ಮುಂದಿನ ಚುನಾವಣೆಯಲ್ಲಿ ಹಿಂದೂ ಕಾರ್ಯಕರ್ತರಿಗೆ 25 ಸೀಟು ಕೊಡಬೇಕು: ಬಿಜೆಪಿಗೆ ಮುತಾಲಿಕ್ ಆಗ್ರಹ
ಮಂಗಳೂರು, ಸೆಪ್ಟೆಂಬರ್ 19: ವಿಧಾನಸಭೆಯಲ್ಲಿ ಹಿಂದುಗಳ ಪರವಾಗಿ ಬಿಜೆಪಿ ಧ್ವನಿ ಎತ್ತಬೇಕು. ಮುಂದಿನ ಚುನಾವಣೆಯಲ್ಲಿ 25 ಸೀಟನ್ನು ಹಿಂದೂ ಕಾರ್ಯಕರ್ತರಿಗೆ ನೀಡಬೇಕು ಎಂದು ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಇತ್ತೀಚೆಗೆ ಪುತ್ತೂರಿನ ಬೆಳ್ಳಾರೆಯಲ್ಲಿ ಹತ್ಯೆಗೀಡಾದ ಬೆಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಪೋಷಕರಿಗೆ ಸಾಂತ್ವನ ಹೇಳಿದರು. ನಂತರ ಮಾತನಾಡಿ, ಪ್ರವೀಣ್ ಸಾವಿಗೆ ನ್ಯಾಯ ಸಿಗುವರೆಗೂ ಇಡೀ ಹಿಂದೂ ಸಮಾಜ ತಮ್ಮ ಜೊತೆ ಇರೋದಾಗಿ ಭರವಸೆ ನೀಡಿದರು.
ಬಳಿಕ ಪ್ರವೀಣ್ ಸಮಾಧಿ ಸ್ಥಳಕ್ಕೆ ತೆರಳಿ ಸಮಾಧಿಗೆ ಕೇಸರಿ ಶಾಲು ಹಾಕಿ ಗೌರವ ಸಲ್ಲಿಸಿದರು. ಪ್ರವೀಣ್ ಹತ್ಯೆಯಾದ ಬೆಳ್ಳಾರೆಯಲ್ಲಿರುವ ಪ್ರವೀಣ್ ಕೋಳಿ ಅಂಗಡಿಗೂ ಭೇಟಿ ನೀಡಿದ ಮುತಾಲಿಕ್, ಸದ್ಯ ಪ್ರವೀಣ್ ಅಂಗಡಿಯನ್ನು ಪಡೆದಿರುವ ಹಿಂದೂ ಕಾರ್ಯಕರ್ತನನ್ನು ಭೇಟಿ ಮಾಡಿ ಶುಭ ಹಾರೈಸಿದ್ದಾರೆ.
ನಂತರ ಮಾತನಾಡಿ, ಪ್ರವೀಣ್ ಹತ್ಯೆಯ ಬಳಿಕ ಜಿಲ್ಲೆಗೆ ಬರದಂತೆ ಸರ್ಕಾರ ಬ್ಯಾನ್ ಮಾಡಿತು. ಹೈಕೋರ್ಟ್ ಮೆಟ್ಟಿಲೇರಿ ಇದಕ್ಕೆ ಸ್ಟೇ ತಂದು ಇವತ್ತು ಪ್ರವೀಣ್ ಮನೆಗೆ ಭೇಟಿ ನೀಡಿದ್ದೇನೆ. ಇಂದಿಗೂ ಪ್ರವೀಣ್ ಮನೆಯವರು ನೋವು ಸಿಟ್ಟಿನಲ್ಲಿದ್ದಾರೆ. ಕೊಲೆಗಟುಕರಿಗೆ ಗಲ್ಲುಶಿಕ್ಷೆ ಆಗುವವರೆಗೆ ದುಃಖ ಶಮನ ಆಗಲ್ಲ ಎಂದಿದ್ದಾರೆ.
ಪ್ರವೀಣ್ ಪತ್ನಿಗೆ ನೌಕರಿ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ರೀತಿಯ ಹೇಳಿಕೆ ಹಿಂದೆಯೂ ಕೊಟ್ಟಿದ್ದಾರೆ. ಆದರೆ ಇದು ಯಾವುದು ಕಾರ್ಯ ರೂಪಕ್ಕೆ ಬಂದಿಲ್ಲ. ಈ ಕೂಡಲೇ ನೌಕರಿ ನೀಡುವ ಆದೇಶ ಮಾಡಬೇಕು. ಇಲ್ಲದಿದ್ದರೆ ಮುಖ್ಯಮಂತ್ರಿ ಮನೆ ಮುಂದೆ ಧರಣಿ ಮಾಡಬೇಕಾಗುತ್ತದೆ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಹಿಂದುತ್ವಕ್ಕಾಗಿ ಜೀವನ ಮುಡಿಪಾಗಿಟ್ಟ ಪ್ರವೀಣ್ ಹತ್ಯೆ ನಡೆಯಬಾರದಿತ್ತು. ಪ್ರವೀಣ್ ಹಂತಕರಿಗೆ ಕೋಕಾ ಕಾಯ್ದೆ ಹಾಕಿ ಜಾಮೀನು ಸಿಗದಂತೆ ಮಾಡಬೇಕು. ಬೊಮ್ಮಾಯಿ ನೀಡಿದ ಭರವಸೆಯಂತೆ ಪ್ರವೀಣ್ ನೆಟ್ಟಾರ್ ಪತ್ನಿಯವರಿಗೆ ಮುಖ್ಯಮಂತ್ರಿ ಕಛೇರಿಯಲ್ಲಿ ಕೆಲಸ ನೀಡಬೇಕು. ಇಲ್ಲದಿದ್ದಲ್ಲಿ ಬೊಮ್ಮಾಯಿ ಮುಖಕ್ಕೆ ಮಸಿ ಬಳಿಯೋದಾಗಿ ಎಚ್ಚರಿಕೆ ನೀಡಿದರು.
ಹಿಂದೂ ಕಾರ್ಯಕರ್ತರಿಗೆ 25 ಸೀಟು ನೀಡಬೇಕು
ಮುಂದಿನ ಚುನಾವಣೆಯಲ್ಲಿ ಹಿಂದುತ್ವದ ಹೆಸರಿನಲ್ಲಿ ಅಧಿಕಾರ ಅನುಭವಿಸಿರುವ ಬಿಜೆಪಿ 25 ಸೀಟನ್ನು ಹಿಂದೂ ಕಾರ್ಯಕರ್ತರಿಗೆ ನೀಡಬೇಕು. ನಾನು ಹಾಗೂ ಶ್ರೀರಾಮ ಸೇನೆ ಹಿಂದುತ್ವದ ವಿಚಾರದಲ್ಲಿ ರಾಜಿ ಪ್ರಶ್ನೆ ಇಲ್ಲ. ನೇರವಾಗಿ ಹೇಳುವ ವ್ಯಕ್ತಿ, ಪ್ರಾಮಾಣಿಕರು ಬೇಡವಾಗಿದ್ದಾರೆ. ಅವರು ನನ್ನನ್ನು ತಡೆಯುತ್ತಿಲ್ಲ ಅವರು ಹಿಂದುತ್ವದ ಶಕ್ತಿಯನ್ನು ತಡೆಯುತ್ತಿದ್ದಾರೆ.
ಹಿಂದೂ ಸಮಾಜ ಇದರಿಂದ ರೋಸಿ ಹೋಗಿದೆ. ಈಗಲೇ ನೀವು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಚುನಾವಣೆಯಲ್ಲಿ ಧೂಳಿಪಟ ಆಗುತ್ತೀರಿ. 25 ಸೀಟುಗಳನ್ನು ಹಿಂದೂ ಕಾರ್ಯಕರ್ತರಿಗೆ ಕೊಡಿ. 150 ಕ್ಕೂ ಹೆಚ್ಚು ಸೀಟು ಗೆಲ್ಲಿಸಿಕೊಡುತ್ತೇವೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕೋರ್ಟ್ ಮಾತು ಕೇಳಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗಿ
ಅಝಾನ್ ನಿಂದಾಗಿ ಇಡೀ ದೇಶದಲ್ಲಿ ಕಿರಿ ಕಿರಿಯಾಗುತ್ತಿದೆ. ಮುಸ್ಲಿಮರು ಸುಪ್ರೀಂ ಕೋರ್ಟ್ಗು ನಮಗೂ ಸಂಬಂಧವಿಲ್ಲ ಎಂಬ ನೀಚ ನಿರ್ಲಜ್ಜ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ನ ಮಾತು ಕೇಳಲ್ಲ ಅಂದರೆ ಪಾಕಿಸ್ತಾನಕ್ಕೆ ಹೋಗಿ. ನಿಮ್ಮ ನಮಾಜಿಗೆ ವಿರೋಧವಿಲ್ಲ, ಶಬ್ದಕ್ಕೆ ನಮ್ಮ ವಿರೋಧ. ನಿಮ್ಮಿಂದಾಗಿ ಎಲ್ಲರಿಗೂ ತೊಂದರೆಯಾಗುತ್ತಿದೆ.
ಈ ನಿರ್ಲಜ್ಜ ಸರಕಾರಕ್ಕೂ ಈ ಆದೇಶ ಜಾರಿಗೊಳಿಸುವ ಮನಸ್ಸಿಲ್ಲ. ಕುರಾನ್ ನಮ್ಮ ಕಾನೂನು ಎಂಬ ಸೊಕ್ಕನ್ನು ನಾವು ಒಪ್ಪಲ್ಲ. ಈಗಾಗಲೇ 25% ಬೆಳಗ್ಗಿನ ಶಬ್ಧ ನಿಂತಿದೆ. ಇಡೀ ದೇಶದಲ್ಲೇ ಮೊದಲ ಬಾರಿಗೆ ಶ್ರೀರಾಮ ಸೇನೆ ಸಂಘಟನೆ ಇದನ್ನು ನಿಲ್ಲಿಸಿದೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.












Click it and Unblock the Notifications