ಕರಾವಳಿಯಲ್ಲಿ ಮಳೆ ಕೊರತೆ; ಮೀನು ಮಾರಾಟಕ್ಕೂ ಬೀಳುವುದೇ ಹೊಡೆತ?
ಮಂಗಳೂರು, ಜುಲೈ 30: ಕರಾವಳಿಯಲ್ಲಿ ವಾಡಿಕೆಗಿಂತ ಈ ಬಾರಿ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡಾ 76ರಷ್ಟು ಮಳೆ ಕೊರತೆಯಾಗಿದೆ. ಹೀಗೆ ಮಳೆ ಕಡಿಮೆಯಾಗಿರುವುದು ರೈತರಿಗೆ ಮಾತ್ರವಲ್ಲ, ಮೀನುಗಾರರಲ್ಲೂ ಆತಂಕ ತಂದಿದೆ.
ಮಳೆಯಿಲ್ಲದಿದ್ದರೆ ಮೀನುಗಳ ವಂಶಾಭಿವೃದ್ಧಿ ಕುಂಠಿತಗೊಳ್ಳಲಿದ್ದು, ನಿರೀಕ್ಷಿತ ಮಟ್ಟದಲ್ಲಿ ಮೀನು ದೊರೆಯದೇ ಆದಾಯ ಕುಸಿಯಲಿದೆ ಎಂಬ ಆತಂಕ ಮೀನುಗಾರರದ್ದಾಗಿದೆ. ಇದು ರಾಜ್ಯದ ಆರ್ಥಿಕತೆ ಮೇಲೂ ಪರಿಣಾಮ ಬೀರಲಿದೆ.
ಕರ್ನಾಟಕದ ಕರಾವಳಿಯಲ್ಲಿ 240ರಷ್ಟು ವಿವಿಧ ಜಾತಿಯ ಮೀನುಗಳು ದೊರೆಯುತ್ತವೆ. ಆದರೆ ಈ ಬಾರಿ ಮುಂಗಾರು ಮಳೆಯ ಕೊರತೆಯಿಂದಾಗಿ ಮೀನುಗಾರಿಕಾ ಕ್ಷೇತ್ರಕ್ಕೆ ಭಾರೀ ಏಟು ಬೀಳುವುದಾಗಿ ಅಂದಾಜಿಸಲಾಗಿದೆ. ಮೀನುಗಳ ವಂಶಾಭಿವೃದ್ಧಿಗಾಗಿ ವಿಜ್ಞಾನಿಗಳ ಸೂಚನೆಯಂತೆ ಜೂನ್ ತಿಂಗಳಿಂದ ಜುಲೈ ತಿಂಗಳ ಕೊನೆಯವರೆಗೆ ಮೀನುಗಾರಿಕೆಯನ್ನು ನಿಷೇಧಿಸಲಾಗುತ್ತದೆ. ಈ ಸಂದರ್ಭದಲ್ಲಿ ಮುಂಗಾರು ಮಳೆ ಸುರಿಯುತ್ತಿದ್ದಂತೆ ಮೀನುಗಳು ವಂಶಾಭಿವೃದ್ಧಿಗೆ ಮುಂದಾಗುತ್ತವೆ.

ಮಳೆ ಆರಂಭವಾಗುತ್ತಿದ್ದಂತೆ ಪಶ್ಚಿಮ ಘಟ್ಟಗಳಿಂದ ಹರಿದು ಬರುವ ನೀರು ಭೂ ಭಾಗದಿಂದ ಪೋಷಕಾಂಶ, ಲವಣ ಹಾಗೂ ಖನಿಜಾಂಶಗಳನ್ನು ತನ್ನೊಂದಿಗೆ ಹರಿಸಿಕೊಂಡುಬರುತ್ತದೆ. ಇದರಿಂದ ಸೂಕ್ಷ್ಮ ಸಸ್ಯ ಹಾಗೂ ಸೂಕ್ಷ್ಮಜೀವಗಳು ಬೆಳೆಯುತ್ತವೆ. ಸೂಕ್ತ ಆಹಾರ, ಖನಿಜಾಂಶಗಳು ದೊರೆಯುತ್ತಿದ್ದಂತೆ ಸಮುದ್ರ ತೀರಕ್ಕೆ ಬಂದು ಮೀನುಗಳು ಮರಿ ಮಾಡುತ್ತವೆ. ಇದರಿಂದ ಅವುಗಳ ಸಂತತಿ ಹೆಚ್ಚುತ್ತದೆ. ಆದರೆ ಜಾಗತಿಕ ತಾಪಮಾನದಿಂದಾಗಿ ಪ್ರಸ್ತುತ ಮಳೆ ಬೀಳುವ ಸಮಯ ವ್ಯತ್ಯಯಗೊಳ್ಳುತ್ತಿದೆ.
ಸೂಕ್ತ ಸಮಯದಲ್ಲಿ ಮಳೆ ಬಾರದ ಕಾರಣ ಮೀನುಗಳ ಸಂತತಿ ಹಾಗೂ ವಂಶಾಭಿವೃದ್ಧಿಯಲ್ಲಿ ವ್ಯತ್ಯಯವಾಗುತ್ತದೆ. ಸಾಮಾನ್ಯವಾಗಿ ಸಮುದ್ರದಲ್ಲಿ ಶೇ.32ರಷ್ಟು ಉಪ್ಪಿನಂಶ ಇರುತ್ತದೆ. ಸಮುದ್ರದ ನೀರು ಹಾಗೂ ಸಿಹಿ ನೀರು ಸೇರುವಲ್ಲಿ ಶೇ.4ರಿಂದ 12ರಷ್ಟು ಉಪ್ಪಿನ ಪ್ರಮಾಣವಿರುತ್ತದೆ. ಈ ಉಪ್ಪಿನಂಶವಿರುವ ನೀರಿನಲ್ಲೇ ಬಹಳಷ್ಟು ಮೀನುಗಳು ಮರಿ ಮಾಡಲು ಪ್ರಾರಂಭಿಸುತ್ತವೆ. ಯಾವಾಗ ನಿರೀಕ್ಷಿತ ಪ್ರಮಾಣದಲ್ಲಿ ಸಿಹಿ ನೀರು ಸೇರುವುದಿಲ್ಲವೋ ಆಗ ಉಪ್ಪಿನಂಶ ಹೆಚ್ಚಾಗುತ್ತದೆ. ಆಗ ಮೀನುಗಳ ದೇಹದಲ್ಲಿ ಬದಲಾವಣೆಯಾಗಿ ತನ್ನ ದೇಹದ ಶಕ್ತಿಯನ್ನು ಸಂತಾನೋತ್ಪತ್ತಿಗೆ ಖರ್ಚು ಮಾಡುವುದಿಲ್ಲ.
ಈ ಕಾರಣದಿಂದಾಗಿ ಮೀನುಗಳ ಉತ್ಪಾದನೆ ಕಡಿಮೆಯಾಗುತ್ತದೆ. ಜಾಗತಿಕ ತಾಪಮಾನದ ಪರಿಣಾಮ ವಾಡಿಕೆ ಮಳೆಯಲ್ಲಿ ವ್ಯತ್ಯಯ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮೀನುಗಳ ಉತ್ಪಾದನೆ ಮಾತ್ರವಲ್ಲದೇ, ಅವುಗಳ ಗಾತ್ರವೂ ಕಡಿಮೆಯಾಗಬಹುದು.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈವರೆಗೆ ಶೇ.70ರಷ್ಟು ಮಳೆ ಕಡಿಮೆಯಾಗಿದ್ದು, ಮೀನುಗಾರಿಕಾ ಕ್ಷೇತ್ರಕ್ಕೆ ಭಾರೀ ಸಮಸ್ಯೆಯಾಗಿ ಕಾಡಬಹುದು ಎಂದು ಮಂಗಳೂರು ಮೀನುಗಾರಿಕಾ ಕಾಲೇಜಿನ ಜಲಜೀವಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ. ಶಿವಕುಮಾರ ಮಗಧ ಅಭಿಪ್ರಾಯಪಟ್ಟಿದ್ದಾರೆ.
ಆಗಸ್ಟ್ ತಿಂಗಳಿಂದ ಮತ್ತೆ ಮೀನುಗಾರಿಕೆ ಪ್ರಾರಂಭಗೊಳ್ಳಲಿದೆ. ಮೀನುಗಳು ದೊರೆಯದಿದ್ದಲ್ಲಿ ಮೀನುಗಾರರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಕಳೆದ ಬಾರಿಯೂ ಮೀನುಗಾರರಿಗೆ ನಷ್ಟವಾಗಿತ್ತು. ಈ ಬಾರಿ ಮಳೆ ಕೊರತೆ ಮೀನುಗಾರರ ಗಾಯದ ಮೇಲೆ ಮತ್ತೆ ಬರೆ ಎಳೆದಿದೆ.












Click it and Unblock the Notifications