ಮಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಕೊನೆಗೂ ಮೋಕ್ಷ, ಶಾಪ ನಿವಾರಣೆಗೆ ಮೋದಿ ಬರಬೇಕಾಯ್ತಾ?
ಮಂಗಳೂರು, ಆಗಸ್ಟ್ 27: ಪ್ರಧಾನಮಂತ್ರಿ ನರೇಂದ್ರ ಮೋದಿ ಸೆಪ್ಟೆಂಬರ್ 2 ರಂದು ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಮೋದಿ ಯಾವ ಮಾರ್ಗದಲ್ಲಿ ಬರುತ್ತಾರೆ ಎನ್ನುವುದು ಇನ್ನು ಖಚಿತವಾಗಿಲ್ಲ. ಆದರೆ ಮೋದಿ ಬರಬಹುದಾದ ರಸ್ತೆಗಳಲ್ಲಿ ತರಾತುರಿಯ ಕಾಮಗಾರಿ ಆರಂಭವಾಗಿದ್ದು, ಇದಕ್ಕೆ ಅಪಸ್ವರ ಕೂಡ ಕೇಳಿ ಬಂದಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ತಿಂಗಳ ಎರಡರಂದು ಕಡಲನಗರಿ ಮಂಗಳೂರಿಗೆ ಆಗಮಿಸಲಿದ್ದಾರೆ. ಅವರ ಆಗಮನಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತ, ಮಂಗಳೂರು ಮಹಾನಗರಪಾಲಿಕೆ, ಸ್ಥಳೀಯ ಶಾಸಕರು, ಸಂಸದರು, ಜನಪ್ರತಿನಿಧಿಗಳು ತಯಾರಿ ನಡೆಸುತ್ತಿದ್ದಾರೆ. ಎಲ್ಲಾ ತಯಾರಿಗಳ ಜೊತೆ ಮಂಗಳೂರಿನ ಕಿತ್ತುಬಂದಿರುವ ರಸ್ತೆಗಳಿಗೆ ಗುಂಡಿ ಮುಚ್ಚೋ ಕೆಲಸ ಕೂಡ ನಡೆಯುತ್ತಿದೆ.
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರ ವಾರ್!
ಪ್ರಧಾನಿ ಮೋದಿ ಮೊದಲು ಕೇರಳಕ್ಕೆ ಬಂದು ನಂತರ ಅಲ್ಲಿಂದ ಮಂಗಳೂರಿಗೆ ಆಗಮಿಸಲಿದ್ದಾರೆ. ಕೇರಳದಿಂದ ಯಾವ ಮಾರ್ಗದಲ್ಲಿ ಬರುತ್ತಾರೆ ಎನ್ನುವುದು ಇನ್ನು ಕೂಡ ಕನ್ಫರ್ಮ್ ಆಗಿಲ್ಲ. ಕೇರಳದಿಂದ ನೇರವಾಗಿ ಹೆಲಿಕಾಪ್ಟರ್ ಮೂಲಕ ಮಂಗಳೂರಿನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವ ಸಾಧ್ಯತೆ ಇದೆ. ಅದಕ್ಕಾಗಿ ಕಾರ್ಯಕ್ರಮ ನಡೆಯುವ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಮೂರು ಹೆಲಿಪ್ಯಾಡ್ ನಿರ್ಮಿಸಲು ತಯಾರಿ ನಡೆಯುತ್ತಿದೆ.
ವರ್ಷದಿಂದ ಇದ್ದ ಗುಂಡಿಗಳಿಗೆ ತೇಪೆ ಕಾರ್ಯ
ಹವಾಮಾನ ವೈಪರೀತ್ಯವಾದರೆ ಕೇರಳದಿಂದ ವಿಮಾನದ ಮೂಲಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ರಸ್ತೆ ಮೂಲಕ ಕಾರ್ಯಕ್ರಮದ ಸ್ಥಳ ತಲುಪಲಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋಲ್ಡ್ ಫಿಂಚ್ ಸಿಟಿ ತಲುಪುತ್ತಾರೆ .ಇಲ್ಲಿ ಬರುವ ರಸ್ತೆ ಗುಂಡಿಮಯವಾಗಿದ್ದು ಈಗ ಮೋದಿ ಬರುತ್ತಿರುವುದರಿಂದ ದುರಸ್ಥಿ ಕಾರ್ಯ ನಡೆಯುತ್ತಿದೆ. ಇನ್ನು ಇದು ತರಾತುರಿಯಲ್ಲಿ ನಡೆಯುತ್ತಿದ್ದು, ಗುಂಡಿ ಬಿದ್ದು ವರ್ಷವಾದರೂ ಸರಿಯಾಗದ ರಸ್ತೆ ಈಗ ತರಾತುರಿಯಲ್ಲಿ ರೆಡಿಯಾಗುತ್ತಿದೆ.
PM Modi Mangaluru Visit : ಸೆ.2 ರಂದು ಮೋದಿ ಮಂಗಳೂರಿಗೆ ಆಗಮನ; ಭರದಿಂದ ಸಾಗಿದ ತಯಾರಿ
ತಾರುತುರಿ ಕಾರ್ಯಕ್ಕರ ಜನರ ಆಕ್ರೋಶ
ಮಳೆಯ ನಡುವೆ ಈ ತರಾತುರಿಯ ಕಾಮಗಾರಿಗೆ ಮಂಗಳೂರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿತ್ಯ ಅದೆಷ್ಟೋ ವಾಹನಗಳು ಅಪಘಾತವಾಗಿ ಜನರು ಗಾಯಗೊಂಡಿದ್ದಾರೆ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ, ಇನ್ನೂ ಕೆಲವರು ಜೀವನ ಕಳೆದುಕೊಂಡಿದ್ದಾರೆ. ಆಗ ಇರದ ಕಾಳಜಿ ಮೋದಿ ಬರುತ್ತಿದ್ದಾರೆ ಎಂದ ತಕ್ಷಣ ಪ್ಯಾಚ್ ವರ್ಕ್ಗೆ ಮುಂದಾಗಿದ್ದಾರೆ. ಇನ್ನು ಮಳೆ ನಡುವೆ ಮಾಡುತ್ತಿರೋ ಈ ಕಾಮಗಾರಿ ಮೋದಿ ಬಂದು ಹೋಗುವಾಗ ಅವರ ಹಿಂದೆಯೆ ಡಾಂಬಾರು ಕೂಡ ಕಿತ್ತು ಹೋಗುತ್ತದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ರಸ್ತೆಗಳ ಬಗ್ಗೆ ಟ್ರೋಲ್ ಮಾಡಲಾಗುತ್ತಿದೆ. ಮೋದಿಯ ಟ್ವಿಟರ್ ಅಕೌಂಟ್ನ್ನು ಎಡಿಟ್ ಮಾಡಿ ತುಳು ಭಾಷೆಯಲ್ಲಿ ರಸ್ತೆ ಅವ್ಯವಸ್ಥೆ ಬಗ್ಗೆ ಬರೆಯಲಾಗಿದೆ. ರಸ್ತೆ ಗುಂಡಿ ಮುಚ್ಚಿ ಆಯ್ತಾ. ನಾನು ಬಂದಾಗ ಒಂದು ಗುಂಡಿ ಕಾಣಿಸಿದ್ರು ವಾಪಾಸ್ ಹೋಗ್ತೀನಿ.. ಎಂದು ಮೋದಿ ಹೇಳೋ ಹಾಗೆ ಅಣಕು ಮಾಡಲಾಗಿದೆ. ವಿಮಾನ ನಿಲ್ದಾಣದಿಂದ ಮಂಗಳೂರು ನಗರಕ್ಕೆ ಬರುವ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿಯ ರಸ್ತೆ ಇಕ್ಕೆಲಗಳ ಗಿಡಗಂಟಿಗಳು ಸ್ವಚ್ಛಗೊಳಿಸಲಾಗಿದೆ,. ಗುಂಡಿಗಳಿಗೆ ತೇಪೆ ಹಾಕಲಾಗುತ್ತಿದೆ.
ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಬಂದಿದ್ದ ಸಂದರ್ಭದಲ್ಲಿ, ರಸ್ತೆಗಳಿಗೆ ಹಾಕಲಾಗಿದ್ದ ಡಾಂಬಾರು ಒಂದೇ ದಿನದಲ್ಲಿ ಎದ್ದು ಹೋಗಿತ್ತು. ಮಂಗಳೂರಿನಲ್ಲೂ ಅದೇ ಪರಿಸ್ಥಿತಿ ಬಾರದಿರಲಿ ಎಂದು ಜನ ಅಭಿಪ್ರಾಯಿಸಿದ್ದಾರೆ.
ಹಲವು ಯೋಜನೆಗಳಿಗೆ ಚಾಲನೆ ಸಾಧ್ಯತೆ
ಮಂಗಳೂರು ನಗರ ಹೊರವಲಯದ ಬಂಗ್ರಕೂಳೂರಿನಲ್ಲಿ ಈ ಸಮಾವೇಶ ನಡೆಯಲಿದ್ದು, ಕೇಂದ್ರ -ರಾಜ್ಯ ಯೋಜನೆಗಳ ಫಲಾನುಭವಿಗಳ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸುಮಾರು ಒಂದೂವರೆ ಲಕ್ಷ ಜನ ಸೇರುವ ನೀರಿಕ್ಷೆಯಿದೆ. ಈ ವೇದಿಕೆಯಿಂದಲೇ ನವಮಂಗಳೂರು ಬಂದರು ಪ್ರಾಧಿಕಾರದಲ್ಲಿ ಸುಮಾರು 3,600 ಕೋಟಿ ಮೊತ್ತದ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಸಿದ್ದತಾ ಕಾರ್ಯ ನಡೆಯುತ್ತಿದೆ. ಕಾರ್ಮಿಕರು ಮೈದಾನದ ಹುಲ್ಲು ತೆಗೆದು ಸ್ವಚ್ಛಗೊಳಿಸುತ್ತಿರುವ ದೃಶ್ಯ ಕಂಡು ಬಂದಿದೆ.. ಜೆ.ಸಿ.ಬಿ, ಹಿಟಾಚಿ ಯಂತ್ರ ಬಳಸಿ ಮೈದಾನ ಸಮತಟ್ಟುಗೊಳಿಸುವ ಕಾರ್ಯವೂ ಭರದಿಂದ ಸಾಗುತ್ತಿದೆ