯಪ್ಪ ಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದರು.

ಕೋಣೆಯಲ್ಲಿ ಕೂಡಿ ಹಾಕಿದ ಪೊಲೀಸರು
2015ರಲ್ಲಿಯೂ ಯಾದವ್ ಸನಿಲ್ ಸತ್ಯನಾರಾಯಣ ಪೂಜೆಯನ್ನು ಸಂಘದ ಸರ್ವ ಸದಸ್ಯರ ಸಹಕಾರದಿಂದ ಯಶಸ್ವಿಯಾಗಿ ನೆರವೇರಿಸಿದ್ದರು. ಆದರೆ ಪೂಜೆ ಮುಗಿದು ಕೆಲ ದಿನಗಳಲ್ಲೇ ಯಾದವ್ ಸನಿಲ್ ಆಘಾತಕಾರಿ ಸಂಗತಿ ಎದುರಾಯಿತು. ಕುವೈತ್ ಪೂಲೀಸರು ಯಾದವ್ ಸನಿಲ್ ಅವರ ಮನೆಗೆ ಏಕಾಏಕಿ ನುಗ್ಗಿ, ಯಾವುದೇ ಮಾಹಿತಿ ನೀಡದೆ ಕಣ್ಣಿಗೆ ಕಪ್ಪು ಬಟ್ಟೆಯನ್ನು ಕಟ್ಟಿ ಕರೆದುಕೊಂಡು ಹೋಗಿ ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ.

ಸನಿಲ್ ಮತ್ತು ಇತರ 11 ಮಂದಿಯನ್ನು ವಿಮಾನ ಹತ್ತಿಸಿದರು
14 ದಿನ ಒಂದು ಕೋಣೆಯಲ್ಲಿರಿಸಿ ನವಚೇತನ ವೆಲ್ ಫೇರ್ ಅಸೋಸಿಯೇಷನ್ ನಡೆಸುತ್ತಿದ್ದ ಪೂಜೆ ಮತ್ತು ದಾರ್ಮಿಕ ಕಾರ್ಯಕ್ರಮಗಳ ಬಗೆಗಿನ ಎಲ್ಲಾ ವಿವರಗಳನ್ನು ಪಡೆದುಕೊಂಡಿದ್ದಾರೆ. ಅಸೋಸಿಯೇಷನ್ ನ ಅಧ್ಯಕ್ಷ ಅಶೋಕ್ ಕೋಡಿಕಲ್ ಮತ್ತು ಪೂಜೆಯಲ್ಲಿ ಪಾಲ್ಗೊಂಡ ಪ್ರಮುಖ 11 ಮಂದಿ ವಿವರಗಳನ್ನು ಪಡೆದು, ಅವರನ್ನು ಸಹ ಬಂಧನದಲ್ಲಿರಿಸಿದ್ದಾರೆ. ಎಲ್ಲರ ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡು ವಿಚಾರಣೆ ಮುಗಿದ ಮೇಲೆ ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಕರೆತಂದು, ಭಾರತಕ್ಕೆ ಸಾಗಹಾಕಿದ್ದಾರೆ.

ಪೂಜೆ ಏನಿದ್ದರೂ ಭಾರತದಲ್ಲಿ ಮಾಡಿಕೊಳ್ಳಿ
ಆದರೆ, ಯಾದವ ಸನಿಲ್ ಸೇರಿ ಆ 11 ಮಂದಿಗೆ ತಮ್ಮನ್ನು ಯಾವ ಕಾರಣಕ್ಕಾಗಿ ಭಾರತಕ್ಕೆ ವಾಪಸ್ ಕಳುಹಿಸಿದ್ದಾರೆ ಎಂಬ ಸರಿಯಾದ ಕಾರಣ ಇದುವರೆಗೆ ದೊರಕಿಲ್ಲ. ಕುವೈತ್ ನ ಪೊಲೀಸ್ ಅಧಿಕಾರಿಯೊಬ್ಬರ ಬಳಿ ಯಾದವ ಸನಿಲ್ ಈ ಬಗ್ಗೆ ಕಾರಣ ಕೇಳಿದಾಗ, ನಿನ್ನ ಪೂಜೆ ಏನಿದ್ದರೂ ಭಾರತಕ್ಕೆ ಹೋಗಿ ಮಾಡು ಎಂಬ ಉತ್ತರ ಮಾತ್ರ ಸಿಕ್ಕಿತ್ತು.

ಗಾರೆ ಕೆಲಸ ಮಾಡುತ್ತಿದ್ದಾರೆ
2015ರಲ್ಲಿ ಭಾರತಕ್ಕೆ ಮರಳಿದ ಯಾದವ್ ಸನಿಲ್ ಮಂಗಳೂರು ಹೊರವಲಯದ ಕಿನ್ನಿಗೋಳಿಯ ಏಳಿಂಜೆಯಲ್ಲಿ ತನ್ನ ಸ್ವಂತ ಮನೆಯಲ್ಲಿ ವಾಸವಾಗಿದ್ದು, ಕುಟುಂಬ ನಿರ್ವಹಣೆಗೆ ಗಾರೆ ಕೆಲಸ ಮಾಡುತ್ತಿದ್ದಾರೆ. ಆಗಿನ ಘಟನೆಯಿಂದ ಮಾನಸಿಕವಾಗಿ ಕುಗ್ಗಿ ಮನೆಯಲ್ಲಿಯೇ ಇದ್ದ ಯಾದವ ಅವರನ್ನು ಸ್ಥಳೀಯ ರಘರಾಮ ಶೆಟ್ಟಿ ಎಂಬುವವರು ತನ್ನ ರಿಂಗ್ ತಯಾರಿಕಾ ಘಟಕಕ್ಕೆ ಕೆಲಸಕ್ಕೆ ಸೇರಿಸಿದ್ದಾರೆ. ಈ ವೃತ್ತಿ ಬಗ್ಗೆ ಅರಿವಿಲ್ಲದಿದ್ದರೂ ಯಾದವ್ ಸನಿಲ್ ಅವರು ಒಂದೂವರೆ ವರ್ಷದಿಂದ ಸಹಾಯಕರಾಗಿ ದುಡಿಯುತ್ತಿದ್ದಾರೆ.

ಕೇಂದ್ರ ಸರಕಾರದ ಮೊರೆ
ಕುವೈತ್ ನಲ್ಲಿ ಉದ್ಯೋಗದಲ್ಲಿದ್ದಾಗ ಅಲ್ಲಿ ದುಡಿದು, ಆ ನಂತರ ಊರಿಗೆ ಬಂದು, 15 ವರ್ಷ ಕಾಲ ದುಡಿದ ಹಣದಲ್ಲಿ ಸ್ವ ಉದ್ಯೋಗ ಪ್ರಾರಂಭಿಸುವ ಅಲೋಚನೆಯಲ್ಲಿದ್ದರು ಯಾದವ್ ಸನಿಲ್. ಆದರೆ ವಿಧಿ ಬರಹವೇ ಬೇರೆ ಇತ್ತು. 15 ವರ್ಷ ದುಡಿದ ಹಣ ಕೈ ಸೇರಲಿಲ್ಲ. ಇದ್ದ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿರುವ ಯಾದವ್ ಈಗ ಕೇಂದ್ರ ಸರಕಾರದ ಮೊರೆ ಹೋಗಿದ್ದಾರೆ.











Click it and Unblock the Notifications