ಕರಾವಳಿ ಕಾವಲು ಪೊಲೀಸ್ ಘಟಕದ ಇಂಟರ್ ಸೆಪ್ಟರ್ ಬೋಟುಗಳಿಂದ ಸಮುದ್ರ ಗಸ್ತು
ಮಂಗಳೂರು, ಏಪ್ರಿಲ್ 08: ಕೊರೊನಾ ವೈರಸ್ ನಿಯಂತ್ರಣಕ್ಕೆ ಕರ್ನಾಟಕ ಹಾಗೂ ಕೇರಳದ ಗಡಿಯನ್ನು ಮುಚ್ಚಲಾಗಿದ್ದು, ಕೇಂದ್ರದ ಮಧ್ಯ ಪ್ರವೇಶದ ನಂತರ ಷರತ್ತುಬದ್ಧವಾಗಿ, ತುರ್ತು ಚಿಕಿತ್ಸೆಗೆ ಕೊರೊನಾ ಪೀಡಿತರಲ್ಲದ ರೋಗಿಗಳನ್ನು ಹೊತ್ತ ಆಂಬ್ಯುಲೆನ್ಸ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.
ತಲಪಾಡಿ ಗಡಿ ಚೆಕ್ ಪೋಸ್ಟ್ ನಲ್ಲಿ ಕರ್ನಾಟಕ ಮತ್ತು ಕೇರಳ ಉಭಯ ರಾಜ್ಯಗಳ ವೈದ್ಯರಿಂದ ತಪಾಸಣೆ ಬಳಿಕವೇ ತುರ್ತುಚಿಕಿತ್ಸೆಗೆ ರೋಗಿಗಳು ಕರ್ನಾಟಕದ ಮಂಗಳೂರಿಗೆ ಪ್ರವೇಶಿಸಬಹುದಾಗಿದೆ ಎಂದು ನಿನ್ನೆಯಷ್ಟೇ ತಿಳಿಸಲಾಗಿದೆ. ಅಂತಹ ರೋಗಿಗಳಿಗೆ ಕೇರಳದಲ್ಲಿ ಚಿಕಿತ್ಸೆ ಸಾಧ್ಯವಿಲ್ಲ ಎಂದು ಸ್ಥಳೀಯ ವೈದ್ಯರಿಂದ ಸೂಕ್ತ ಪತ್ರ ಪಡೆಯಬೇಕಾಗಿರುವುದು ಕೂಡ ಕಡ್ಡಾಯವಾಗಿದೆ. ಜೊತೆಗೆ ಗಡಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಕೇರಳದ ಯಾವುದೇ ವಾಹನ ಪ್ರವೇಶಿಸದಂತೆ, ಕರ್ನಾಟಕದ ಗಡಿಗಳಲ್ಲಿ ಪೊಲೀಸ್ ಕಟ್ಟೆಚ್ಚರ ವಹಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಮೂಲಕ ಕೇರಳದಿಂದ ರಾಜ್ಯಕ್ಕೆ ಬರಲು ಅನುಮತಿ
ಈ ನಡುವೆ ಕೊರೊನಾ ಸೋಂಕು ಪೀಡಿತ ಕೇರಳದಿಂದ ಸಮುದ್ರದಲ್ಲಿ ದೋಣಿಗಳ ಮೂಲಕ ಮಂಗಳೂರು ಸೇರಿದಂತೆ ಕರ್ನಾಟಕಕ್ಕೆ ಜನರು ಬರುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಘಟಕದ ಅಧೀಕ್ಷಕ ಚೇತನ್. ಆರ್ ಮತ್ತು ಅಧಿಕಾರಿಗಳು ಕೇರಳ- ಕರ್ನಾಟಕದ ಗಡಿ ಭಾಗದ ಲ್ಯಾಂಡಿಂಗ್ ಪಾಯಿಂಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೇರಳಿಗರು ಸಮುದ್ರದ ಮೂಲಕ ಕರಾವಳಿಯ ಜಿಲ್ಲೆಗಳಿಗೆ ಪ್ರವೇಶಿದರೆ ಸೋಂಕು ಹೆಚ್ಚಾಗಿ ಹರಡುವ ಸಾಧ್ಯತೆ ಇದ್ದು, ಕರಾವಳಿ ಕಾವಲು ಪೊಲೀಸ್ ಘಟಕದ ಇಂಟರ್ ಸೆಪ್ಟರ್ ಬೋಟುಗಳಿಂದ ಸಮುದ್ರ ಗಸ್ತು ನಿರ್ವಹಿಸುವಂತೆ ಸೂಚಿಸಲಾಗಿದೆ.