ಮಳೆ ನೀರು ಸಂಗ್ರಹದ ಬಗ್ಗೆ ತಿಳಿಯಲು ಪಿಲಿಕುಳಕ್ಕೆ ಬನ್ನಿ
ಮಂಗಳೂರು, ಜುಲೈ 28 : 'ಪಿಲಿಕುಳ ನಿಸರ್ಗಧಾಮದಲ್ಲಿ ಶೀಘ್ರದಲ್ಲೇ ಮಳೆ ನೀರು ಸಂಗ್ರಹ ಕೇಂದ್ರವನ್ನು ಆರಂಭಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ' ಎಂದು ಪಿಲಿಕುಳ ಡಾ. ಶಿವರಾಮ ಕಾರಂತ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದರು.
ಮಂಗಳೂರಿನಲ್ಲಿ ಮಾತನಾಡಿದ ಅವರು, 'ಕೇವಲ ಬೇಸಿಗೆಯಲ್ಲಿ ಮಾತ್ರ ನೀರಿನ ಬಗ್ಗೆ ಚರ್ಚೆಗಳು ನಡೆಯುತ್ತವೆ. ಮಳೆ ಶುರುವಾದ ನಂತರ ಮರೆತು ಹೋಗುತ್ತದೆ. ನೀರಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ' ಎಂದರು.[ಮಲೆನಾಡಿನಲ್ಲೂ ಜಲಕ್ಷಾಮ! ಇದಕ್ಕೆ ಕಾರಣಗಳು ಇಲ್ಲಿವೆ]

ಕೇಂದ್ರದಲ್ಲಿ ಏನಿರುತ್ತದೆ? : ಈ ಕೇಂದ್ರದಲ್ಲಿ ಮಳೆ ನೀರು ಸಂಗ್ರಹದ ಮಾದರಿಗಳು, ಗುಂಡಿಗಳು ಸೇರಿದಂತೆ ಜನರಿಗೆ ಅಗತ್ಯ ಮಾಹಿತಿ ಒದಗಿಸಲಾಗುತ್ತದೆ. ಜಲತಜ್ಞ ಶ್ರೀಪಡ್ರೆ ಅವರು ಈಗಾಗಲೇ ನಿಸರ್ಗಧಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪ್ರಸ್ತಾವನೆ ಒಪ್ಪಿಗೆ ಸಿಕ್ಕ ತಕ್ಷಣ, ಒಂದು ಎಕರೆ ಪ್ರದೇಶದಲ್ಲಿ ಕೇಂದ್ರ ನಿರ್ಮಾಣದ ಕಾಮಗಾರಿ ಆರಂಭಿಸಲಾಗುತ್ತದೆ. [ವಿಶ್ವದ ಏಳು ಅದ್ಭುತಗಳನ್ನು ಮಂಗಳೂರಿನಲ್ಲಿ ನೋಡಿ!]
ಈಗಾಗಲೇ ನಿಸರ್ಗಧಾಮದಲ್ಲಿ ಮಳೆ ನೀರು ಸಂಗ್ರಹ ಮಾಡಲಾಗುತ್ತಿದೆ. ಇದರಿಂದ ಉದ್ಯಾನದ ಕೆರೆಯಲ್ಲಿ ವರ್ಷ ಪೂರ್ತಿ ಸಾಕಷ್ಟು ನೀರು ಲಭ್ಯವಾಗಿದೆ. ಇಲ್ಲಿ ನಾಲ್ಕು ಕೊಳವೆಬಾವಿಗಳು ಇದ್ದು, ಅವುಗಳಲ್ಲಿಯೂ ಅಂತರ್ಜಾಲ ಮಟ್ಟ ಉತ್ತಮವಾಗಿದೆ.
ಒಟ್ಟೂ 350 ಎಕರೆ ಹೊಂದಿರುವ ನಿಸರ್ಗಧಾಮದಲ್ಲಿ ಜೈವಿಕ ಉದ್ಯಾನವನ ಮಹತ್ವದ್ದಾಗಿದೆ. ದೇಶದಲ್ಲಿ ಒಟ್ಟೂ 280 ಪ್ರಾಣಿ ಸಂಗ್ರಹಾಲಯಗಳಿದ್ದು , ಅವುಗಳಲ್ಲಿ 14 ದೊಡ್ಡ ಪ್ರಾಣಿ ಸಂಗ್ರಹಾಲಯಗಳು ಎಂದು ಗುರುತಿಸಲಾಗಿದೆ. ಪಿಲಿಕುಳದ ಪ್ರಾಣಿ ಸಂಗ್ರಹಾಲಯವು 14ರಲ್ಲಿ ಸ್ಥಾನ ಪಡೆದಿದೆ.
ಈಗಾಗಲೇ 18ಕೋಟಿ ರೂ. ವೆಚ್ಚದಲ್ಲಿ ಇಕೋ ಪಾರ್ಕ್ ಸ್ಥಾಪನೆಯ ಕಾಮಗಾರಿ ಆರಂಭವಾಗಿದೆ. ಎಚ್ ಪಿಸಿಎಲ್ ನೆರವಿನಿಂದ ಜೈವಿಕ ಮಾಹಿತಿ ಕೇಂದ್ರವನ್ನು 28ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.












Click it and Unblock the Notifications