ಸರ್ವಧರ್ಮೀಯರೊಂದಿಗೂ ಶರತ್ ಕುಟುಂಬಕ್ಕಿತ್ತು ಉತ್ತಮ ಸಂಬಂಧ
ಮಂಗಳೂರು, ಜುಲೈ 10: ಕೆಲದಿನಗಳ ಹಿಂದೆ ದುಷ್ಕರ್ಮಿಗಳಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕುಟುಂಬಸ್ಥರು ಎಲ್ಲಾ ಧರ್ಮಿಯರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದರು.
ಇದಕ್ಕೆ ಪೂರಕವೆಂಬಂತೆ ಶರತ್ ಅವರ ಲಾಂಡ್ರಿಗೆ ಎಲ್ಲಾ ಧರ್ಮದವರು ತಮ್ಮ ಬಟ್ಟೆಗಳನ್ನು ನೀಡುತ್ತಿದ್ದರು. ಶರತ್ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯವಿತ್ತು ಕೂಡ. ಜತೆಗೆ ರಾಜಕೀಯ ನಾಯಕರೊಂದಿಗೂ ಒಳ್ಳೆಯ ನಂಟು ಇಟ್ಟುಕೊಂಡಿದ್ದರು.
ಆದರೆ, ಅವರನ್ನು ದುಷ್ಕರ್ಮಿಗಳು ಯಾವ ಕಾರಣಕ್ಕಾಗಿ ಹಲ್ಲೆ ಮಾಡಿದ್ದರು ಎಂಬುವುದು ನಿಗೂಢವಾಗಿಯೇ ಉಳಿದಿದೆ. ಈ ಬಗ್ಗೆ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ರಮಾನಾಥ ರೈ ನೆಚ್ಚಿನ ಲಾಂಡ್ರಿ
ಶರತ್ ಅವರ ಉದಯ ಲಾಂಡ್ರಿ ಬಿ.ಸಿ ರೋಡ್ ಒಂದು ಪ್ರಖ್ಯಾತ ಲಾಂಡ್ರಿಯಾಗಿತ್ತು. ಇಲ್ಲಿಗೆ ದಿನನಿತ್ಯ ನೂರಾರು ಗ್ರಾಹಕರು ಬಟ್ಟೆಗಳನ್ನು ನೀಡುತ್ತಿದ್ದರು. ಅದರಲ್ಲೂ ಬಂಟ್ವಾಳದ ಎಲ್ಲಾ ಪಕ್ಷದ ರಾಜಕೀಯ ನಾಯಕರ ವಸ್ತ್ರಗಳು ಅಲ್ಲಿಗೆ ಬರುತ್ತಿದ್ದವು.

10 ವರ್ಷಗಳಿಂದ ಲಾಂಡ್ರಿ ಜತೆಗೆ ಒಡನಾಟ
ಇದು ದ.ಕ ಉಸ್ತುವಾರಿ ಹಾಗೂ ಅರಣ್ಯ ಸಚಿವ ರಮಾನಾಥ್ ರೈ ಅವರ ನೆಚ್ಚಿನ ಲಾಂಡ್ರಿಯಾಗಿತ್ತು. ಕಳೆದ 10 ವರ್ಷಗಳಿಂದ ರೈ ಬಟ್ಟೆಗಳನ್ನು ಇಲ್ಲಿಗೇ ನೀಡುತ್ತಿದ್ದರು. ಶರತ್ ತಂದೆ ತನಿಯಪ್ಪ ಮಡಿವಾಳ ಅವರು ಸುಮಾರು 15 ವರ್ಷಗಳಿಂದ ಈ ಉದ್ಯಮ ನಡೆಸಿಕೊಂಡು ಬಂದಿದ್ದರು. ರಮಾನಾಥ ರೈ ಶಾಸಕ ಆಗಿರುವಾಗಲೇ ತಮ್ಮ ಬಟ್ಟೆಗಳನ್ನು ಅಲ್ಲಿಯೇ ನೀಡುತ್ತಿದ್ದರು ಎನ್ನುತ್ತಾರೆ ಅವರ ಸಹಾಯಕ ವೆಂಕಟಪ್ಪ.

ರೈಯೊಂದಿಗೆ ಉತ್ತಮ ಸಂಬಂಧ
ಸಚಿವ ರಮಾನಾಥ ರೈ ಜತೆ ತನಿಯಪ್ಪ ಕುಟುಂಬ ಆತ್ಮೀಯವಾದ ಸಂಬಂಧ ಇಟ್ಟುಕೊಂಡಿತ್ತು. ಸಚಿವರು ಕಾರ್ಯನಿಮಿತ್ತ ಅದೇ ರಸ್ತೆಯಲ್ಲಿ ತೆರಳುವಾಗ ತಮ್ಮ ವಾಹನ ನಿಲ್ಲಿಸಿ ತನಿಯಪ್ಪ ಜೊತೆಗೆ ಕಷ್ಟ-ಸುಖ ಹಂಚಿಕೊಳ್ಳುತ್ತಿದ್ದರು. ಬಿಜೆಪಿ ಹಾಗೂ ಉಳಿದ ಪಕ್ಷದವರೊಂದಿಗೂ ತನಿಯಪ್ಪ ಕುಟುಂಬಕ್ಕೆ ನಿಕಟ ಸಂಪರ್ಕ ಇಟ್ಟುಕೊಂಡಿತ್ತು.

ಸಮಸ್ಯೆಗೆ ಸ್ಪಂದಿಸಿದ್ದ ಸಚಿವರು
ತನಿಯಪ್ಪ ಕುಟುಂಬ ಕೆಲವು ಸಂಕಷ್ಟಗಳಿಂದ ಬಳಲುತ್ತಿದೆ ಎಂದು ಸಚಿವರ ಜೊತೆ ಹಂಚಿಕೊಂಡಿದ್ದರು. ಇದಕ್ಕೆ ರೈಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಅವರ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ದರು. ಮೂಲತಃ ಶರತ್ ಕುಟುಂಬ ಆರ್ಎಸ್ಎಸ್ ಹಿನ್ನೆಲೆಯಿದ್ದರೂ ಬೇರೆ ಪಕ್ಷ ಹಾಗೂ ಧರ್ಮೀಯರೊಂದಿಗೆ ನಿಕಟ ಸಂಪರ್ಕ ಹೊಂದಿತ್ತು ಎನ್ನುತ್ತಾರೆ ಅವರನ್ನು ಬಲ್ಲವರು.

ಸಹಾಯ ಮಾಡುವುದರಲ್ಲಿ ಎತ್ತಿದ ಕೈ
ಶರತ್ ಕುಟುಂಬ ಯಾವಾಗಲೂ ಜಾತಿ, ಧರ್ಮವನ್ನು ನೋಡದೆ ಸಹಾಯಕ್ಕೆ ನಿಲ್ಲುತ್ತಿತ್ತು. ಉದಯ್ ಲಾಂಡ್ರಿ ಸುತ್ತಮುತ್ತ ಬೇರೆ ಧರ್ಮದವರ ಅಂಗಡಿಗಳಿದ್ದರೂ ಪರಸ್ಪರ ಸ್ನೇಹಿತರಂತೆ ದಿನಗಳನ್ನು ಕಳೆಯುತ್ತಿದ್ದರು. ತಮ್ಮ ಕೆಲಸದಲ್ಲಿ ನಿಷ್ಠೆ ಹೊಂದಿದ್ದ ಶರತ್ ಮಧ್ಯರಾತ್ರಿವರೆಗೂ ಕೆಲಸ ಮಾಡುತ್ತಿದ್ದರು. ಇದರೊಂದಿಗೆ ಸಮಾಜ ಸೇವೆಗೂ ತಮ್ಮ ಜೀವನವನ್ನು ಮುಡಿಪಾಗಿಟ್ಟುಕೊಂಡಿದ್ದರು.
ಈ ಕಾರಣಕ್ಕೆ ಅವರ ಕೊನೆಯ ಕಾಲದಲ್ಲಿ ಪಕ್ಕದ ಅಂಗಡಿಯ ಅಬ್ದುಲ್ ರವೂಫ್ ಎಂಬ ಯುವಕ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು; ಈ ಮೂಲಕ ಸಮಾಜದಲ್ಲಿ ಸೌಹಾರ್ದತೆಯ ಸಂದೇಶವನ್ನು ನೀಡಿದ್ದರು.












Click it and Unblock the Notifications