ಕೊನೆಗೂ ಸಿಕ್ಕಿಬಿದ್ದ ಪೋಳ್ಯ ಮನೆ ಸ್ಫೋಟ ಪ್ರಕರಣದ ಆರೋಪಿ
ಮಂಗಳೂರು, ಅಕ್ಟೋಬರ್.28: ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ನಡೆದ ಮನೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಮುಖ್ಯ ಆರೋಪಿಯನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೇರಳ ರಾಜ್ಯದ ಕೊಟ್ಟಾಯಂ ಜಿಲ್ಲೆಯ ತುಡುವಿಳ ತಾಲೂಕು ಅರ್ಕುಳ ಪಿಣಕಾಟ್ ಮನೆ ನಿವಾಸಿ ಬಾಬು ಅಲಿಯಾಸ್ ಬಾಲು ಅಲಿಯಾಸ್ ಬಾಲೆಟ್ಟ ಅಲಿಯಾಸ್ ದೇವಸ್ಯ ಸೆಬಾಸ್ಟಿಯನ್ ಅಲಿಯಾಸ್ ಕುಟ್ಟಚ್ಚನ್ ಅಲಿಯಾಸ್ ಮಹಮ್ಮದ್(81) ಬಂಧಿತ ಆರೋಪಿ.
ಅಕ್ಟೋಬರ್ 16ರಂದು ಈ ಘಟನೆ ಘಟನೆ ನಡೆದಿತ್ತು. ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೋಳ್ಯದ ನಾರಾಯಣ ಪ್ರಸಾದ್ ಎಂಬವವರ ಮನೆಯನ್ನು ಕಚ್ಚಾ ಬಾಂಬ್ ಇಟ್ಟು ಸ್ಫೋಟಿಸಲಾಗಿತ್ತು. ಕಚ್ಚಾ ಬಾಂಬ್ ಅನ್ನು ಅಳವಡಿಸಿ ಮನೆಯ ಮುಂಬಾಗಿಲಿನ ಹೊರಗಿನ ಚಿಲಕ ಹಾಕಿ ಬಾಂಬ್ ಸ್ಫೋಟಿಸಿ ಮನೆ ಮಂದಿಯನ್ನು ಕೊಲ್ಲಲು ಯತ್ನಿಸಲಾಗಿತ್ತು.

ಘಟನೆಯಲ್ಲಿ ನಾರಾಯಣ ಪ್ರಸಾದ್ ಅವರ ಪತ್ನಿ ಶಾಲಿನಿ ಎಂಬುವವರ ಎರಡೂ ಕಾಲುಗಳಿಗೆ ತೀವ್ರ ರೀತಿಯ ಗಾಯವುಂಟಾಗಿತ್ತು. ಬಳಿಕ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಶಾಲಿನಿ ವಿಚಾರಣೆ ವೇಳೆ ಘಟನೆ ನಡೆದ ಸಮಯದಲ್ಲಿ ಮನೆಯ ಮೇಲೆ ಬಾಡಿಗೆಗೆ ವಾಸವಾಗಿದ್ದ ಬಾಬು ಅಲಿಯಾಸ್ ಬಾಲು ಎಂಬಾತ ಮನೆ ಮುಂದೆಯಿಂದ ಓಡಿ ಹೋಗುವುದನ್ನು ನೋಡಿದ್ದಾಗಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.
ಪ್ರಕರಣದ ತನಿಖೆಗೆ ಪೊಲೀಸರ ವಿಶೇಷ ತಂಡವನ್ನೂ ರಚಿಸಲಾಗಿತ್ತು. ಪೊಲೀಸರ ತಂಡವು ಆರೋಪಿ ಬಾಲು ಬಗ್ಗೆ ಪುತ್ತೂರು, ಸುಳ್ಯ, ಕುಶಾಲನಗರ, ಹುಣಸೂರು ಅಲ್ಲದೆ ಕೇರಳ ರಾಜ್ಯದ ಕಾಸರಗೋಡು, ಅದೂರು, ಕಣ್ಣೂರು, ಅಲಕ್ಕೋಡು, ಎರ್ನಾಕುಲಂ ಮುಂತಾದ ಕಡೆಗಳಲ್ಲಿ ಮಾಹಿತಿ ಸಂಗ್ರಹಿಸಿದ್ದರು.

ಅಕ್ಟೋಬರ್ 26ರಂದು ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಅಲಕ್ಕೋಡು ಪೊಲೀಸ್ ಠಾಣಾ ವ್ಯಾಪ್ತಿಯ ಬಸ್ಸು ನಿಲ್ದಾಣದ ಬಳಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.











Click it and Unblock the Notifications