Get Updates
Get notified of breaking news, exclusive insights, and must-see stories!

ಕಾಸರಗೋಡಲ್ಲಿ ಕನ್ನಡ ಉಳಿಸಲು ಹರಸಾಹಸ:ಶಾಲೆಗಳ ಸ್ಥಿತಿ ಹೇಗಿದೆ ಗೊತ್ತಾ?

ಮಂಗಳೂರು, ಅಕ್ಟೋಬರ್. 31: ಕೇರಳದ ಗಡಿಭಾಗ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಬೇಕೆಂಬ ಕೂಗು ಹಲವಾರು ದಶಕಗಳಿಂದ ಕೇಳುತ್ತಲೇ ಬರುತ್ತಿದೆ. ಕೇರಳ ಸರಕಾರದ ಮಲಯಾಳಂ ಭಾಷಾ ಹೇರಿಕೆ ವಿರುದ್ಧ ಕಾಸರಗೋಡಿನಲ್ಲಿ ಕನ್ನಡ ಹಾಗೂ ಕನ್ನಡ ಸರಕಾರಿ ಶಾಲೆಗಳನ್ನು ಉಳಿಸಲು ಹಲವು ವರ್ಷದಿಂದ ಹೋರಾಟ ನಡೆಯುತ್ತಲೇ ಬಂದಿದೆ.

ಕಡ್ಡಾಯ ಮಲಯಾಳಂ ಭಾಷಾ ಹೇರಿಕೆ, ಇಂಗ್ಲಿಷ್ ಭಾಷೆ ಮೇಲಿನ ವ್ಯಾಮೋಹ, ಅಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ್ಯ, ಕನ್ನಡದ ಮೇಲೆ ಜನರ ಆಸಕ್ತಿ ಕುಂದುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಗಡಿಯಲ್ಲಿ ಕನ್ನಡದ ಧ್ವನಿ ಕ್ಷೀಣಿಸುತ್ತಿದೆ. ಕಾಸರಗೋಡಿನ ಕನ್ನಡ ಶಾಲೆಗಳಲ್ಲಿ ಕನ್ನಡ ಮಕ್ಕಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಲೇ ಇದೆ.

ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳ ನೈಜ ಸ್ಥಿತಿ ಯಾವ ರೀತಿಯಿದೆ? ಕನ್ನಡ ಉಳಿಸಲು ಅಧ್ಯಾಪಕರ ಶ್ರಮದ ಕುರಿತು ಬೆಳಕು ಚೆಲ್ಲುವ ಪುಟ್ಟ ಪ್ರಯತ್ನ ಇಲ್ಲಿದೆ.

ಕಾಸರಗೋಡು ಜಿಲ್ಲೆಯ ಸರಕಾರಿ ಕನ್ನಡ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಕನ್ನಡ ಮಕ್ಕಳ ಸಂಖ್ಯೆ ಕುಸಿಯುತ್ತಿದೆ. ಮಕ್ಕಳನ್ನು ಕನ್ನಡದತ್ತ ಸೆಳೆದು ಸಂಖ್ಯೆ ಹೆಚ್ಚಿಸಲು ಕನ್ನಡ ಶಿಕ್ಷಕರು ಹರಸಾಹಸಪಡುತ್ತಿದ್ದಾರೆ.

ಜನರಲ್ಲಿ ಕನ್ನಡದ ಬಗೆಗೆಗಿನ ನಿರಾಸಕ್ತಿಯ ಪರಿಣಾಮ ಭವಿಷ್ಯದಲ್ಲಿ ಕರ್ನಾಟಕದ ಗಡಿ ಭಾಗ ಕೇರಳದ ಕಾಸರಗೋಡಿನಲ್ಲಿ ಕನ್ನಡ ಸಂಪೂರ್ಣ ಮರೆಯಾಗುವ ಅತಂಕವು ಈಗ ಕಾಡ ತೊಡಗಿದೆ. ಮುಂದೆ ಓದಿ..

 ಭವಿಷ್ಯದಲ್ಲಿ ಕನ್ನಡ ಭಾಷೆಗೆ ಕುತ್ತು

ಭವಿಷ್ಯದಲ್ಲಿ ಕನ್ನಡ ಭಾಷೆಗೆ ಕುತ್ತು

ಕೇರಳ ಸರಕಾರ ಇದೀಗ ಪ್ರತಿಯೊಂದರಲ್ಲೂ ಕಡ್ಡಾಯ ಮಲಯಾಳಂ ಜಾರಿಗೆ ತಂದಿರುವುದರಿಂದ ಹಂತ-ಹಂತವಾಗಿಯೇ ಕನ್ನಡ, ಭವಿಷ್ಯದಲ್ಲಿ ಮರೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪ್ರಸ್ತುತ ಮಂಜೇಶ್ವರ, ಕುಂಬಳೆ, ಕಾಸರಗೋಡು, ಹೊಸದುರ್ಗ ಹಾಗೂ ಬೇಕಲ್ ನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಸೇರಿ ಒಟ್ಟು 189 ಕನ್ನಡ ಶಾಲೆಗಳಿವೆ.

ಕಾಸರಗೋಡಿನಲ್ಲಿ ಸರಕಾರಿ ಶಾಲೆಗಳ ಸ್ಥಿತಿ ಉತ್ತಮವಾಗಿಯೇ ಇದ್ದರೂ, ಕೆಲವು ಅನುದಾನಿತ ಕನ್ನಡ ಶಾಲೆಗಳ ಅಭಿವೃದ್ಧಿ ನಡೆಯಬೇಕಿದೆ. ಆದರೆ, ಇಲ್ಲಿ ಪ್ರತಿವರ್ಷವೂ ಕನ್ನಡ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಮಾತ್ರ ಇಳಿಕೆ ಕಂಡು ಬರುತ್ತಲೇ ಇದೆ.

ಪ್ರತಿಯೊಂದು ಸರಕಾರಿ ಹುದ್ದೆಗೂ ಮಲಯಾಳಂ ಅಧ್ಯಯನ ಕಡ್ಡಾಯ ಮಾಡಿರುವುದರಿಂದ ಈಗಾಗಲೇ ಕನ್ನಡ ಭಾಷೆಯಲ್ಲಿ ಶಿಕ್ಷಣ ಪಡೆದವವರಿಗೆ ಸರಕಾರಿ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸಮಸ್ಯೆಯಾಗಿ ಕಾಡುತ್ತಿದೆ.

ಅಲ್ಲದೇ, ವಿದ್ಯಾರ್ಥಿಗಳು ಕೂಡ ಭವಿಷ್ಯದ ದೃಷ್ಠಿಯಿಂದ ಕನ್ನಡ ಬಿಟ್ಟು ಮಲಯಾಳಂ ಅಧ್ಯಯನದತ್ತವೇ ವಾಲುವ ಸಾಧ್ಯತೆ ಹೆಚ್ಚಾಗಿರುವುದರಿಂದ ಭವಿಷ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಕನ್ನಡಕ್ಕೆ ಕುತ್ತು ಬರೋ ಸಾಧ್ಯತೆಯಿದೆ.

 ಪ್ರೋತ್ಸಾಹ ಕೊಟ್ಟ ಕೇರಳ ಸರ್ಕಾರ

ಪ್ರೋತ್ಸಾಹ ಕೊಟ್ಟ ಕೇರಳ ಸರ್ಕಾರ

ಇನ್ನು ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಇಂಗ್ಲಿಷ್ ವ್ಯಾಮೋಹವೂ ಹೆಚ್ಚಾದ ಕಾರಣ ಅದು ಕನ್ನಡದ ಮೇಲೆ ಪರಿಣಾಮ ಬೀರುತ್ತಿದೆ. ಪೋಷಕರು ಮಕ್ಕಳನ್ನು ಇಂಗ್ಲಿಷ್ ಮಾಧ್ಯಮದ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸುತ್ತಿದ್ದಾರೆ.

ಕಾಸರಗೋಡಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ವರ್ಷಕ್ಕೊಮ್ಮೆ ಕಾರ್ಯಕ್ರಮ ಹಾಗೂ ಹೆಚ್ಚು ಅಂಕ ಗಳಿಸಿದ ಮಕ್ಕಳಿಗೆ ಸ್ಕಾಲರ್ ಶಿಪ್ ವಿತರಣೆ ನಡೆಯುತ್ತದೆ. ಅದನ್ನು ಹೊರತುಪಡಿಸಿ ಕನ್ನಡ ಉಳಿಸಲು ಕರ್ನಾಟಕದಿಂದಲೂ ಹೆಚ್ಚಿನ ಕೊಡುಗೆ ದೊರೆಯುತ್ತಿಲ್ಲ.

ಕನ್ನಡ ಕಲಿಯುವ ಮಕ್ಕಳ ಸಂಖ್ಯೆ ಕಡಿಮೆಯಾಗುವುದನ್ನು ಮನಗಂಡು ಸಾರ್ವಜನಿಕ ಶಿಕ್ಷಣ ಯಜ್ಙ ಹಾಗೂ ಮಧುರ ಕನ್ನಡ ಎನ್ನುವ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಕನ್ನಡದತ್ತ ಆಕರ್ಷಿಸುವ ಪ್ರಕ್ರಿಯೆ ಕೂಡಾ ನಡೆಸಲಾಗುತ್ತಿದೆ. ಇದಕ್ಕೆ ಕೇರಳ ಸರಕಾರ ಸೂಕ್ತ ಪ್ರೋತ್ಸಾಹ ಕೂಡ ನೀಡುತ್ತಿದೆ.

ಉತ್ತಮ ಮಕ್ಕಳ ಸಂಖ್ಯೆಯಿರುವ ಸರಕಾರಿ ಕನ್ನಡ ಶಾಲೆಗೆ ಕೇರಳ ಸರಕಾರ ಪ್ರೋಜೆಕ್ಟರ್, ನೆಲಕ್ಕೆ ಟೈಲ್ಸ್ ವ್ಯವಸ್ಥೆ ಕೂಡ ಮಾಡಿಸುವ ಮೂಲಕ ಶಾಲೆಯ ಗುಣಮಟ್ಟ ಕಾಪಾಡಲು ತನ್ನ ಕೊಡುಗೆ ನೀಡುತ್ತಿದೆ.

ಮಕ್ಕಳ ಸಂಖ್ಯೆ ಕಡಿಮೆ

ಮಕ್ಕಳ ಸಂಖ್ಯೆ ಕಡಿಮೆ

ಕೆಲವು ಅನುದಾನಿತ ಶಾಲೆಗಳನ್ನು ಹೊರತುಪಡಿಸಿ, ಉಳಿದ ಸರಕಾರಿ ಶಾಲೆಗಳಿಗೆ ಉತ್ತಮ ಅನುದಾನ, ಶಿಕ್ಷಕರಿಗೆ ಉತ್ತಮ ವೇತನ ಕೂಡ ನೀಡುತ್ತಿದೆ. ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡು ಕೇರಳ ಸರಕಾರ ಈ ಹಿಂದೆ ಕೂಡ 15 ಮಕ್ಕಳಿಗೆ ಅಥವಾ 10 ಮಕ್ಕಳಿಗೆ ಓರ್ವ ಶಿಕ್ಷಕ ಅನ್ನೋ ನಿಯಮ ಬದಲಾಯಿಸಿ 8 ಮಕ್ಕಳಿಗೆ ಓರ್ವ ಶಿಕ್ಷಕ ಅನ್ನೋ ನಿಯಮ ಪಾಲಿಸುತ್ತಿದೆ.

ಇನ್ನು ಕೆಲವು ಅನುದಾನಿತ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ನಿಗದಿತ ಮಟ್ಟಕ್ಕಿಂತ ಕಡಿಮೆಯಾದಲ್ಲಿ ಕೆಲವು ಶಿಕ್ಷಕರು ಕೆಲಸ ಕಳೆದುಕೊಳ್ಳುವ ಸಾಧ್ಯತೆಗಳಿರುವುದರಿಂದ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಕ್ಕಳನ್ನು ಸೆಳೆಯುವ ಪ್ರಯತ್ನವನ್ನೂ ನಡೆಸುತ್ತಿದ್ದಾರೆ.

ಅಲ್ಲದೇ, 2014ರ ಸಾಲಿನಲ್ಲಿ ನೇಮಕಗೊಂಡ ಮಲಯಾಳಂ ಶಿಕ್ಷಕರನ್ನು ಕನ್ನಡ ಶಾಲೆಯ ಗಣಿತ ಹಾಗೂ ಇತರ ವಿಷಯಕ್ಕೆ ನೇಮಿಸಿದ್ದರಿಂದ ವಿದ್ಯಾರ್ಥಿಗಳಿಗೆ ಅರ್ಥವಾಗದೆ ಸಮಸ್ಯೆಯಾಗಿರುವ ನಿದರ್ಶನವೂ ಇಲ್ಲಿದೆ.

 ಮಕ್ಕಳನ್ನು ಆಕರ್ಷಿಸುವ ಯೋಜನೆ

ಮಕ್ಕಳನ್ನು ಆಕರ್ಷಿಸುವ ಯೋಜನೆ

ಪೈವಳಿಕೆ ನಗರ ಶಾಲೆಯಲ್ಲಿ 815 ಕನ್ನಡ ಮಕ್ಕಳಿದ್ದರೆ, ಕಾಯರ್ ಕಟ್ಟೆ ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ 200ರ ಗಡಿ ದಾಟುವುದಿಲ್ಲ. ಇನ್ನು ಕೈರಂಗಳದ ಅನುದಾನಿತ ಶಾಲೆಯಲ್ಲಿ ಕೇವಲ 25. ಹೀಗೆ ಪ್ರತಿಯೊಂದು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಒಂದೊಂದು ರೀತಿಯಲ್ಲಿದ್ದರೂ, ವರ್ಷದಿಂದ ವರ್ಷಕ್ಕೆ ಕನ್ನಡ ಮಕ್ಕಳ ಸಂಖ್ಯೆ ಕಡಿಮೆಯಾಗೋದು ಅಷ್ಟೇ ಸತ್ಯ.

ಹೀಗಾಗಿ ಅನುದಾನಿತ ಶಾಲೆಯ ಅಭಿವೃದ್ಧಿ ಹಾಗೂ ಕನ್ನಡ ಮಕ್ಕಳ ಸಂಖ್ಯೆಯಲ್ಲಿ ಕುಸಿತ ಮನಗಂಡು ಚಿತ್ರ ನಿರ್ದೇಶಕ ಹಾಗೂ ನಟ ವೃಷಬ್ ಶೆಟ್ಟಿ ಮತ್ತು ತಂಡ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ಚಿತ್ರೀಕರಣದ ಬಳಿಕ ಕೈರಂಗಳದಲ್ಲಿರುವ ಅನುದಾನಿತ ಸರಕಾರಿ ಶಾಲೆಯನ್ನು ದತ್ತು ಪಡೆಯಲು ನಿರ್ಧರಿಸಿದೆ.

ಈ ಶಾಲೆಯಲ್ಲಿ 7 ನೇ ತರಗತಿಯವರೆಗೆ ಕಲಿಸಲಾಗುತ್ತಿದ್ದರೂ ಇರೋದು ಮಾತ್ರ 25 ವಿದ್ಯಾರ್ಥಿಗಳು. ಶಾಲೆಗೆ ಒಬ್ಬ ಮುಖ್ಯೋಪಾಧ್ಯಾಯರಿದ್ದು, ಇನ್ನೊಬ್ಬರು ಅತಿಥಿ ಶಿಕ್ಷಕರಿದ್ದಾರೆ. ಹೀಗಾಗಿ ಈಗಾಗಲೇ ಶಾಲೆಯ ಆಡಳಿತ ಸಮಿತಿಯ ಜತೆ ಮಾತುಕತೆ ನಡೆಸಿ ಶಾಲೆಯ ಅಭಿವೃದ್ಧಿ ನಡೆಸುವ ಮೂಲಕ ಹೆಚ್ಚು ಮಕ್ಕಳನ್ನು ಆಕರ್ಷಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+