ದ.ಕ ಜಿಲ್ಲಾ ಕಾಂಗ್ರೆಸಿಗೆ ನುಂಗಲಾರದ ತುತ್ತಾದ ಲೈಂಗಿಕ ಕಿರುಕುಳ ಪ್ರಕರಣ
ಮಂಗಳೂರು, ಮಾರ್ಚ್ 19: ಇತ್ತೀಚೆಗೆ ನಡೆದ ಮಹಿಳಾ ಕಾರ್ಪೋರೇಟರ್ ಮೇಲಿನ ಲೈಂಗಿಕ ಕಿರುಕುಳ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ ಯಾವುದೇ ಮಹಿಳಾ ಮುಖಂಡರು ಪ್ರತಿಭಾ ಕುಳಾಯಿ ಅವರ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮದೇ ಪಕ್ಷದ ಮಹಿಳಾ ಮುಖಂಡರ ಮೇಲೆ ನಡೆದ ಲೈಂಗಿಕ ಕಿರುಕುಳದ ಬಗ್ಗೆ ಮಹಿಳಾ ಮುಖಂಡರ ಮೌನ ಸಾಮಾನ್ಯ ಜನತೆಯಲ್ಲಿ ಗೊಂದಲ ಮೂಡಿಸಿದೆ.
ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಹಾಗೂ ಕರ್ನಾಟಕ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಪ್ರತಿಭಾ ಕುಳಾಯಿ ಅವರೊಂದಿಗೆ ಅಬ್ದುಲ್ ಸತ್ತಾರ್ ಅಸಭ್ಯವಾಗಿ ವರ್ತಿಸಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ ಅಬ್ದುಲ್ ಸತ್ತಾರ್ ಲೈಂಗಿಕ ಕಿರುಕುಳ ನೀಡುವುದರ ಜೊತೆಗೆ ಆಕೆಯ ಕೌಟುಂಬಿಕ ವಿಚಾರದಲ್ಲೂ ಮೂಗು ತೂರಿಸಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದೆ. ಇದನ್ನು ಪ್ರಶ್ನಿಸಿ ಪ್ರತಿಭಾ ಕುಳಾಯಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದೀನ್ ಬಾವಾ ರ ಕಛೇರಿಯಲ್ಲೇ ಅಬ್ದುಲ್ ಸತ್ತಾರ್ ಕೆನ್ನೆಗೆ ಬಾರಿಸಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗಿ ಬಹಳಷ್ಟು ಸುದ್ದಿ ಮಾಡಿತ್ತು.
ಈ ನಡುವೆ ಲೈಂಗಿಕ ಕಿರುಕುಳ ನೀಡಿದ್ದ ಜಿಲ್ಲಾ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದ ಅಬ್ದುಲ್ ಸತ್ತಾರ್ ನನ್ನು ಕಾಂಗ್ರೆಸ್ ಪಕ್ಷದ ಹುದ್ದೆಯಿಂದ ವಜಾಗೊಳಿಸಿತ್ತು.

ಅಬ್ದುಲ್ ಸತ್ತಾರ್ ಗೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ ನೀಡಿದ್ದ ಧರ್ಮದೇಟು ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಈ ವಿಚಾರವಾಗಿ ಪ್ರತಿಭಾ ಕುಳಾಯಿ ಮಾಧ್ಯಮಗಳಲ್ಲಿ ತನ್ನ ಅಳಲನ್ನೂ ತೋರಿಸಿಕೊಂಡಿದ್ದರು. ಅಲ್ಲದೇ ಟಿವಿ ಚಾನೆಲ್ ಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಿದ್ದರು. ಇದು ಜಿಲ್ಲಾ ಕಾಂಗ್ರೆಸ್ ಮುಖಂಡರ ಕಣ್ಣನ್ನು ಕೆಂಪಾಗಿಸಿದೆ.
ಈ ಹಿನ್ನಲೆಯಲ್ಲಿ ತನ್ನ ವೈಯುಕ್ತಿಕ ವಿಚಾರವನ್ನು ಮಾಧ್ಯಮಗಳ ಮುಂದೆ ತೋಡಿಕೊಂಡ ಪ್ರತಿಭಾ ಕುಳಾಯಿಗೆ ಜಿಲ್ಲಾ ಕಾಂಗ್ರೆಸ್ ಘಟಕ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಶೋಕಾಸ್ ನೋಟಿಸ್ ಇದೀಗ ಭಾರೀ ವಿವಾದಕ್ಕೂ ಕಾರಣವಾಗಿದೆ. ಮಹಿಳೆಯಾಗಿ ಪ್ರತಿಭಾ ಕುಳಾಯಿ ಮಾಧ್ಯಮಗಳ ಮುಂದೆ ತನಗೆ ವೈಯುಕ್ತಿಕವಾಗಿ ಆದ ಸಂಕಷ್ಟವನ್ನು ತೋರ್ಪಡಿಸಿಕೊಂಡಿದ್ದಾರೆ. ಇದರಲ್ಲಿ ಪಕ್ಷದ ಬಗ್ಗೆಯಾಗಲೀ, ಇತರ ನಾಯಕರ ಬಗ್ಗೆಯಾಗಲೀ ಯಾವುದೇ ರೀತಿಯ ಹೇಳಿಕೆಗಳನ್ನು ನೀಡಿರಲಿಲ್ಲ. ಆದರೆ ಜಿಲ್ಲಾ ಘಟಕವು ಪಕ್ಷದ ಶಿಸ್ತು ಉಲ್ಲಂಘಿಸಿ ಮಾಧ್ಯಮದ ಮುಂದೆ ಹೋಗಿರುವುದಕ್ಕೆ ಕಾರಣ ನೀಡುವಂತೆ ನೋಟಿಸ್ ನೀಡಿದೆ.

ಅಲ್ಲದೆ ಪ್ರತಿಭಾ ಕುಳಾಯಿ ಮೇಲೆ ನಡೆದ ಲೈಂಗಿಕ ಕಿರುಕುಳ ವಿಚಾರಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ನ ಯಾವೊಬ್ಬ ಮಹಿಳಾ ಮಣಿಗಳೂ ಒಂದು ಶಬ್ದವನ್ನೂ ಮಾತನಾಡದಿರುವುದು ವಿಪರ್ಯಾಸವಾಗಿದೆ. ಈ ನಡುವೆ ವಿಶ್ವ ಹಿಂದೂ ಪರಿಷತ್ ನ ಮಹಿಳಾ ಘಟಕ ದುರ್ಗಾವಾಹಿನಿ ಪ್ರತಿಭಾ ಮೇಲೆ ನಡೆದ ಕಿರುಕುಳವನ್ನು ಖಂಡಿಸಿದೆ.
ಪ್ರತಿಭಾ ಕುಳಾಯಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣ ಅವರ ತೀರಾ ವೈಯುಕ್ತಿಕ ವಿಚಾರವಾಗಿದ್ದು, ಇದನ್ನೂ ಕೂಡಾ ಪ್ರತಿಭಟಿಸಲು ಪಕ್ಷದ ಅನುಮತಿ ಕೇಳಬೇಕೇ ಎನ್ನುವ ಪ್ರಶ್ನೆ ಇದೀಗ ಸಾಮಾನ್ಯ ಜನತೆಯಲ್ಲಿ ಮೂಡಿದೆ. ಹಾಗಾದರೆ ಪ್ರತಿಭಾ ಕುಳಾಯಿಗೆ ಲೈಂಗಿಕ ಕಿರುಕುಳ ನೀಡಿದ ಅಬ್ದುಲ್ ಸತ್ತಾರ್ ಕಿರುಕುಳ ನೀಡುವ ಮುಂಚೆ ಪಕ್ಷದ ಅನುಮತಿ ಪಡೆದಿದ್ದರೇ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ.












Click it and Unblock the Notifications