ಕಾಂಗ್ರೆಸ್ ಸಮಾವೇಶಕ್ಕಾಗಿ ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟ ಆಸ್ಪತ್ರೆ?
ಮಂಗಳೂರು, ಜುಲೈ 13: ದುಷ್ಕರ್ಮಿಗಳಿಂದ ಹತ್ಯೆಯಾದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ನಗರದ ಖಾಸಗಿ ಆಸ್ಪತ್ರೆಯಲ್ಲಿ ಜುಲೈ 6ರಂದು ಮೃತಪಟ್ಟಿದ್ದಾರೆ. ಆದರೆ ಒಂದು ದಿನದ ನಂತರ ಶರತ್ ಸಾವನ್ನಪ್ಪಿದ್ದಾರೆ ಎಂದು ಘೋಷಣೆಯಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಅಧಿಕೃತ ದಾಖಲೆಗಳು ಮಾಧ್ಯಮಗಳಿಗೆ ಲಭ್ಯವಾಗಿವೆ.
ಈ ಮಧ್ಯೆ ಡಿ.ವಿ ಸದಾನಂದ ಗೌಡ, ರಮಾನಾಥ್ ರೈ, ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಮತ್ತಿತರರು ಶರತ್ ಮನೆಗೆ ಭೇಟಿ ನೀಡಿದ್ದಾರೆ. ಜತೆಗೆ ಮಂಗಳೂರಿನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಿವೆ.

ಸಿ.ಎಂಗಾಗಿ ಸಾವು ಘೋಷಣೆ ವಿಳಂಬ ಮಾಡಿದ್ರಾ ?
ಜುಲೈ 4 ರಂದು ರಾತ್ರಿ 9.30ರ ವೇಳೆ ದುಷ್ಕರ್ಮಿಗಳು ಶರತ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ತೀವ್ರವಾಗಿ ಗಾಯಗೊಂಡ ಶರತ್ ಚಿಕಿತ್ಸೆ ಫಲಕಾರಿಯಾಗದೇ ಜುಲೈ 6ರಂದು ರಾತ್ರಿ 12.30ಕ್ಕೆ ಸಾವನ್ನಪ್ಪಿದ್ದರು ಎನ್ನುತ್ತದೆ ಆಸ್ಪತ್ರೆಯ ಅಧಿಕೃತ ದಾಖಲೆಗಳು.
ಮರುದಿನ ಅಂದರೆ ಜುಲೈ 7ರಂದು ನಗರದ ಹೊರವಲಯದ ಅಡ್ಯಾರ್ ಗಾರ್ಡನ್ನಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳ ಸಮಾವೇಶ ಇತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ ಹಾಗೂ ಆಹಾರ ಖಾತೆ ಸಚಿವ ಯು.ಟಿ ಖಾದರ್, "ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳೂರಿಗೆ ಬಂದು ಹೋಗುವವರೆಗೂ ಶರತ್ ಸಾವನ್ನು ಘೋಷಿಸಬಾರದೆಂದು ಆಸ್ಪತ್ರೆ ವೈದ್ಯರ ಮೇಲೆ ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಈ ಒತ್ತಡಕ್ಕೆ ಮಣಿದು ಆಸ್ಪತ್ರೆ ಮೂಲಗಳು ಜುಲೈ 7ರಂದು ರಾತ್ರಿ ಸಿ.ಎಂ ಮಂಗಳೂರಿನಿಂದ ನಿರ್ಗಮಿಸಿದ ಬಳಿಕ ಅಧಿಕೃತವಾಗಿ ಸತ್ತಿರುವುದನ್ನು ಘೋಷಣೆ ಮಾಡಿದೆ.

ವೈದ್ಯರ ಮೇಲೆ ಖಾದರ್ ಒತ್ತಡ
ಶರತ್ ಮನೆಗೆ ಭೇಟಿ ನೀಡಿದ ಬಿಜೆಪಿ ಯುವ ನಾಯಕ ತೇಜಸ್ವಿ ಸೂರ್ಯ ಮಾತನಾಡಿದ ವೀಡಿಯೋ ಚರ್ಚೆಗೆ ಗ್ರಾಸವಾಗಿದೆ. "ನೀವು ನಿಮ್ಮ ಮಗನನ್ನು ಕಳೆದುಕೊಂಡಾಗ ಇಡೀ ರಾಜ್ಯ ನಿಮ್ಮ ಜೊತೆಗಿತ್ತು. ಆದರೆ ಶರತ್ ಸಾವಿನಲ್ಲಿ ಚೆಲ್ಲಾಟವಾಡುದಕ್ಕೆ ನಿಮ್ಮ ಮನಸ್ಸು ಹೇಗೆ ಒಪ್ಪಿತು," ಎಂದು ಮುಖ್ಯಮಂತ್ರಿಯನ್ನು ಪ್ರಶ್ನಿಸಿದ್ದಾರೆ.
"ಶರತ್ ತನ್ನ ಸುತ್ತಮುತ್ತ ನಡೆಯುತ್ತಿದ್ದ ಮರಳು ಮಾಫಿಯಾದ ಬಗ್ಗೆ ಹೋರಾಟ ನಡೆಸಿದ್ದ. ಇದೇ ಮರಳು ಮಾಫಿಯಾದಿಂದ ರಮಾನಾಥ್ ರೈಗೆ ಪ್ರತಿ ತಿಂಗಳು ಮಾಮೂಲು ಹೋಗುತ್ತಿತ್ತು," ಸೂರ್ಯ ಆರೋಪಿಸಿದ್ದಾರೆ.
"ಮಂಗಳೂರು ಮುಸ್ಲಿಂ ಎಂಬ ಫೇಸ್ಬುಕ್ ಪೇಜನ್ನು ಇಳಿಸಲಾಗದ ಷಂಡ ಸರಕಾರದಿಂದ ಏನು ಬಯಸಲು ಸಾಧ್ಯ. ಶರತ್ ಸಾವನ್ನು ವಿಳಂಬವಾಗಿ ಘೋಷಣೆ ಮಾಡುವುದಕ್ಕೆ ಯು.ಟಿ ಖಾದರ್ ಆಸ್ಪತ್ರೆಗೆ ಭೇಟಿ ನೀಡಿ ಒತ್ತಡ ತಂದಿದ್ದಾರೆ," ಎಂಬ ಗಂಭೀರ ಆರೋಪ ಮಾಡಿದ್ದಾರೆ.

ಕೊಲೆ ಮುಚ್ಚಿಟ್ಟಿದ್ದು ಅಕ್ಷಮ್ಯ ತಪ್ಪು: ಬಿಎಸ್ವೈ
ಶರತ್ ಕೊಲೆ ಖಂಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂದೆ ಇಂದು ಪ್ರತಿಭಟನೆ ನಡೆಸಲಾಗುತ್ತಿದೆ. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸರ್ಕಾರ ಯಾರ ಶಾಂತಿ ಸಭೆಗೆ ಕರೆದಿದೆ? ಕಾಂಗ್ರೆಸ್ನ ಶಾಂತಿ ಸಭೆಯ. ಕೋಮು ಗಲಭೆ ಹುಟ್ಟಿಸಿದವರೇ ಶಾಂತಿ ಸಭೆಗೆ ಆಹ್ವಾನಿಸುತ್ತಿದ್ದಾರೆ. ಇದಕ್ಕೆ ಹಿಂದೂ ಸಂಘಟನೆಗಳಿಗೆ ಯಾಕೆ ಆಹ್ವಾನ ನೀಡಿಲ್ಲ ಎಂದು ಪ್ರಶ್ನಿಸಿದರು.
ಮಾತ್ರವಲ್ಲ ಸಿ.ಎಂ ಕಾರ್ಯಕ್ರಮಕ್ಕಾಗಿ ಕೊಲೆಯನ್ನು ಮುಚ್ಚಿಟ್ಟಿದ್ದು ದೊಡ್ಡ ತಪ್ಪು ಎಂದಿದ್ದಾರೆ.












Click it and Unblock the Notifications