ಪುತ್ತೂರಿನ ಹಿರೇಬಂಡಾಡಿಯಲ್ಲಿ ಆಲಿಕಲ್ಲು ಮಳೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿಯಲ್ಲಿ ಮಂಗಳವಾರ ರಾತ್ರಿ ಭಾರೀ ಗಾಳಿಯೊಂದಿಗೆ ಬಂದ ಆಲಿಕಲ್ಲು ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.
ಮಂಗಳೂರು, ಮಾರ್ಚ್ 22 : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಹಿರೇಬಂಡಾಡಿಯಲ್ಲಿ ಮಂಗಳವಾರ ರಾತ್ರಿ ಭಾರೀ ಗಾಳಿಯೊಂದಿಗೆ ಆಲಿಕಲ್ಲು ಮಳೆಯಾಗಿದೆ. ಜೆಲ್ಲಿಯಷ್ಟು ದೊಡ್ಡ ಆಲಿಕಲ್ಲುಗಳು ಬಿದ್ದು ಹಲವು ಅವಾಂತರಗಳಿಗೆ ಕಾರಣವಾಗಿವೆ.
ಶಾಖೆಪುರ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮೇಲ್ಫಾವಣಿಯ ಸಿಮೆಂಟ್ ಶೀಟ್, ಗಾಳಿಗೆ ಹಾರಿ ಧ್ವಂಸಗೊಂಡಿದೆ. ಕರೆಂಕಿ ಬಳಿ ನೆಹರು ತೋಟ- ವಳಕಡಮ ಸಂಪರ್ಕ ರಸ್ತೆಯಲ್ಲಿ ವಿದ್ಯುತ್ ಕಂಬವೊಂದು ತುಂಡಾಗಿ ಬಿದ್ದಿದೆ. ಕುಬಲ ಎಂಬಲ್ಲಿ ಮರ ಬಿದ್ದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾನಿಗೊಂಡಿದೆ. ದಾಮೋದರ ಕೇಪು ಎಂಬುವವರಿಗೆ ಸೇರಿದ 15 ಹಾಗೂ ಉಮೇಶ್ ಎಂಬವರಿಗೆ ಸೇರಿದ ಸುಮಾರು 20 ಅಡಿಕೆ ಮರಗಳು ಮುರಿದುಬಿದ್ದಿವೆ.[ಬಂಟ್ವಾಳ ತಾಲೂಕಿನಾದ್ಯಂತ ಗುಡುಗು, ಮಿಂಚು ಸಹಿತ ಭಾರೀ ಮಳೆ]

ಕಾರೆದಕೋಡಿ ಹಾಗೂ ಸೀಂಕ್ರ ಕೊಡಂಗೆ ಎಂಬಲ್ಲಿ ವಿದ್ಯುತ್ ತಂತಿಗಳ ಮೇಲೆ ಮರ ಉರುಳಿಬಿದ್ದಿದೆ. ಇದರಿಂದ ತಂತಿಗಳು ತುಂಡಾಗಿದ್ದು, ವಿದ್ಯುತ್ ವ್ಯತ್ಯಯವಾಗಿರುವುದಷ್ಟೇ ಅಲ್ಲದೆ, ಈ ಭಾಗದ ಜನರಿಗೆ ರಸ್ತೆಯಲ್ಲಿ ಓಡಾಡುವುದಕ್ಕೂ ಭಯವಾಗುವಂತಾಗಿದೆ. ನಿಡ್ಡೆಂಕಿಯ ಚಿದಾನಂದ ಎಂಬವರ ದನದ ಕೊಟ್ಟಿಗೆಯ ಸುಮಾರು 15ರಷ್ಟು ಶೀಟ್ಗಳು ಗಾಳಿಗೆ ಹಾರಿ ಹೋಗಿ ಸಂಪೂರ್ಣ ಧ್ವಂಸಗೊಂಡಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ.[ನಾಪತ್ತೆಯಾಗಿದ್ದ ಯುವತಿ, ಆರೋಪಿ ಪೊಲೀಸ್ ಠಾಣೆಯಲ್ಲಿ ಪ್ರತ್ಯಕ್ಷ]
ಹಿರೇಬಂಡಾಡಿ ಗ್ರಾಪಂ ಸದಸ್ಯೆ ಚಂದ್ರಾವತಿಯವರಿಗೆ ಸೇರಿದ ಜಾಗದಲ್ಲಿದ್ದ ಎರಡು ವಿದ್ಯುತ್ ಕಂಬಗಳ ಮೇಲೆ ಮರಬಿದ್ದು, ಕಂಬಗಳು ತುಂಡಾಗಿವೆ. ಕರೆಂಕಿ ವೆಂಕಟ್ರಮಣ ಗೌಡರ 40 ಅಡಿಕೆಮರಗಳು ಮುರಿದು ಬಿದ್ದಿವೆ. ಕೊಟ್ಟಿಗೆಯ ಹೆಂಚುಗಳು ಗಾಳಿಗೆ ಹಾರಿ ಹೋಗಿವೆ. ದಿ. ನಾರ್ಣಪ್ಪ ಗೌಡ ಎಂಬವರಿಗೆ ಸೇರಿದ 50 ಅಡಿಕೆ ಮರಗಳು ಮುರಿದು ಬಿದ್ದಿವೆ. ಹಲವೆಡೆಗಳಲ್ಲಿ ವಿದ್ಯುತ್ ವ್ಯತ್ಯಯಗೊಂಡಿದೆ. ಉಪ್ಪಿನಂಗಡಿ ಸುತ್ತಮುತ್ತವೂ ಮಳೆಯಾಗಿದೆ. .












Click it and Unblock the Notifications