ಮಂಗಳೂರಲ್ಲಿ ಟಿಪ್ಪು ಜಯಂತಿಗೆ ಅಡ್ಡಿ, ಪೋಸ್ಟರ್ ಗೆ ಚಪ್ಪಲಿ ಹಾರ
ಮಂಗಳೂರು, ನ.10: ಕರ್ನಾಟಕ ಸರ್ಕಾರದ ಆದೇಶದಂತೆ ನವೆಂಬರ್ 10ರಂದು ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಆಚರಿಸಲು ಮುಂದಾದ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ. ವಿಶ್ವಹಿಂದೂಪರಿಷತ್, ಭಜರಂಗ ದಳ ಸೇರಿದಂತೆ ಹಿಂದೂಪರ ಸಂಘಟನೆ ಕಾರ್ಯಕರ್ತರು ಸೋಮವಾರ ರಾತ್ರಿಯಿಂದಲೇ ಟಿಪ್ಪು ಜಯಂತಿ ಆಚರಣೆಗೆ ಅಡ್ಡಿ ಪಡಿಸಿದ್ದಾರೆ.
ಟಿಪ್ಪು ಜಯಂತಿಗೆ ಶುಭಕೋರಲು ಹಾಕಲಾಗಿದ್ದ ಪೋಸ್ಟರ್ ಗಳಿಗೆ ಟಾರ್ ಬಳಿದು ಚಪ್ಪಲಿ ಹಾರ ಹಾಕಿದ ಘಟನೆ ಪಂಪ್ ವೆಲ್ ಬಳಿ ನಡೆದಿದೆ. [ಕೊಡಗು ಬಂದ್, ಕಲ್ಲು ತೂರಾಟದಲ್ಲಿ ಗಾಯಗೊಂಡ ವ್ಯಕ್ತಿ ಸಾವು]

ಈ ಪೋಸ್ಟರ್ ಗಳನ್ನು ಸೋಮವಾರ ಮಧ್ಯರಾತ್ರಿಯ ವೇಳೆಗೆ ಹಾಕಲಾಗಿತ್ತು. ಅದರೆ, ಮಂಗಳವಾರ ಬೆಳಗ್ಗೆ ಪೋಸ್ಟರ್ ಗಳಿಗೆ ಟಾರ್ ಬಳಿದ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವು ಜಿಲ್ಲೆಯಲ್ಲಿ ಶಾಂತಿ ಕದಡಲು ದುಷ್ಕರ್ಮಿಗಳು ಮಾಡಿರುವ ಹುನ್ನಾರ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜ್ಯ ಸರಕಾರ ಮೈಸೂರನ್ನು ಆಳಿದ್ದ ಟಿಪ್ಪು ಸುಲ್ತಾನನ ಜನ್ಮದಿನಾಚರಣೆಯನ್ನು ಆಚರಿಸಲು ಸಕಲ ಸಿದ್ಧತೆಗಳನ್ನು ನಡೆಸಿದೆ. ಆದರೆ ಈ ಆಚರಣೆಗೆ ಹಿಂದೂ ಸಂಘಟನೆಗಳು, ಕ್ರೈಸ್ತ ಸಂಸ್ಥೆಗಳು ಮತ್ತು ಕೊಡವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಟಿಪ್ಪು ಹಿಂದೂ ವಿರೋಧಿ ಎಂದು ಹಿಂದೂಗಳು ದೂರಿದ್ದರೆ, ಆತ ಲಕ್ಷಾಂತರ ಕ್ರೈಸ್ತರನ್ನು ಹತ್ಯೆ ಮಾಡಿದ್ದ ಎಂಬುದು ಕ್ರೈಸ್ತರ ಆರೋಪ. ಇನ್ನು ಆತ ಕೊಡವರಿಗೂ ಹಿಂಸೆ ನೀಡಿದ್ದಾನೆ ಎಂಬ ತರ್ಕ ಕೊಡವರದ್ದು. ಹೀಗೆ ಟಿಪ್ಪು ಜಯಂತಿ ವಿವಾದಗಳಿಂದಲೇ ಸುತ್ತುವರಿದಿದೆ.
ಸದ್ಯ ನಡೆದಿರುವ ಘಟನೆಯ ಬಗ್ಗೆ ಪಂಪ್ ವೆಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಇನ್ನೊಂದೆಡೆ ಊರ್ವ ಠಾಣೆ ವ್ಯಾಪ್ತಿಯಲ್ಲಿ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.












Click it and Unblock the Notifications