ಜ.12ರಿಂದ ಮಂಗ್ಳೂರಲ್ಲೂ 'ವಿವೇಕ್ ಬ್ಯಾಂಡ್' ಅಭಿಯಾನ
ಮಂಗಳೂರು, ಜನವರಿ. 11 : 'ಸಮರ್ಥ ಭಾರತ' ವತಿಯಿಂದ ಯುವ ಅಭಿಯಾನ 'ವಿವೇಕ್ ಬ್ಯಾಂಡ್' ಜನವರಿ 12ರಿಂದ ಜ.26ರ ವರೆಗೆ ಎರಡು ವಾರಗಳ ಕಾಲ ರಾಜ್ಯಾದ್ಯಂತ ನಡೆಯಲಿದ್ದು ಇದರಲ್ಲಿ 12ಲಕ್ಷ ಮಂದಿ ಭಾಗವಹಿಸಲಿದ್ದಾರೆ ಎಂದು ವಿಕಾಸ್ ಕಾಲೇಜಿನ ಸಲಹೆಗಾರ ಹಾಗೂ ಸಮರ್ಥ ಭಾರತ ಅಭಿಯಾನದ ಪ್ರಮುಖರಾದ ಡಾ. ಅನಂತ ಪ್ರಭು ತಿಳಿಸಿದರು.
ಈ ಬಗ್ಗೆ ಮಾಹಿತಿ ನೀಡಿದ ಅವರು, ಸ್ವಾಮಿ ವಿವೇಕಾನಂದ 154ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಜ.12ರಂದು ಅಭಿಯಾನಕ್ಕೆ ಚಾಲನೆ ದೊರೆಯಲಿದೆ.
ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಿಗಳ ಸಹಿತ ಯುವ ಸಮೂಹದಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಬೆಳೆಸುವುದರೊಂದಿಗೆ ತಮ್ಮ ವೈಯಕ್ತಿಕ ಜೀವನದಲ್ಲಿ ಉತ್ತಮ ಗುಣ ಸ್ವಭಾವಗಳನ್ನು ಮೈಗೂಡಿಸಿಕೊಳ್ಳಲು ಪ್ರೇರಿಸುವ ಮತ್ತು ಇತರರಿಗೂ ಪ್ರೇರಣೆಯಾಗುವ ದೃಷ್ಟಿಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಸಂದೇಶವಾದ 'ಉತ್ತಮನಾಗು - ಉಪಕಾರಿಯಾಗು' ಎನ್ನುವುದನ್ನು ಸಾರುವ 'ವಿವೇಕ್ ಬ್ಯಾಂಡ್ ನ್ನು ಯುವಕ - ಯುವತಿಯರು ತಮ್ಮ ಬಲಗೈಯಲ್ಲಿ ಕಟ್ಟಿಕೊಳ್ಳುವುದರೊಂದಿಗೆ ವಿವೇಕಾನಂದರ ಸಂದೇಶ ಪಾಲನೆ ಮಾಡುವ ಸಂಕಲ್ಪ ಮಾಡುವರು.
ಈಗಾಗಲೇ ಶಿಕ್ಷಣ ಸಂಸ್ಥೆಗಳು, ಇತರ ಸಂಘ ಸಂಸ್ಥೆಗಳು, ಪ್ರಖ್ಯಾತ ಗಣ್ಯರು ಅಭಿಯಾನಕ್ಕೆ ಧ್ವನಿಗೂಡಿಸಿದ್ದಾರೆ ಎಂದು ತಿಳಿಸಿದರು.