ಪುತ್ತೂರು; ಬುದ್ದಿಮಾಂದ್ಯರಿಗಾಗಿ ಜೀವನ ಮುಡುಪಿಟ್ಟ ದಂಪತಿ!
ಮಂಗಳೂರು, ಡಿಸೆಂಬರ್ 29; ಬುದ್ದಿಮಾಂದ್ಯ ಸಹೋದರನನ್ನು ಕಳೆದುಕೊಂಡ ಯುವಕನೋರ್ವ ತನ್ನ ಜೀವಿತಾವಧಿಯನ್ನು ವಿಶೇಷ ಮಕ್ಕಳ ಪಾಲನೆ-ಪೋಷಣೆಗಾಗಿ ಮುಡಿಪಾಗಿಟ್ಟಿದ್ದಾರೆ. ಮನೆ ಮಂದಿಯ ಜೊತೆಗೆ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಬುದ್ಧಿಮಾಂದ್ಯರಿಗೆ ಆಶ್ರಯ ನೀಡಿ, ಅವರ ಪಾಲಿಗೆ ಹೊಸ ಸಂತಸ ಕೊಡುವಲ್ಲಿ ಈ ಯುವಕನ ಕೊಡುಗೆ ಅಪಾರವಾಗಿದೆ. ಕಳೆದ ಐದು ವರ್ಷಗಳಿಂದ ಬುದ್ಧಿಮಾಂದ್ಯ ಮಕ್ಕಳು ಹಾಗೂ ಹಿರಿಯರನ್ನು ಸಾಕಿ-ಸಲಹುತ್ತಿರುವ ಈ ಯುವಕನ ಅಸಾಧಾರಣ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆಯೂ ಕೇಳಿ ಬರುತ್ತಿದೆ.
ಎಲ್ಲವೂ ಸರಿಯಿದ್ದವರನ್ನೇ ನೋಡಿಕೊಳ್ಳಲು ಜನ ಹಿಂದು-ಮುಂದು ನೋಡುವ ಈ ಕಾಲದಲ್ಲಿ ಸರಿ-ತಪ್ಪು ಎನ್ನುವುದನ್ನು ತಿಳಿಯದಾದ ಬುದ್ಧಿಮಾಂದ್ಯರನ್ನು ಸಮಾಜ ಹಾಗೂ ಸ್ವಂತ ಜನರೇ ತಾತ್ಸಾರ ಭಾವದಿಂದ ನೋಡುತ್ತಾರೆ. ಇದೇ ರೀತಿಯ ಮಕ್ಕಳನ್ನು ನೋಡಲು ಸಾಧ್ಯವಿಲ್ಲದೆ, ವಿಶೇಷ ಮಕ್ಕಳನ್ನು ಬೀದಿಗೆ ತಳ್ಳುವ ಪ್ರಕ್ರಿಯೆಯೂ ಸಾಮಾನ್ಯವಾಗಿ ನಡೆಯುತ್ತಿರುತ್ತದೆ.
ಈ ಅಂಗವಿಕಲ ಭಿಕ್ಷುಕನ ವಾರ್ಷಿಕ ಆದಾಯ 4 ಲಕ್ಷ, ಹೆಂಡತಿಯರು ಮೂವರು
ಇಂತಹ ಮಕ್ಕಳಿಗೆ ಜೀವನ ಶಿಕ್ಷಣವನ್ನು ನೀಡಿ, ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನವೊಂದನ್ನು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಯುವಕನೋರ್ವ ಕಳೆದ ಐದು ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ.
ಪುತ್ತೂರು; ಬ್ರಹ್ಮಕಲಶೋತ್ಸವಕ್ಕೆ ಜಾಲತಾಣದ ಮೂಲಕ ಒಂದೂವರೆ ಕೋಟಿ ಸಂಗ್ರಹ!
ಅಣ್ಣಪ್ಪ ಎನ್ನುವ ಈ ಯುವಕ ಬುದ್ಧಿಮಾಂದ್ಯ ಮಕ್ಕಳನ್ನು ಹಾಗೂ ಹಿರಿಯರನ್ನು ಸಾಕಿ-ಸಲಹುವ ಜವಾಬ್ದಾರಿಯನ್ನು ಹೊತ್ತು ದಿನದ ಇಪ್ಪತ್ತನಾಲ್ಕು ಗಂಟೆಯೂ ಈ ವಿಶೇಷ ಮಕ್ಕಳ ಜೊತೆಯಲ್ಲೇ ಕಳೆಯುತ್ತಿದ್ದಾರೆ. ಮನೆ ಮಂದಿಗೆ ಹಾಗೂ ಸಮಾಜಕ್ಕೆ ಕೆಲವು ಸಂದರ್ಭಗಳಲ್ಲಿ ಅಪಾಯಕಾರಿಯಾಗಿ ಕಾಡುವ ಈ ಮಕ್ಕಳನ್ನು ಇದೇ ಆಶ್ರಮಕ್ಕೆ ತರಲಾಗುತ್ತಿದ್ದು, ಅಣ್ಣಪ್ಪ ಇಂಥ ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಈ ಮಕ್ಕಳು ನೆಮ್ಮದಿಯ ಬದುಕು ಬದುಕುವಂತೆ ನೋಡಿಕೊಳ್ಳುತ್ತಿದ್ದಾರೆ.
ಪುತ್ತೂರು; ಅಡಿಕೆಯಿಂದ ತಯಾರಾಯ್ತು ಘಮ ಘಮ ಹೋಳಿಗೆ!
ಸದ್ಯಕ್ಕೆ 14 ವಿಶೇಷ ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಣ್ಣಪ್ಪರ ಸೇವೆಗೆ ಪತ್ನಿಯೂ ನೆರವಾಗುತ್ತಿದ್ದಾರೆ. ಹುಟ್ಟಿನಿಂದಲೇ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಮಕ್ಕಳು ಅಣ್ಣಪ್ಪ ಬಳಿ ಸೇರಿದ ಬಳಿಕ ತಮ್ಮ ನಡವಳಿಕೆಯಲ್ಲಿ ಹೆಚ್ಚಿನ ಬದಲಾವಣೆಯನ್ನು ಕಂಡುಕೊಳ್ಳುತ್ತಿದ್ದಾರೆ. ಪ್ರತೀ ದಿನವೂ ಮಕ್ಕಳಿಗೆ ದೈನಂದಿನ ಚಟುವಟಿಕೆಗಳನ್ನು ತಾವೇ ಮಾಡಿಕೊಳ್ಳುವ ತರಬೇತಿಯನ್ನು ನೀಡಲಾಗುತ್ತಿದ್ದು, ಬಳಿಕ ಮಕ್ಕಳಿಗೆ ಯೋಗ ಹಾಗೂ ವ್ಯಾಯಾಮವನ್ನು ಹೇಳಿಕೊಡಲಾಗುತ್ತಿದೆ.
ಈ ಮಕ್ಕಳು ಎಲ್ಲಾ ಮಕ್ಕಳಂತೆ ಶಿಕ್ಷಣ ಪಡೆಯಬೇಕು ಎನ್ನುವ ಕಾರಣಕ್ಕೆ ಇರುವ ವ್ಯವಸ್ಥೆಯಲ್ಲಿಯೇ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಇಲ್ಲಿ ನೀಡಲಾಗುತ್ತಿದೆ. ಪುತ್ತೂರಿನ ಬಲಮುರಿ ಗಣಪತಿ ದೇವಸ್ಥಾನದ ಬಳಿ ಬಾಡಿಗೆ ಮನೆಯೊಂದರಲ್ಲಿ ಈ ಮಕ್ಕಳನ್ನು ಸಲಹುತ್ತಿದ್ದ ಅಣ್ಣಪ್ಪರ ಸೇವೆಯನ್ನು ಪರಿಗಣಿಸಿ ಪುತ್ತೂರು ಶಾಸಕರು ಬೀರಮಲೆ ಗುಡ್ಡದಲ್ಲಿ ಮಕ್ಕಳನ್ನು ಸಾಕಲು ಬೇಕಾದ ವ್ಯವಸ್ಥೆಯನ್ನು ಮಾಡಿದ್ದಾರೆ. ಈ ಹಿಂದೆ ದೂರದರ್ಶನ ಕೇಂದ್ರವಾಗಿದ್ದ ಕಟ್ಟಡದಲ್ಲಿ ಆಶ್ರಮಕ್ಕೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸಿದ್ದು, ಸಂಘ-ಸಂಸ್ಥೆಗಳೂ ಅಣ್ಣಪ್ಪರ ಈ ಕೈಂಕರ್ಯದಲ್ಲಿ ತಮ್ಮ ಕೈ ಜೋಡಿಸಿವೆ.
ಪುತ್ತೂರಿನ ಬೀರಮಲೆ ಬೆಟ್ಟದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಈ ಆಶ್ರಮವನ್ನು ನಡೆಸಲಾಗುತ್ತಿದ್ದು, ದಾನಿಗಳು ಎಲ್ಲಾ ರೀತಿಯ ಸಹಾಯಗಳನ್ನು ಮಾಡುತ್ತಿದ್ದಾರೆ. ತಮ್ಮ ಎರಡು ಮುದ್ದು ಮಕ್ಕಳ ಜೊತೆಗೆ ವಿಶೇಷ ಮಕ್ಕಳನ್ನೂ ಮಕ್ಕಳಂತೆ ಸಾಕುತ್ತಿರುವ ಅಣ್ಣಪ್ಪ ದಂಪತಿಗಳು ತಮ್ಮ ರಾತ್ರಿ ಹಗಲು ಮಕ್ಕಳಿಗಾಗಿಯೇ ಮುಡಿಪಾಗಿಟ್ಟಿದ್ದಾರೆ. ವಿಶೇಷ ಮಕ್ಕಳ ಲಾಲನೆ ಪಾಲನೆಗೆ ವಿಶೇಷ ಕಾಳಜಿಯ ಅಗತ್ಯವಿದ್ದು, ಈಗಿರುವ ಕಟ್ಟಡದ ಸುತ್ತ ಸರಿಯಾದ ತಡೆಬೇಲಿ ಇಲ್ಲದ ಕಾರಣ ಮಕ್ಕಳು ರಸ್ತೆ ಪಕ್ಕ ಹೋಗುತ್ತಿದ್ದು, ಉತ್ತಮ ತಡೆಬೇಲಿಯ ವ್ಯವಸ್ಥೆಗಾಗಿ ದಂಪತಿಗಳು ದಾನಿಗಳ ಸಹಕಾರ ಕೋರುತ್ತಿದ್ದಾರೆ.
ಮಕ್ಕಳ ಆರೋಗ್ಯದಲ್ಲಿ ಯಾವ ಸಂದರ್ಭದಲ್ಲೂ ಏರುಪೇರಾಗುವ ಸಾಧ್ಯತೆಯಿದ್ದು, ಈ ಸಂದರ್ಭದಲ್ಲಿ ಮಕ್ಕಳನ್ನು ಆಸ್ಪತ್ರೆಗೆ ಸಾಗಿಸಲು ಒಂದು ವಾಹನದ ಅನಿವಾರ್ಯತೆಯಲ್ಲೂ ಆಶ್ರಮವಿದೆ. ಅಲ್ಲದೆ ಸ್ವಂತ ಕಟ್ಟಡವೊಂದಿದ್ದಲ್ಲಿ, ವಿಶೇಷ ಮಕ್ಕಳಿಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನೂ ಮಾಡಬಹುದಿತ್ತು ಎನ್ನುವ ಅಭಿಲಾಷೆಯನ್ನೂ ಈ ದಂಪತಿಗಳು ಹೊಂದಿದ್ದಾರೆ.
ಎಲ್ಲವೂ ಸರಿಯಿರುವ ಮಕ್ಕಳನ್ನೇ ಸರಿಯಾಗಿ ನೋಡಿಕೊಳ್ಳಲಾಗದ ಪೋಷಕರಿರುವ ಈ ಕಾಲದಲ್ಲಿ ಈ ವಿಶೇಷ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿರುವ ಅಣ್ಣಪ್ಪ ದಂಪತಿಗಳ ಕಾರ್ಯ ಶ್ಲಾಘನೀಯವಾಗಿದೆ. ಸರಕಾರ ಇಂಥ ವ್ಯಕ್ತಿಗಳನ್ನು ಗುರುತಿಸಿ, ಅವರಿಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವತ್ತ ಚಿತ್ತ ಹರಿಸಬೇಕಿದೆ.