ಭಾರೀ ಮಳೆ: ಅಂಗರಗುಂಡಿ ರೈಲ್ವೆ ಅಂಡರ್ ಪಾಸ್ ಸಂಚಾರ ಸ್ಥಗಿತ
ಮಂಗಳೂರು, ಜೂನ್ 13 : ಕರಾವಳಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೆ ಅಂಡರ್ ಪಾಸಿನಲ್ಲಿ ಕೃತಕ ನೆರೆ ಸೃಷ್ಟಿಯಾಗಿದೆ. ಈ ಹಿನ್ನಲೆಯಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ.
ಸಾರ್ವಜನಿಕರ ಬೇಡಿಕೆಯಂತೆ ಅಂಡರ್ ಪಾಸ್ ನಿರ್ಮಿಸಿ ಎರಡು ತಿಂಗಳ ಹಿಂದೆಯಷ್ಟೇ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಗಿದ್ದ ಬೈಕಂಪಾಡಿ ಸಮೀಪದ ಅಂಗರಗುಂಡಿ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ. ಇದರಿಂದ ಮಳೆ ಬಂದರೆ ಸಾಕು ನೀರು ತುಂಬಿಕೊಂಡು ಸಂಚಾರಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸೋಮವಾರ ಸಂಜೆ ನೀರು ನಿಂತಿತ್ತಾದರೂ ಅದು ಹೇಗೋ ಒದ್ದಾಡಿಕೊಂಡು ವಾಹನ ಸವಾರರು ತೆರಳುತ್ತಿದ್ದರು. ಆದರೆ, ಇಂದು (ಮಂಗಳವಾರ) ನೀರಿನ ಮಟ್ಟ ಏರಿಕೆಯಾಗಿದ್ದು, ಭಾರೀ ವಾಹನಗಳಿಗೆ ತೆರಳಲು ಸಾಧ್ಯವಾಗಿಲ್ಲ.
ಅಂಡರ್ ಪಾಸ್ ನಿರ್ಮಾಣದ ಸಂದರ್ಭದಲ್ಲಿ ಪಕ್ಕದಲ್ಲಿ ಚರಂಡಿಗಳನ್ನು ನಿರ್ಮಿಸಿದ್ದರೂ ಅದರಲ್ಲಿ ನೀರು ಹರಿಯಲು ಸಾಧ್ಯವಾಗದೇ ರಸ್ತೆಯಲ್ಲೇ ಜಮಾವಣೆಯಾಗುತ್ತದೆ. ಇದೀಗ ನಮಗೆ ದ್ವೀಪದ ಅನುಭವವಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಸೈದುದ್ದೀನ್ ದೂರಿದ್ದಾರೆ.
ಆದ್ದರಿಂದ ಈ ಬಗ್ಗೆ ರೈಲ್ವೇ ಇಲಾಖೆ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.












Click it and Unblock the Notifications