ಮಂಗಳೂರು ದಕ್ಷಿಣಕ್ಕೆ ಬಂಪರ್ ಕೊಡುಗೆ ಕೊಟ್ಟ ಸರ್ಕಾರ
ಮಂಗಳೂರು, ನವೆಂಬರ್ 26 : ಕರ್ನಾಟಕ ಸರ್ಕಾರ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡಿದೆ. ಶಕ್ತಿನಗರ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರ್ಕಾರ ಅಧಿಕೃತವಾದ ಆದೇಶ ಹೊರಡಿಸಿದೆ.
ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಶಕ್ತಿನಗರದ ನಾಲ್ಯ ಪದವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸ್ಥಾಪನೆಗೆ ಸರಕಾರದ ಆದೇಶ ಬಂದಿದೆ. ಆ ಮೂಲಕ ಈ ಭಾಗದ ಜನರ ಬಹುಕಾಲದ ಕನಸು ಈಡೇರಿದಂತಾಗಿದೆ" ಎಂದು ಹೇಳಿದ್ದಾರೆ.
"ಶಕ್ತಿನಗರ ಪರಿಸರದ ವಿದ್ಯಾರ್ಥಿಗಳು ತಮ್ಮ ಕಾಲೇಜು ಶಿಕ್ಷಣಕ್ಕಾಗಿ ನಗರಕ್ಕೆ ಬರಬೇಕಿತ್ತು. ಈ ಪರಿಸರದ ಜನರ ಬೇಡಿಕೆಯನ್ನು ಈಡೇರಿಸುವ ಪ್ರಯತ್ನಕ್ಕೆ ಇಂದು ಫಲ ದೊರೆತಿದೆ" ಎಂದು ಶಾಸಕರು ಫೇಸ್ ಬುಕ್ ಮೂಲಕ ಮಾಹಿತಿ ನೀಡಿದ್ದಾರೆ.

"ಒಬ್ಬ ಶಾಸಕನಾಗಿ ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ ನೆಮ್ಮದಿ ಇದೆ. ಮುಂದಿನ ದಿನಗಳಲ್ಲಿ ಈ ಭಾಗದ ವಿದ್ಯಾರ್ಥಿಗಳು ಶಕ್ತಿನಗರದಲ್ಲೇ ತಮ್ಮ ಪದವಿ ವಿದ್ಯಾಭ್ಯಾಸ ಮುಂದುವರಿಸಬಹುದು. ಈಗ ನಾಲ್ಯಪದವಿನಲ್ಲಿರುವ ಶಾಲಾ ಕಟ್ಟಡದಲ್ಲೇ ಕಾಲೇಜು ತರಗತಿ ಆರಂಭವಾಗಲಿದೆ. ಮುಂದಿನ ದಿನಗಳಲ್ಲಿ ಕಾಲೇಜಿಗೆ ಹೊಸತಾದ ಕಟ್ಟಡ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗುವುದು" ಎಂದು ಶಾಸಕರು ತಿಳಿಸಿದ್ದಾರೆ.
ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆ; "ನಾನು ಶಾಸಕನಾಗಿ ಆಯ್ಕೆಯಾದ ಪ್ರಾರಂಭದ ದಿನಗಳಲ್ಲಿ ನಾಲ್ಯಪದವಿನಲ್ಲಿ ಪದವಿಪೂರ್ವ ಕಾಲೇಜು ಸ್ಥಾಪನೆಯ ಕುರಿತು ಸಾರ್ವಜನಿಕರ ಜೊತೆ ಚರ್ಚಿಸಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೆ" ಎಂದು ಶಾಸಕರು ಹೇಳಿದ್ದಾರೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಜೊತೆ ಈ ವಿಚಾರವಾಗಿ ಚರ್ಚಿಸಿ ಕಾಲೇಜು ಸ್ಥಾಪನೆಗೆ ಮನವಿ ಮಾಡಿದ್ದೆ. ಇಂದು ಸರಕಾರವು ಕಾಲೇಜು ಸ್ಥಾಪನೆಗೆ ಅಧಿಕೃತ ಆದೇಶ ಹೊರಡಿಸಿದೆ. ಇದಕ್ಕಾಗಿ ಶಿಕ್ಷಣ ಸಚಿವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.












Click it and Unblock the Notifications