ಮಂಗಳೂರು ಕಾರಾಗೃಹದಿಂದ ಕೈದಿ ಪರಾರಿ: ಜೈಲು ಅಧೀಕ್ಷಕ ವರ್ಗಾವಣೆ
ಮಾರ್ಚ್ 12ರಂದು ಜೈಲಿನಿಂದ ತಪ್ಪಿಸಿಕೊಂಡಿದ್ದ ಕೈದಿ; ಪ್ರಕರಣದ ತನಿಖೆಯಲ್ಲಿ ಸಿಬ್ಬಂದಿ ಕರ್ತವ್ಯ ಲೋಪ ಸಾಬೀತು; ಅಧೀಕ್ಷಕ ಕೃಷ್ಣಮೂರ್ತಿಗೆ ವರ್ಗಾವಣೆ ಶಿಕ್ಷೆ; ವಾರ್ಡನ್ ಗಳ ಅಮಾನತು.
ಮಂಗಳೂರು : ನಗರದ ಕೇಂದ್ರ ಕಾರಾಗೃಹದಿಂದ ಕೈದಿಯೊಬ್ಬ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನ ಅಧಿಕಾರಿಗಳು ಲೋಪ ಎಸಗಿರುವುದು ತನಿಖೆಯಿಂದ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜೈಲು ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ವರ್ಗಾವಣೆ ಮಾಡಲಾಗಿದೆ. ವಾರ್ಡನ್ ಎಸ್ ಕಠಾರಿ ಮತ್ತು ಬಿ ರಂಗಪ್ಪ ಅವರನ್ನೂ ಅಮಾನತು ಮಾಡಲಾಗಿದೆ.
ಜೈಲು ಅಧೀಕ್ಷಕ ಕೃಷ್ಣಮೂರ್ತಿ ಅವರನ್ನು ಬೆಂಗಳೂರಿನ ಪರಪ್ಪನ ಅಗ್ರಹಾರಕ್ಕೆ ವರ್ಗಾವಣೆ ಮಾಡಲಾಗಿದ್ದರೆ, ಮಂಗಳೂರು ಉಪಕಾರಾಗೃಹದ ನೂತನ ಅಧಿಕ್ಷಕರಾಗಿ ಬೆಂಗಳೂರು ಪರಪ್ಪನ ಅಗ್ರಹಾರದಿಂದ ಸುರೇಶ್ ಅವರನ್ನು ನೇಮಕ ಮಾಡಿ ಬಂಧೀಖಾನೆ ಡಿಜಿಪಿ ಎಚ್ ಎನ್ ಸತ್ಯನಾರಾಯಣ ರಾವ್ ಆದೇಶ ಹೊರಡಿಸಿದ್ದಾರೆ.

ಮಂಗಳೂರು ಸಬ್ಜೈಲಿನಲ್ಲಿದ್ದ ಅತ್ಯಾಚಾರ ಯತ್ನ ಪ್ರಕರಣದ ವಿಚಾರಣಾಧೀನ ಕೈದಿ ಜಿನ್ನಪ್ಪ ಪರವ (43) ಮಾರ್ಚ್ 10ರಂದು ಮುಂಜಾನೆ 3.30ರ ಸುಮಾರಿಗೆ ಜೈಲಿನಿಂದ ಪರಾರಿಯಾಗಿದ್ದ. ಫೆ 12ರಂದು ಈ ಪ್ರಕರಣದ ವಿಶೇಷ ತನಿಖೆಗೆ ನಿಯೋಜನೆಗೊಂಡಿದ್ದ ಬೆಳಗಾವಿ ಡಿಐಜಿ ಟಿ ಪಿ ಶೇಷ ನೇತೃತ್ವದ ತಂಡ ಕಾರಾಗೃಹಕ್ಕೆ ಭೇಟಿ ನೀಡಿ ತನಿಖೆಯನ್ನು ನಡೆಸಿತ್ತು.
ಈ ತಂಡದಲ್ಲಿ ವಿಶೇಷ ಅಧಿಕಾರಿ ಎಸ್ ಆರ್ ಭಟ್ ಕೂಡಾ ಇದ್ದರು. ಬೆಳಿಗ್ಗೆ 8.15ಕ್ಕೆ ಜೈಲಿನೊಳಗೆ ಬಂದಿದ್ದ ಅಧಿಕಾರಿಗಳ ತಂಡ ಸುಮಾರು ಒಂದು ಗಂಟೆಯವರೆಗೂ ವಿಚಾರಣೆಯನ್ನು ಮುಂದುವರಿಸಿತ್ತು. ಅಲ್ಲಿನ ಇತರೆ ವಿಚಾರಣಾಧೀನ ಕೈದಿಗಳಿಂದಲೂ ಮಾಹಿತಿಯನ್ನು ಪಡೆದುಕೊಂಡಿತ್ತು.

ಜೈಲಿನಲ್ಲಿ ಭದ್ರತೆ ಕೊರತೆ ಇದೆ, ಲೋಪ ಎಸಗಲಾಗಿದೆ ಎನ್ನುವ ಸಮಗ್ರ ವರದಿಯನ್ನು ಬಂಧೀಖಾನೆ ಡಿಜಿಪಿ ಸತ್ಯನಾರಾಯಣ ಅವರಿಗೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಡಿಜಿಪಿ ಅವರು ಇದೀಗ ಅಧೀಕ್ಷಕ ಮತ್ತು ವಾರ್ಡನುಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಿದ್ದಾರೆ.











Click it and Unblock the Notifications