ಮಂಗಳೂರು ಗಲಭೆ; ಪೊಲೀಸರಿಂದ ಫೋಟೋ ಬಿಡುಗಡೆ
ಮಂಗಳೂರು, ಡಿಸೆಂಬರ್ 23 : ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ಭಾರಿ ಹೋರಾಟ ನಡೆದಿತ್ತು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ನಡೆಸಿದ ಗೋಲಿಬಾರ್ನಲ್ಲಿ ಇಬ್ಬರು ಮೃತಪಟ್ಟಿದ್ದರು.
ಮಂಗಳೂರು ನಗರ ಪೊಲೀಸರು ಡಿಸೆಂಬರ್ 19ರಂದು ನಡೆದ ಪ್ರತಿಭಟನೆಯ ಫೋಟೋ ಮತ್ತು ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಂಗಳೂರು ನಗರ ಪೊಲೀಸ್ ಫೇಸ್ ಬುಕ್ ಪುಟದಲ್ಲಿ ಫೋಟೋವನ್ನು ಹಾಕಿದ್ದು, ಇನ್ನೂ ಚಿತ್ರಗಳಿದ್ದರೆ ಕಳಿಸುವಂತೆ ಜನವರಿ ಮನವಿ ಮಾಡಿದ್ದಾರೆ.
ಸಿಎಎ ವಿರುದ್ಧ ನಡೆದ ಹೋರಾಟದ ಬಗ್ಗೆ ಯಾವುದೇ ಮಾಹಿತಿಗಳಿದ್ದರೆ ಪೊಲೀಸರ ಜೊತೆ ಹಂಚಿಕೊಳ್ಳಬಹುದು. ಮಾಹಿತಿ ನೀಡಿದವರ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಪೊಲೀಸರು ಫೇಸ್ ಬುಕ್ನಲ್ಲಿ ಸ್ಪಷ್ಟಪಡಿಸಿದ್ದಾರೆ.

ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಗೋಲಿಬಾರ್ ನಡೆಸಿದ್ದರು. ನೌಶೀನ್ ಕುದ್ರೋಳಿ ಹಾಗೂ ಅಬ್ದುಲ್ ಜಲೀಲ್ ಮೃತಪಟ್ಟಿದ್ದರು. ಕರ್ನಾಟಕ ಸರ್ಕಾರ ಗೋಲಿಬಾರ್ ಬಗ್ಗೆ ಸಿಐಡಿ ತನಿಖೆ ನಡೆಸುವುದಾಗಿ ಘೋಷಿಸಿದೆ.
ಗೋಲಿಬಾರ್ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿವೆ. ನ್ಯಾಯಾಂಗ ತನಿಖೆಗಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಸೋಮವಾರ ಸಿದ್ದರಾಮಯ್ಯ ಮಂಗಳೂರಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದರು.
ಡಿಸೆಂಬರ್ 19ರಂದು ನಡೆದ ಗಲಭೆ ಬಳಿಕ ಮಂಗಳೂರು ನಗರದ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಭಾನುವಾರ ಹಗಲು ಹೊತ್ತು ಕರ್ಫ್ಯೂ ಸಡಿಲಿಕೆ ಮಾಡಲಾಗಿತ್ತು. ಸೋಮವಾರ ಕರ್ಫ್ಯೂ ತೆರವು ಮಾಡಲಾಗಿದ್ದು, ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿದೆ.












Click it and Unblock the Notifications