ಬಾಬರನಂತೆ ಸುನ್ನಿ ಮುಸ್ಲಿಮರ ನಾಶ ಮಾಡುವ ಬೆದರಿಕೆ ಹಾಕಿದ ಮುತಾಲಿಕ್
Recommended Video

ಮಂಗಳೂರು, ನವೆಂಬರ್ 28: "ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರು ಒಪ್ಪಿಗೆ ನೀಡಿದ್ದಾರೆ. ಆದರೆ ಸುನ್ನಿ ಮುಸ್ಲಿಮರು ಮಾತ್ರ ಅಡ್ಡಗಾಲು ಇಡುತ್ತಿದ್ದಾರೆ. ಒಂದು ವೇಳೆ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿ ಮಾಡಿದಲ್ಲಿ ಬಾಬರನನ್ನ ಹೇಗೆ ನಾಶ ಮಾಡಿದೆವೋ, ಹಾಗೇ ನಿಮ್ಮನ್ನು ನಾಶ ಮಾಡ್ತೇವೆ" ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.
ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಭಾನುವಾರ ಛತ್ರಪತಿ ಶಿವಾಜಿ ಮೂರ್ತಿ ಅನಾವರಣಗೊಳಿಸಲಾಯಿತು. ಸಮಾರಂಭದಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್ , ಹಿಂದೂ - ಮುಸ್ಲಿಮರು ಹೇಗೆ ಒಗ್ಗಟ್ಟಾಗಿದ್ದೇವೋ ಹಾಗೇ ಇರೋಣ ಎಂದು ಹೇಳಿದರು.

ರಾಮ ಮಂದಿರ ನಿರ್ಮಾಣಕ್ಕೆ ಶಿಯಾ ಮುಸ್ಲಿಮರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿಯವರ ಜೊತೆ ಕೈಜೋಡಿಸಿದ್ದಾರೆ. ಅದೇ ರೀತಿ ಸುನ್ನಿ ಮುಸ್ಲಿಮರೂ ಕೈ ಜೋಡಿಸಬೇಕು. ಅಫ್ಘನಿಸ್ತಾನದಿಂದ ಬಂದ ಆಕ್ರಮಣಕಾರ ಬಾಬರ್ ದೇವಸ್ಥಾನ ಕೆಡವಿ ಮಸೀದಿ ಕಟ್ಟಿಸಿದ್ದ. ಆತನ ಖಡ್ಗಕ್ಕೆ ಹೆದರಿ ಮತಾಂತರ ಆಗಿದ್ದವರೇ ಇಂದಿನ ಮುಸ್ಲಿಮರು ಎಂದರು.
ಆದರೆ, ಬಾಬರನ ಹೆಸರು ಪ್ರಸ್ತಾಪಿಸಿ ರಾಮ ಮಂದಿರ ನಿರ್ಮಾಣಕ್ಕೆ ಅಡ್ಡಿಪಡಿಸಿದರೆ ಅತನ ನಾಶ ಹೇಗಾಯಿತೋ ಅದೇ ರೀತಿ ನಿಮ್ಮನ್ನೂ ನಾಶ ಮಾಡಲು ಶಕ್ತರಿದ್ದೇವೆ ಅನ್ನುವ ಮಾತನಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಈ ಕುರಿತ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.












Click it and Unblock the Notifications