ಅವೈಜ್ಞಾನಿಕ ಕಾಮಗಾರಿ: ಭಾರೀ ಮಳೆಗೆ ಮುಳುಗಿದ ಪಂಪ್ವೆಲ್ ಫ್ಲೈ ಓವರ್ ಸರ್ವೀಸ್ ರಸ್ತೆ
ಮಂಗಳೂರು, ಮೇ 29: ರಾಜ್ಯಕ್ಕೆ ಮುಂಗಾರು ಆಗಮನಕ್ಕೆ ದಿನಗಣನೆ ಆರಂಭವಾಗಿದೆ. ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ವಾತವರಣವಿದ್ದು, ಮಂಗಳೂರಿನಲ್ಲಿ ಶನಿವಾರ ಮುಂಜಾನೆ ಭಾರೀ ಮಳೆ ಸುರಿದು ಅವಾಂತರ ಸೃಷ್ಟಿಯಾಗಿದೆ.
ಶನಿವಾರ ಮುಂಜಾನೆ ಸತತ ಎರಡು ಗಂಟೆಗಳ ಕಾಲ ಮಂಗಳೂರು ನಗರದಲ್ಲಿ ಮಳೆ ಸುರಿದಿದ್ದು, ಪಂಪ್ವೆಲ್ ಫ್ಲೈ ಓವರ್ನ ಸರ್ವೀಸ್ ರಸ್ತೆಗಳು ಜಲಾವೃತಗೊಂಡು ಜನರು ಪರದಾಡುವಂತಾಗಿದೆ.
ಪಂಪ್ವೆಲ್ ಫ್ಲೈ ಓವರ್ ಕೆಳಗೆ ರಾಜಕಾಲುವೆ ಹರಿದು ಹೋಗುತ್ತಿದ್ದು, ಸತತ ಮಳೆ ಸುರಿದ ಪರಿಣಾಮ ಮಳೆ ನೀರು ಸರಾಗವಾಗಿ ಹರಿದು ಹೋಗಲಾರದೆ ಫ್ಲೈ ಓವರ್ ಕೆಳಗಿನ ಸರ್ವೀಸ್ ರಸ್ತೆಯಲ್ಲಿಯೇ ನೀರು ಹರಿದಿದೆ. ಇದರಿಂದ ಸರ್ವೀಸ್ ರಸ್ತೆ ಜಲಾವೃತವಾಗಿದ್ದು, ವಾಹನ ಸಂಚಾರಕ್ಕೂ ತೊಡಕು ಉಂಟಾಗಿದೆ.

ಲಾಕ್ಡೌನ್ ಸಡಿಲಿಕೆ ವೇಳೆಯಲ್ಲಿಯೇ ರಸ್ತೆಯೂ ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ತಡೆಯುಂಟಾಗಿದ್ದು, ಜನ ಅವೈಜ್ಞಾನಿಕ ಕಾಮಗಾರಿ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಹತ್ತು ವರ್ಷಗಳ ಕಾಲ ಕಾಮಗಾರಿ ನಡೆದು ನಿಧಾನಗತಿ ಕಾಮಗಾರಿ ವಿರುದ್ಧ ಜನ ಟೀಕಾ ಪ್ರಹಾರವನ್ನೇ ಮಾಡಿದ್ದರು.

ಜನರ ಸಾಕಷ್ಟು ಟೀಕೆ ಬಳಿಕ ಕಳೆದ ವರ್ಷ ಜನವರಿಯಲ್ಲಿ ಫ್ಲೈ ಓವರ್ ಉದ್ಘಾಟನಾ ಭಾಗ್ಯ ಕಂಡಿತ್ತು. ಆದರೆ, ಮಳೆ ಬಂದರೆ ಫ್ಲೈ ಓವರ್ ಅಡಿ ನೀರಿನಿಂದ ತುಂಬಿ ಹೋಗುತ್ತಿದ್ದು, ಸಂಸದ ನಳಿನ್ ಕುಮಾರ್ ಕಟೀಲ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಜನ ಟೀಕೆ ಮಾಡಿದ್ದಾರೆ.

ಎರಡು ಗಂಟೆಯ ಮಳೆಗೆ ಜಲಾವೃತವಾಗುತ್ತಿದ್ದು, ಈ ಬಾರಿ ಮಳೆಗಾಲದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಿಂಗಳಾಂತ್ಯಕ್ಕೆ ಮುಂಗಾರು ಕೇರಳ ಪ್ರವೇಶಿಸುತ್ತಿದ್ದು, ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೂ ಮುಂಗಾರು ಪ್ರವೇಶಿಸಲಿದೆ.












Click it and Unblock the Notifications