ಮಕ್ಕಳ ಕಳ್ಳನೆಂದು ಭಾವಿಸಿ ಮಗುವಿನ ತಂದೆಯನ್ನೇ ಥಳಿಸಿದ ಸಾರ್ವಜನಿಕರು
ಮಂಗಳೂರು, ಜುಲೈ.06: ಮಕ್ಕಳ ಕಳ್ಳ ಎಂದು ಭಾವಿಸಿ ಮಗುವಿನ ಅಪ್ಪನ ಮೇಲೆ ಹಲ್ಲೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಈ ಘಟನೆ ಸಂಭವಿಸಿದೆ.
ಮಗುವಿನ ಜೊತೆ ಹೋಟೆಲ್ ನಲ್ಲಿ ಕೂತಿದ್ದ ವ್ಯಕ್ತಿಯನ್ನು ನೋಡಿದ ಸ್ಥಳೀಯರು ಅನುಮಾನಗೊಂಡು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತ ಅನುಮಾನಸ್ಪದವಾಗಿ ಉತ್ತರಿಸಿದ್ದಾನೆ. ಅಷ್ಟೇ ಅಲ್ಲ ಆತ ವಿಪರೀತವಾಗಿ ಕುಡಿದಿದ್ದ.
ಇದನ್ನೆಲ್ಲಾ ಗಮನಿಸಿದ ಸಾರ್ವಜನಿಕರು ಈತ ಮಕ್ಕಳ ಕಳ್ಳನಿರಬೇಕೆಂದು ಭಾವಿಸಿ ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಳ್ತಂಗಡಿ ಠಾಣಾ ಪೊಲೀಸರು, ವಿಚಾರಣೆ ನಡೆಸಿದಾಗ ಆತ ಆ ಮಗುವಿನ ತಂದೆ ಎಂಬುದು ಖಚಿತವಾಗಿದೆ. ಕೊನೆಗೆ ಪೊಲೀಸರು ಮಗುವಿನ ತಂದೆಯನ್ನು ರಕ್ಷಿಸಿದ್ದಾರೆ.

ಇಂತಹ ಘಟನೆಗಳು ಆಗಾಗ ರಾಜ್ಯದ ಕೆಲವೆಡೆ ಸಂಭವಿಸುತ್ತಿದ್ದು, ಪೊಲೀಸರು ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಲು ಯತ್ನಿಸುತ್ತಿದ್ದಾರೆ. ಆದರೂ ಬಹುತೇಕರು ಸುಳ್ಳು ವದಂತಿಗಳನ್ನು ನಂಬಿ ಮಕ್ಕಳ ಕಳ್ಳ ಎಂದು ಭಾವಿಸಿ ಅಮಾಯಕರನ್ನು ಥಳಿಸಿ, ಕೊಲ್ಲುವ ಪ್ರಸಂಗಗಳು ನಡೆಯುತ್ತಲೇ ಇವೆ.

ನಮ್ಮ ರಾಜ್ಯದಲ್ಲಿ ಅಷ್ಟೇ ಅಲ್ಲ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ರಾಜಸ್ಥಾನದಲ್ಲಿಯೂ ಮಕ್ಕಳ ಕಳ್ಳ ಎಂದು ಭಾವಿಸಿ ಅಮಾಯಕರನ್ನು ಹೊಡೆದು, ಕಂಬಕ್ಕೆ ಕಟ್ಟಿ ಹಾಕಿ ಥಳಿಸುವ ಘಟನೆಗಳು ಹೆಚ್ಚುತ್ತಲಿವೆ.












Click it and Unblock the Notifications