ತಂದೆಯಿಂದ ಅತ್ಯಾಚಾರಕ್ಕೊಳಗಾದ ಬಾಲಕಿಯ ಎಸ್ಸೆಸ್ಸೆಲ್ಸಿ ಸಾಧನೆ ಗೊತ್ತಾ?
ಮಂಗಳೂರು, ಮೇ 10: ಸಮಾಜವೇ ಬದಲಾಗಿದೆಯೋ ಅಥವಾ ಸಮಾಜದಲ್ಲಿರುವವರ ಮನಸ್ಥಿತಿ ಬದಲಾಗಿದೆಯೋ ತಿಳಿಯುತ್ತಿಲ್ಲ. ಮಗು ಹುಟ್ಟಿದಾಗಮಗುವನ್ನು ಕೈಗೆತ್ತಿಕೊಂಡಾಗ ಖುಷಿಯಿಂದ ತಂದೆಯ ಕಣ್ಣಲ್ಲಿ ಎರಡು ಹನಿ ನೀರು ಬರುತ್ತದೆ.
ಇನ್ನು ದಿನದಿಂದ ದಿನಕ್ಕೆ ಮಗಳು ಬೆಳೆಯುತ್ತಾ ಹೋದಂತೆ ತಂದೆ ಅವಳೊಂದಿಗೆ ಹೆಜ್ಜೆಹಾಕಿ ಹೆಗಲ ಮೇಲೆ ಕುಳಿಸಿಕೊಂಡು ಊರೆಲ್ಲಾ ಸುತ್ತಿಸುತ್ತಾನೆ. ಆದರೆ ಈಗ ಕೆಲವು ಪ್ರಕರಣಗಳು ಸಮಾಜವನ್ನು ಬೆಚ್ಚಿ ಬೀಳಿಸುತ್ತಿದೆ. ಆದರೆ ಮಂಗಳೂರಿನಲ್ಲಿ ತಂದೆಯಿಂದಲೇ ಅತ್ಯಾಚಾರಕ್ಕೀಡಾಗಿ 8 ತಿಂಗಳ ಗರ್ಭಿಣಿಯಾದರೂ ಧೃತಿಗೆಡದೆ 10 ನೇ ತರಗತಿ ಪರೀಕ್ಷೆ ಬರೆದು ಪ್ರಥಮದರ್ಜೆಯಲ್ಲಿ ಪಾಸಾಗಿದ್ದಾಳೆ. ಇದು ಇಂತಹ ಅತ್ಯಾಚಾರಕ್ಕೆ ಒಳಗಾದ ನೂರಾರು ಹೆಣ್ಣುಮಕ್ಕಳಿಗೆ ನಿದರ್ಶನವಾಗಿದೆ.
SSLC ಫಲಿತಾಂಶ: ಉಡುಪಿಗೆ ಮೊದಲ ಸ್ಥಾನ, ಯಾದಗಿರಿ ಕೊನೆಯ ಸ್ಥಾನ
ತಂದೆಯಿಂದಲೇ ಅತ್ಯಾಚಾರಕ್ಕೀಡಾಗಿ 8 ತಿಂಗಳ ಗರ್ಭಿಣಿಯಾದರೂ ದೃತಿಗೆಡದೆ 10ನೇ ತರಗತಿ ಪರೀಕ್ಷೆ ಬರೆದು ಬಾಲಕಿಯೊಬ್ಬಳು ಸಾಧನೆ ಮಾಡಿದ್ದಾಳೆ. 8 ತಿಂಗಳ ಗರ್ಭವನ್ನು ತನ್ನ ಒಡಲಲ್ಲಿ ಹೊತ್ತಿರುವ ಈಕೆ 10ನೇ ತರಗತಿ ಪರೀಕ್ಷೆಯಲ್ಲಿ 360 ಅಂಕಗಳನ್ನು ಗಳಿಸಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾಳೆ.
ಬಾಲಕಿ ತನ್ನ ತಂದೆಯಿಂದಲೇ ಅತ್ಯಾಚಾರಕ್ಕೀಡಾಗಿದ್ದರು. ಸಂತ್ರಸ್ಥೆಯ ತಾಯಿ ಮತ್ತು ಬಾಲಕಿ ಗರ್ಭಪಾತಕ್ಕಾಗಿ ಸರ್ಕಾರಿ ಆಸ್ಪತ್ರೆಗೆ ಬಂದಾಗ ಆಕೆಗಾದ ಅನ್ಯಾಯ ಬೆಳಕಿಗೆ ಬಂದಿತ್ತು. ಆದರೆ ಅದಾಗಲೇ ಪರಿಸ್ಥಿತಿ ಕೈ ಮೀರಿತ್ತು.
ಬಾಲಕಿ ಅದಾಗಲೇ 6 ತಿಂಗಳ ಗರ್ಭಿಣಿಯಾಗಿದ್ದಳು. ಈ ಹಿನ್ನಲೆಯಲ್ಲಿ ಜೀವಕ್ಕೆ ಅಪಾಯ ಬರಬಹುದೆಂದು ವೈದ್ಯರು ಗರ್ಭಪಾತಕ್ಕೆ ನಿರಾಕರಿಸಿದ್ದರು. ನಂತರ ವೈದ್ಯರೇ ಮುಂದೆ ನಿಂತು ಬಾಲಕಿಯ ತಂದೆಯ ವಿರುದ್ಧ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದರು.
ಅತ್ಯಾಚಾರ ಪ್ರಕರಣ ದಾಖಲಾದ ನಂತರ ಪೊಲೀಸರು ಬಾಲಕಿಯ ತಂದೆಯನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದರು. ನಂತರ ಸಂತ್ರಸ್ಥೆ ಬಾಲಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಅಲ್ಲಿ ಆಕೆಗೆ ಆಪ್ತ ಸಮಾಲೋಚನೆ ನಡೆಸಿ 10ನೇ ತರಗತಿ ಪರೀಕ್ಷೆ ಬರೆಯಲು ಧೈರ್ಯ ತುಂಬಲಾಯಿತು. ಹೀಗಾಗಿ ಬಾಲಕಿ ಆತ್ಮವಿಶ್ವಾಸದಿಂದ ಪರೀಕ್ಷೆಯನ್ನೆದುರಿಸಿದ್ದಾಳೆ.
ಹಾಲ್ ಟಿಕೆಟ್ ಪಡೆಯುವಾಗಿ ಸಮಸ್ಯೆ: 10ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕಿಗೆ ಹಾಲ್ ಟಿಕೆಟ್ ಪಡೆಯುವಾಗ ಸಮಸ್ಯೆ ಎದುರಾಗಿತ್ತು. ಕಾರಣ ಆಕೆಯ ಸ್ನೇಹಿತೆಯರು ಪರೀಕ್ಷೆ ಬರೆಯುತ್ತಿದ್ದ ಕೇಂದ್ರದಲ್ಲಿಯೇ ಆಕೆಯೂ ಪರೀಕ್ಷೆ ಬರೆಯಬೇಕಿತ್ತು.
ಈ ಮಜುಗುರವನ್ನು ತಪ್ಪಿಸಲು ಆಕೆಯ ದೈಹಿಕ ಶಿಕ್ಷಕರ ಮುತುವರ್ಜಿಯಿಂದ ಆಕೆಯ ಪರೀಕ್ಷಾ ಕೇಂದ್ರವನ್ನು ಬದಲಾಯಿಸಲು ಪ್ರಯತ್ನಿಸಿದರು, ಇದೊಂದು ವಿಶೇಷ ಪ್ರಕರಣವೆಂದು ಮುಖ್ಯಮಂತ್ರಿಗಳಿಗೆ ಹಾಗೂ ಡಿಡಿಪಿಯು ಅವರಿಗೆ ಮನವಿ ಸಲ್ಲಿಸಿದ್ದರು, ಈ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಅದಾಗಲೇ ನೀಡಲಾಗಿದ್ದ ಹಾಲ್ ಟಿಕೆಟ್ನ್ನು ರದ್ದು ಪಡಿಸಿ ಹೊಸದನ್ನು ನೀಡಲಾಯಿತು.
ಆಕೆ ಪರೀಕ್ಷೆ ಬರೆಯುತ್ತಾಳೆ ಎಂಬ ವಿಶ್ವಾಸ ನಮಗಿರಲಿಲ್ಲ. ಕಾರಣ ಆಕೆ ಆಘಾತದಿಂದ ಹೊರಬಂದಿರಲಿಲ್ಲ. ಪರೀಕ್ಷಾ ಕೇಂದ್ರದಲ್ಲಿ ಆಪ್ತ ಸಮಾಲೋಚಕರು ಸಹ ಆಕೆಯ ಜತೆ ಇದ್ದು ಧೈರ್ಯ ತುಂಬಿದ್ದರು, ಆಕೆಯ ಯಶಸ್ಸು ನಮಗೆ ಸಂತೋಷ ತಂದಿದೆ, ಎನ್ನುತ್ತಾರೆ ಮಕ್ಕಳ ರಕ್ಷಣಾ ಕೇಂದ್ರದ ಅಧ್ಯಕ್ಷೆ ರೆನ್ನಿ ಡಿಸೋಜಾ.