ಮೋದಿ ಮಂಗಳೂರು ಭೇಟಿ: 30 ಎಕರೆಯಲ್ಲಿ ಸಮಾವೇಶ, ಬರದಿಂದ ಸಾಗುತ್ತಿರುವ ಸಿದ್ಧತೆ
ಮಂಗಳೂರು, ಆಗಸ್ಟ್ 27: ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 2ರಂದು ಮಂಗಳೂರು ನಗರಕ್ಕೆ ಆಗಮಿಸುತ್ತಿದ್ದು, ಅಂದು ನಗರದ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯಲ್ಲಿ ನಡೆಯಲಿರುವ ಸರಕಾರಿ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭರದಿಂದ ಸಿದ್ಧತೆ ನಡೆಯುತ್ತಿದೆ. ವಿಶಾಲವಾದ ಜರ್ಮನ್ ಪೆಂಡಾಲ್ ಅಳವಡಿಕೆ ಆಗಲಿದ್ದು, ವೇದಿಕೆ ಸೇರಿದಂತೆ ಇಡೀ ಸಭಾಂಗಣ ಸಂಪೂರ್ಣ ನೆಲದಿಂದ ಎತ್ತರಕ್ಕೆ ಇರಲಿದೆ.
ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಸಿಟಿಯ 30 ಎಕರೆ ಜಾಗದಲ್ಲಿ ಸಮಾವೇಶ ನಡೆಯಲಿದೆ. ರಾತ್ರಿ - ಹಗಲು ಮೈದಾನದಲ್ಲಿನ ಗಿಡಗಂಟಿಗಳನ್ನು ತೆಗೆದು ಜೆಸಿಬಿ ಮೂಲಕ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ. ಸಮಾವೇಶಕ್ಕೆ ಬರುವ ಕಾರ್ಯಕರ್ತರು, ಸಾರ್ವಜನಿಕರಿಗೆ ಸುಲಭವಾಗಲು ಡಿವೈಡರ್ಗೆ ಕತ್ತರಿ ಹಾಕಲಾಗಿದೆ. ಅಲ್ಲದೆ ಪ್ರತ್ಯೇಕ ಹೆಚ್ಚುವರಿ ರಸ್ತೆಯನ್ನು ನಿರ್ಮಾಣ ಮಾಡುವ ಕಾರ್ಯವೂ ನಡೆಯುತ್ತಿದೆ.
ಮಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೆ ಕೊನೆಗೂ ಮೋಕ್ಷ, ಶಾಪ ನಿವಾರಣೆಗೆ ಮೋದಿ ಬರಬೇಕಾಯ್ತಾ?
ಕರಾವಳಿಯಲ್ಲಿ ವಾರದಿಂದ ನಿರಂತರ ಮಳೆಯಾಗುತ್ತಿದೆ. ಸೆಪ್ಟೆಂಬರ್ 2 ರಂದು ಭಾರಿ ಮಳೆಯಾಗುವ ಮುನ್ಸೂಚನೆಯಿದೆ. ಆದ್ದರಿಂದ ಮಳೆಗೆ ಯಾವುದೇ ತೊಂದರೆಯಾಗದಂತೆ ಸಮಾವೇಶ ನಡೆಯುವ ಸ್ಥಳವನ್ನು ಪೂರ್ತಿ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದೆ. ಸಮಾವೇಶದ ವೇದಿಕೆಯನ್ನು ನೆಲಮಟ್ಟದಿಂದ ತುಸು ಎತ್ತರದಲ್ಲಿ ಫ್ಲ್ಯಾಟ್ ಫಾರಂ ರಚಿಸಲಾಗುತ್ತಿದೆ. ಮಳೆ ನೀರು ನಿಂತು ಕೆಸರಿನ ತಾಪತ್ರಯ ಆಗದಂತೆ ಜರ್ಮನ್ ಮಾದರಿಯ ಪೆಂಡಾಲ್ ಹಾಕಲಾಗುತ್ತದೆ. ಎನ್ಎಂಪಿಟಿ ಈ ಸಮಾವೇಶದ ಸ್ಥಳ ಸಿದ್ಧತೆಯ ಹೊಣೆಯನ್ನು ಹೊತ್ತಿದೆ.
ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ ಭರತ್ ಶೆಟ್ಟಿ ಮೈದಾನಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಶಾಸಕ ಭರತ್ ಶೆಟ್ಟಿ, ಪ್ರಧಾನಿ ಮೋದಿ ಫಿಶಿಂಗ್ ಬಂದರಿಗೆ ಗುದ್ದಲಿ ಪೂಜೆ, ಎನ್ ಎಂ ಪಿ ಟಿ ಬರ್ತ್ ಲೋಕಾರ್ಪಣೆ ಮತ್ತು ಮೂರು ಸ್ಟೋರ್ ಟ್ಯಾಂಕ್ ಗೆ ಭೂಮಿ ಪೂಜೆ ಮಾಡಲಿದ್ದಾರೆ ಎಂದರು.
ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ನಳಿನ್ ಕುಮಾರ್ ಕಟೀಲ್ ವಿರುದ್ಧ ಕಾರ್ಯಕರ್ತರ ವಾರ್!
ಕಾರ್ಯಕ್ರಮದಲ್ಲಿ ಒಂದೂವರೆ ಲಕ್ಷ ಜನರಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪಾಸ್ ಸೋಲ್ಡ್ ಔಟ್ ಆಗಿದೆ. ನಿರೀಕ್ಷೆಗೂ ಮೀರಿ ಜನ ಬರುವ ಸಾಧ್ಯತೆಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ 35 ಸಾವಿರಕ್ಕೂ ಹೆಚ್ಚು ಜನ ಬರುವ ಸಾಧ್ಯತೆಗಳಿವೆ. ಜಿಲ್ಲಾಡಳಿತ ಮತ್ತು ಜನಪ್ರತಿನಿಗಳು ನಿರಂತರವಾಗಿ ಸ್ಥಳಕ್ಕೆ ಭೇಟಿ ನೀಡಿ ಸಭೆ ಮಾಡುತ್ತಿದ್ದೇವೆ. ಮೈದಾನ ಸಮೀಪ ಮೂರು ಹೆಲಿಕಾಪ್ಟರ್ ಲ್ಯಾಂಡಿಂಗ್ ಗೆ ಬೇಕಾದ ವ್ಯವಸ್ಥೆ ಮಾಡಲಾಗುತ್ತಿದೆ. ಸಾವಿರಾರು ಬಸ್ ಗಳು ಬರುವ ಸಾಧ್ಯತೆಗಳಿದ್ದು, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ. 25 ಎಕರೆ ಪ್ರದೇಶಕ್ಕೆ ಪೆಂಡಾಲ್ ಹಾಕಲಾಗುತ್ತಿದೆ. ಒಂದೂವರೆ ಲಕ್ಷ ಜನರು ಟೆಂಟ್ ಒಳಗೆ ಸೇರಲಿದ್ದಾರೆ ಎಂದು ಹೇಳಿದ್ದಾರೆ.
ಕಾರ್ಯಕ್ರಮ ದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಹಾಗೂ ರಾಜ್ಯದ ಹಲವು ಸಚಿವರು ಸೇರಿದಂತೆ ಬಿಜೆಪಿ ಪ್ರಮುಖರು ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.