ಮಂಗಳೂರಿನಲ್ಲಿ ರೌಡಿ ಪರೇಡ್, 36 ಪ್ರಕರಣದ ಆರೋಪಿ ಕಂಡು ಪೊಲೀಸ್ ಕಮಿಷನರ್ ಶಾಕ್!
ಮಂಗಳೂರು, ಅಕ್ಟೋಬರ್, 13: ಮಂಗಳೂರಿನಲ್ಲಿ ಗುರುವಾರ (ಅಕ್ಟೋಬರ್ 12) ರೌಡಿಗಳ ಪರೇಡ್ ನಡೆದಿದೆ. ನಗರದ 250ಕ್ಕೂ ಅಧಿಕ ರೌಡಿಗಳನ್ನು ಮಟ ನಟ ಮಧ್ಯಾಹ್ನ ಪರೇಡ್ ಮಾಡಲಾಗಿದೆ. ಕೊಲೆ, ಗಲಭೆ, ಕಳ್ಳತನ, ದರೋಡೆ ಮಾಡಿದ ರೌಡಿಗಳನ್ನು ವಿಚಾರಿಸಿದ ಕಮಿಷನರ್, ಮುಂದೆ ಅಪರಾಧ ಕೃತ್ಯಗಳನ್ನು ಮಾಡಿದರೆ ಹುಷಾರ್ ಎಂಬ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರಿನ ನೂತನ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು ರೌಡಿಗಳ ಪರೇಡ್ ಮಾಡಿದ್ದಾರೆ. ಮೊದಲ ಭೇಟಿಯಲ್ಲೇ ರೌಡಿಗಳಿಗೆ ಎಚ್ಚರಿಕೆ ನೀಡಿದ ಕಮೀಷನರ್ ಮುಂದೆ ಅಪರಾಧ ಚಟುವಟಿಕೆಗಳನ್ನು ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ. ನಗರದ ಪೊಲೀಸ್ ಗ್ರೌಂಡ್ನಲ್ಲಿ ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿ ರೌಡಿಗಳನ್ನು ಮೂರು ಗಂಟೆಗಳ ಕಾಲ ಅನುಪಮ್ ಅಗರ್ವಾಲ್ ವಿಚಾರಣೆ ಮಾಡಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮೀಷನೇಟರ್ ವ್ಯಾಪ್ತಿಯ 14 ಪೊಲೀಸ್ ಠಾಣೆಗಳ ಒಟ್ಟು 262 ರೌಡಿಗಳು ಪರೇಡ್ನಲ್ಲಿ ಭಾಗವಹಿಸಿದ್ದಾರೆ. ಆದರೆ ರೌಡಿ ಪರೇಡ್ನಲ್ಲಿ ಹಲವು ರೌಡಿಗಳು ಹಾಜರಾಗಿಲ್ಲ .ಮುಖ್ಯ ರೌಡಿಗಳ ಸಹಚರರು ರೌಡಿ ಪರೇಡ್ಗೆ ಗೈರಾಗಿದ್ದು, ಮುಂದಿನ ಬಾರಿ ಎಲ್ಲಾ ರೌಡಿಗಳನ್ನು ಪರೇಡ್ಗೆ ಕರೆತರಲು ಕಮಿಷನರ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೌಡಿಗಳ ಪರೇಡ್ ವೇಳೆ ಸ್ವತಃ ಕಮಿಷನರ್ ಅನುಪಮ್ ಅಗರ್ವಾಕ್ ಅವರೇ ಶಾಕ್ ಆಗಿದ್ದಾರೆ. 36 ಸರಗಳ್ಳತನ ಪ್ರಕರಣದ ಆರೋಪಿ ಇನ್ನೂ ಹೊರಗಿರುವುದನ್ನು ಕಂಡು ಕಮಿಷನರ್ ಅಧಿಕಾರಿಗಳಿಗೆ ಆತನ ಕೇಸ್ ಸ್ಟಡಿ ಮಾಡಲು ಸೂಚನೆ ನೀಡಿದ್ದಾರೆ. 3 ಕೊಲೆ ಮಾಡಿದ ಆರೋಪಿಗಳಿಗೂ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಗಡಿಪಾರು ಮಾಡಬಹುದಾದ ಆರೋಪಗಳನ್ನು ಗುರುತಿಸಿ ಗಡಿಪಾರು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರೌಡಿ ಪರೇಡ್ ಬಳಿಕ ಮಾಧ್ಯಮಗಳಿಗೆ ಕಮಿಷನರ್ ಅನುಪಮ್ ಅಗರ್ವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಒಟ್ಟು 262 ರೌಡಿಗಳು ಪರೇಟ್ನಲ್ಲಿ ಭಾಗವಹಿಸಿದ್ದರು. ಇವರೆಲ್ಲಾ ಕೊಲೆ, ಕೋಮು ಗಲಭೆ, ನೈತಿಕ ಪೊಲೀಸ್ ಗಿರಿ ಸೇರಿದಂತೆ ಇನ್ನಿತರ ಅಪರಾಧ ಚಟುವಟಿಕೆಗಳಲ್ಲಿ ಭಾಗವಹಿಸಿದವರಾಗಿದ್ದಾರೆ ಎಂದರು.
ಎಲ್ಲಾ ರೌಡಿಗಳನ್ನು ವಿಚಾರಣೆ ಮಾಡಿದ್ದೇವೆ. ಮುಂದೆಯೂ ವಿಚಾರಣೆಯನ್ನು ಮಾಡುತ್ತೇವೆ. ಮುಂದೆ ಹಬ್ಬ, ಚುನಾವಣೆ ಬರುವ ಸಂದರ್ಭದಲ್ಲಿ ರೌಡಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಹಲವು ರೌಡಿಗಳನ್ನು ಗಡಿಪಾರು ಮಾಡುತ್ತೇವೆ. ಇಲ್ಲಿ 10 ರೌಡಿಗಳನ್ನು ಗಡಿಪಾರು ಮಾಡಲು ಸೂಚನೆ ನೀಡಿದ್ದೇನೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದಾರೆ.












Click it and Unblock the Notifications