ದಕ್ಷಿಣ ಕನ್ನಡ; ಕೊರೊನಾ ರೋಗಿ ಅಂತ್ಯ ಸಂಸ್ಕಾರಕ್ಕೆ ವಿರೋಧ
ಮಂಗಳೂರು, ಜೂನ್ 28 : ಸ್ಥಳೀಯರ ಪ್ರತಿಭಟನೆ ಹಿನ್ನಲೆಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ರೋಗಿಯ ಶವವನ್ನು ವಾಪಸ್ ತೆಗೆದುಕೊಂಡು ಹೋದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಶನಿವಾರ ರಾತ್ರಿ ಸುರತ್ಕಲ್ ಸಮೀಪದ ಇಡ್ಯದ 31ವರ್ಷದ ಯುವಕ ಕೊರೊನಾ ಸೋಂಕಿನಿಂದಾಗಿ ಮೃತಪಟ್ಟಿದ್ದ. ಭಾನುವಾರ ಬೋಳಾರದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಶವ ತರಲಾಗಿತ್ತು.
ಬೋಳಾರದ ಮಸೀದಿ ಆವರಣದಲ್ಲಿನ ಭೂಮಿಯಲ್ಲಿ ದಫನ್ ಮಾಡಿದರೆ ಇಲ್ಲಿ ಸೋಂಕು ಹರಡುತ್ತದೆ ಎಂದು ಸ್ಥಳೀಯರು ಪ್ರತಿಭಟನೆ ನಡೆಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ವಾಪಸ್ ತೆಗೆದುಕೊಂಡು ಹೋಗಲು ಸೂಚಿಸಿದರು.

ಇಡ್ಯದ ವ್ಯಾಪ್ತಿಯಲ್ಲಿರುವ ದಫನ್ ಭೂಮಿಯಲ್ಲಿನ ಗುಂಡಿಯಲ್ಲಿ ನೀರು ಹರಿದು ಬರುತ್ತಿರುವುದರಿಂದ ಬೋಳಾರದ ಭೂಮಿಯಲ್ಲಿ ದಫನ್ ಮಾಡಲು ತೀರ್ಮಾನಿಸಲಾಗಿತ್ತು. ಮಸೀದಿಯವರು ಒಪ್ಪಿದರೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರಿಂದ ದಫನ್ ನಡೆಯಲಿಲ್ಲ.
ಯುವಕನ ಮೃತದೇಹ ದಫನ್ ಮಾಡಲು ಮುಖಂಡರು, ಮಸೀದಿಯ ಪದಾಧಿಕಾರಿಗಳು, ಸಮಿತಿಯ ಸದಸ್ಯರು, ಜಮಾತ್ ಸದಸ್ಯರ ಬೆಂಬಲವೂ ಇತ್ತು. ಆದರೆ, ಮಸೀದಿಗೆ ಸಂಬಂಧವಿಲ್ಲದ ಕೆಲವು ಸ್ಥಳೀಯರು ವಿರೋಧ ವ್ಯಕ್ತಪಡಿಸಿದರು. ಆದ್ದರಿಂದ, ಶವವನ್ನು ವಾಪಸ್ ತೆಗೆದುಕೊಂಡು ಹೋಗಲಾಗಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹುಸೈನ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ ಇಬ್ಬರು ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಶನಿವಾರ ಜಿಲ್ಲೆಯಲ್ಲಿ 49 ಹೊಸ ಪ್ರಕರಣ ದಾಖಲಾಗಿತ್ತು.












Click it and Unblock the Notifications