ಮಂಗಳೂರಲ್ಲಿ ಐಜಿಪಿ ಬಂಗಲೆಯಿಂದಲೇ ಗಂಧದ ಮರ ಕಳವು
ಮಂಗಳೂರು, ಆಗಸ್ಟ್ 24: ಇಲ್ಲಿನ ಮೇರಿಹಿಲ್ ಸಮೀಪದ ಪಶ್ಚಿಮ ವಲಯದ ಐಜಿಪಿ ಅವರ ಅಧಿಕೃತ ಸರಕಾರಿ ಬಂಗ್ಲೆ ಪ್ರದೇಶದಿಂದ ಬೃಹತ್ ಗಂಧದ ಮರ ಕಳವಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
10 ರಿಂದ 15 ಪೊಲೀಸ್ ಸಿಬ್ಬಂದಿಯ ಭದ್ರತೆಯ ಮಧ್ಯೆ ಎರಡು ಗಂಟೆ ಅವಧಿಯಲ್ಲಿ ಬೃಹತ್ ಗಂಧದ ಮರ ಕುರುಹು ಇಲ್ಲದಂತೆ ಮಾಯವಾಗಿದೆ.
ಇದೊಂದು ಪೂರ್ವ ನಿಯೋಜಿತ ಕೃತ್ಯವಾಗಿದ್ದು, ನಾಲ್ಕು ಜಿಲ್ಲೆಗಳನ್ನು ಹದ್ದು ಬಸ್ತಿನಲ್ಲಿಡುವ ಉನ್ನತ ಅಧಿಕಾರಿಯ ನಿವಾಸದಲ್ಲೇ ಭದ್ರತೆ ಈ ಪರಿಯಾದರೆ, ಸಾಮಾನ್ಯ ಜನರ ಪಾಡೇನು ಎಂದು ಆತಂಕ ಪಡುವಂತಾಗಿದೆ.

ಪಶ್ಚಿಮ ವಲಯದ ಐಜಿಪಿ ವಾಸವಿರುವ ಬಂಗ್ಲೆ ಆವರಣದಿಂದಲೇ ಶ್ರೀಗಂಧದ ಮರವೊಂದು ಆಗಸ್ಟ್ 17ರಂದು ಕಳವು ಆಗಿರುವ ಪ್ರಕರಣ ಬಯಲಿಗೆಳೆದ ಬೆನ್ನಲ್ಲೇ ಪೊಲೀಸರ ಸರ್ಪಗಾವಲು ಹೊಂದಿರುವ ಅದೇ ಐಜಿಪಿ ಕ್ಯಾಂಪಸ್ ನಿಂದ 20 ದಿನಗಳ ಹಿಂದೆ ಇನ್ನೂ ನಾಲ್ಕು ಗಂಧದ ಮರಗಳು ಕಳವು ಆಗಿರುವುದು ಇದೀಗ ಬಹಿರಂಗಗೊಂಡಿದೆ!
ಹಿಂದಿನ ಐಜಿಪಿ ಹರಿಶೇಖರನ್ ಅವರು ಹೇಮಂತ್ ನಿಂಬಾಳ್ಕರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡಿದ ಆಗಸ್ಟ್ 17ರಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಸಾಧಾರಣ ಗಾತ್ರದ ಗಂಧದ ಮರವೊಂದು ಬಂಗ್ಲೆ ಆವರಣದಿಂದ ಬುಡ ಸಮೇತ ಕಳವಾಗಿದೆ.
ಐಜಿಪಿ ಬಂಗ್ಲೆಯಿಂದ ಜುಲೈ 28ರಂದು ಒಟ್ಟು ನಾಲ್ಕು ಶ್ರೀಗಂಧ ಮರ ಕದ್ದು ಹೋಗಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡು, ಅನಂತರ ಅಂದರೆ ಜುಲೈ 30 ರಂದು ಅರಣ್ಯ ಇಲಾಖೆಗೂ ಆ ಬಗ್ಗೆ ಪೊಲೀಸರು ಮಾಹಿತಿ ರವಾನಿಸಿದ್ದಾರೆ.
ಗಮನಾರ್ಹ ಅಂದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂರು ವಾರ ಕಳೆದಿದ್ದರೂ ಇಲ್ಲಿವರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಮರ ಕಡಿದಿರುವ ಕುರಿತಂತೆ ಮಹಜರು ನಡೆಸಿರಲಿಲ್ಲ. ಸೋಮವಾರ ಅರಣ್ಯ ಇಲಾಖೆ ವಲಯ ಅಧಿಕಾರಿಗಳನ್ನು ಒಳಗೊಂಡ ತಂಡವು ಐಜಿಪಿ ಬಂಗ್ಲೆಗೆ ಭೇಟಿ ನೀಡಿ, ನಾಲ್ಕು ಮರಗಳ ಕಾಂಡವನ್ನು ತಪಾಸಣೆ ನಡೆಸಿ, ಮಹಜರು ಮಾಡಿದ್ದಾರೆ.
ಇಷ್ಟು ತಡವಾಗಿ ಸ್ಥಳ ಪರಿಶೀಲನೆ ಹಾಗೂ ಮಹಜರು ಮಾಡಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ.












Click it and Unblock the Notifications