ಕರಾವಳಿಯ ಮೀನುಗಾರರಿಗೆ ಇನ್ನು ಮುಂದೆ ಸಾಗರ ಮಿತ್ರರ ನೆರವು
ಮಂಗಳೂರು, ಮಾರ್ಚ್ 12: ಕರಾವಳಿಯ ಕಡಲ ಮಕ್ಕಳ ಜೀವನಾಧಾರ ಮೀನುಗಾರಿಕೆ. ಕಡಲ ಮಕ್ಕಳಿಗೆ ಮೀನುಗಾರಿಕೆ ಇಲ್ಲದೇ ಜೀವನ ಇಲ್ಲ, ಬದುಕಿಗೆ ಆಧಾರ ಇಲ್ಲ. ಸಮುದ್ರರಾಜನ ಜೊತೆ ಸೆಣಸಾಡಿ ಮತ್ಸ್ಯ ಬೇಟೆಯಾಡಿ, ದಡಕ್ಕೆ ಬಂದು ಮೀನು ಮಾರಾಟ ಮಾಡಿದರಷ್ಟೇ ಅವರ ಬದುಕಿನ ನಾವೆ ಸಾಗುತ್ತದೆ. ಆದರೆ ಮೀನುಗಾರರ ಬದುಕು ಮಾತ್ರ ಮುನ್ನೆಲೆಗೆ ಬಂದಿಲ್ಲ. ಹೀಗಾಗಿ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಲು ಸಾಗರ ಮಿತ್ರರನ್ನು ನೇಮಕ ಮಾಡಲಾಗಿದೆ.
ಕರಾವಳಿಯಲ್ಲಿ ಅತೀ ಹೆಚ್ಚಿನ ಆದಾಯದ ಮೂಲಗಳಲ್ಲಿ ಮೀನುಗಾರಿಕೆಯು ಒಂದು. ವರ್ಷದ ಹೆಚ್ಚಿನ ದಿನ ಸಮುದ್ರದಲ್ಲೇ ಇರುವ ಈ ಮೀನುಗಾರರಿಗೆ ಸರಕಾರದ ಸೌಲಭ್ಯ, ಯೋಜನೆಗಳ ಬಗ್ಗೆ ಮಾಹಿತಿ ಸಿಗುವುದು ಕಡಿಮೆ. ಇದಕ್ಕಾಗಿಯೇ ಇದೀಗ ಮೀನುಗಾರರು ಮತ್ತು ಮೀನುಗಾರಿಕೆ ಇಲಾಖೆಯ ನಡುವೆ ಸಂಪರ್ಕ ಸೇತುವಾಗಿ ಸಾಗರ ಮಿತ್ರರು ಬರುತ್ತಿದ್ದಾರೆ.
ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಸಾಗರ ಮಿತ್ರ ಪರಿಕಲ್ಪನೆ ಕರಾವಳಿ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಅನುಷ್ಠಾನಗೊಳ್ಳುತ್ತಿದೆ. ಮೀನುಗಾರರು ಮತ್ತು ಮೀನುಗಾರಿಕೆ ಇಲಾಖೆಯ ನಡುವೆ ಸಂಪರ್ಕ ಸೇತುವಾಗಿ ಸಾಗರ ಮಿತ್ರರು ಬರುತ್ತಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ 320 ಕಿ.ಮೀ. ವ್ಯಾಪ್ತಿಯ 162 ಮೀನುಗಾರಿಕೆ ಗ್ರಾಮಗಳಿಗೆ ಸಂಬಂಧಿಸಿ 120 ಸಾಗರ ಮಿತ್ರರನ್ನು ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.

ದಕ್ಷಿಣ ಕನ್ನಡಕ್ಕೆ 14, ಉಡುಪಿಗೆ 50 ಮತ್ತು ಉತ್ತರ ಕನ್ನಡದ 54 ಸಾಗರಮಿತ್ರರು ಬರಲಿದ್ದಾರೆ. ಮೀನುಗಾರಿಕೆ ಮಹಾವಿದ್ಯಾಲಯದ ಸಹಯೋಗದಲ್ಲಿ ಮೀನುಗಾರಿಕೆ ಇಲಾಖೆ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಎಂದು ಇಲಾಖೆಯ ಸಂಯೋಜನಾಧಿಕಾರಿ ಪ್ರೊ. ಡಾ. ವರದರಾಜ್ ಮಾಹಿತಿ ನೀಡಿದ್ದಾರೆ.
ಸಾಗರ ಮಿತ್ರರು ಮೀನುಗಾರರಿಗೆ ಸುಸ್ಥಿರ ಮೀನುಗಾರಿಕೆ, ಸರಕಾರದ ಸೌಲಭ್ಯ, ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಹವಾಮಾನ ಮುನ್ಸೂಚನೆ, ನೈಸರ್ಗಿಕ ವಿಪತ್ತುಗಳ ಬಗ್ಗೆ ಮಾಹಿತಿ, ತಾಜಾ ಮೀನುಗಳ ಸ್ವಚ್ಛತೆ, ವೈಯಕ್ತಿಕ ಸ್ವಚ್ಛತೆ, ಆರೋಗ್ಯಕರ ವಾತಾವರಣ ನಿರ್ವಹಣೆ ಬಗ್ಗೆ ತಿಳಿವಳಿಕೆ, ಮತ್ಸ್ಯ ಸಂಪನ್ಮೂಲವನ್ನು ವ್ಯವಸ್ಥಿತವಾಗಿ ಸಂರಕ್ಷಿಸುವುದು.
ಪೇಟೆ ಧಾರಣೆ: ಮೀನು, ತರಕಾರಿ, ರಬ್ಬರ್ ಹಾಗೂ ರಸಗೊಬ್ಬರ ಮಾರುಕಟ್ಟೆ ಬೆಲೆ
ಕರಾವಳಿಯ ಪರಿಸರ ಸಂರಕ್ಷಣೆ, ಮೀನುಗಾರಿಕೆಯಲ್ಲಿ ನೀತಿ ಸಂಹಿತೆ, ಅಕ್ರಮ ಮೀನುಗಾರಿಕೆ ತಡೆಗೆ ಜಾಗೃತಿ, ಮೀನುಗಾರ ಮಹಿಳೆಯರ ಆರ್ಥಿಕತೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಮಾಹಿತಿ, ತರಬೇತಿ, ಮೀನುಗಾರಿಕೆಗೆ ತೆರಳುವ ದೋಣಿಗಳು, ಮೀನಿನ ಉತ್ಪಾದನೆ, ಮೌಲ್ಯ, ಮಾರಾಟದ ವಿವರ ಸಂಗ್ರಹಿಸಿ ಪ್ರತೀ ದಿನ ಸರಕಾರಕ್ಕೆ ವರದಿ ನೀಡುವುದು ಮುಂತಾದ ಕರ್ತವ್ಯಗಳನ್ನು ಸಾಗರ ಮಿತ್ರರು ನಿರ್ವಹಿಸಲಿದ್ದಾರೆ.
ಒಂದು ಮೀನುಗಾರಿಕೆ ಗ್ರಾಮಕ್ಕೆ ಒಬ್ಬರಂತೆ ಸಾಗರ ಮಿತ್ರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಮೂಲಕ ಇನ್ಮುಂದೆ ಮೀನುಗಾರರು ಮತ್ತು ಮೀನುಗಾರಿಕೆ ಇಲಾಖೆಯ ನಡುವೆ ಸಂಪರ್ಕ ಸೇತುವಾಗಿ ಸಾಗರ ಮಿತ್ರರು ಇರಲಿದ್ದಾರೆ.
ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರ ಬಳಿಗೆ ತಲುಪಿಸಲು ಈ ಸಾಗರ ಮಿತ್ರರು ನೆರವಾಗಲಿದ್ದಾರೆ. ದಿನವಿಡೀ ಕಡಲಿನಲ್ಲಿ ಜೀವನಕ್ಕಾಗಿ ಸೆಣಸಾಡುವ ಮೀನುಗಾರರಿಗೆ ಸರ್ಕಾರದ ಯೋಜನೆಗಳು ನೆರವಾಗುವ ವಿಶ್ವಾಸ ಅಧಿಕಾರಿಗಳದ್ದಾಗಿದೆ. ಹೀಗಾಗಿ ರಾಜ್ಯದ ಮೂರು ಕರಾವಳಿ ಜಿಲ್ಲೆಗಳಲ್ಲಿ ಈ ಯೋಜನೆ ಮೀನುಗಾರರ ಜೀವನದಲ್ಲಿ ಮತ್ತಷ್ಟು ಸುಧಾರಣೆ ತರುವ ಆಶಾವಾದ ವ್ಯಕ್ತವಾಗಿದೆ.












Click it and Unblock the Notifications