ಮಂಗಳೂರಿನಲ್ಲಿ ಕುಡುಕನಿಗೆ ಸಿಕ್ಕಿದ್ದ 10 ಲಕ್ಷ ರೂಪಾಯಿ ಪೊಲೀಸರ ಪಾಲು
ಮಂಗಳೂರು, ಡಿಸೆಂಬರ್, 06: ಮಂಗಳೂರಿನ ಕಂಕನವಾಡಿಯ ದಾರಿಯಲ್ಲಿ ಕುಡುಕನಿಗೆ ಸಿಕ್ಕಿದ್ದ 10 ಲಕ್ಷ ರೂಪಾಯಿ ಗಂಟೊಂದು ಅರ್ಧಗಂಟೆಯಲ್ಲೇ ಪೊಲೀಸರ ಪಾಲಾಗಿದೆ. ಇದೀಗ ವಾರ ಕಳೆದರೂ ಹಣ ವಾರಸುದಾರರಿಲ್ಲದೆ ಪೊಲೀಸ್ ಠಾಣೆಯಲ್ಲಿಯೇ ಕೊಳೆಯುತ್ತಿದೆ.
ನವೆಂಬರ್ 27 ರಂದು ಪಂಪ್ವೆಲ್ ಬಳಿ ವೈನ್ ಶಾಪ್ನಲ್ಲಿ ಶಿವರಾಜ್ ಎಂಬಾತ ಮದ್ಯ ಸೇವಿಸಿ ಹೊರಗಡೆ ನಿಂತಿದ್ದ. ಆಗ ಹೊರಗಡೆ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಚೀಲವೊಂದು ಅನಾಥವಾಗಿ ಬಿದ್ದಿತ್ತು. ಈ ಚೀಲ ಶಿವರಾಜ್ ಹಾಗೂ ಮತ್ತೋರ್ವ ಕೂಲಿ ಕಾರ್ಮಿಕನ ಕಣ್ಣಿಗೆ ಬಿದ್ದಿತ್ತು. ತಕ್ಷಣ ಶಿವರಾಜ್ ಚೀಲವನ್ನು ಎತ್ತಿ ನೋಡಿದಾಗ 500, 2000 ರೂಪಾಯಿ ಮುಖಬೆಲೆಯ ಕಂತೆ ಕಂತೆ ನೋಟುಗಳು ಕಂಡುಬಂದಿವೆ. ಆಗ ಇಬ್ಬರೂ ರಾಶಿ ಹಣವನ್ನು ನೋಡಿ ಆಶ್ಚರ್ಯಚಿಕಿತರಾಗಿದ್ದಾರೆ.

ಕುಡುಕನ ಕೈಯಲ್ಲಿ ನೋಟುಗಳ ಬಂಡಲ್ ಪತ್ತೆ
ನೋಟುಗಳ ಕಂತೆಯನ್ನು ತೆಗೆದುಕೊಂಡು ಮತ್ತೆ ಮದ್ಯ ಕುಡಿಯಲು ಕುಳಿತಿದ್ದಾರೆ. ಬಂಡಲ್ನಿಂದ ಎರಡು ನೋಟು ಎಳೆದು ಮತ್ತೆ ವೈನ್ ಶಾಪ್ನೊಳಗೆ ಕಾಲಿಟ್ಟಿದ್ದಾರೆ. ಬಳಿಕ ಹೊರಬಂದ ಇಬ್ಬರೂ ಅನತಿ ದೂರ ಸಾಗಿದ್ದಾರೆ. ಆಗ ಕೂಲಿ ಕಾರ್ಮಿಕ ತನಗೇನು ಇಲ್ಲವೇ ಎಂದಾಗ 2,000, 500 ರೂಪಾಯಿ ಮುಖಬೆಲೆಯ ಬಂಡಲ್ ಒಂದನ್ನು ಶಿವರಾಜ್ ಆತನ ಕೈಗೆ ನೀಡಿದ್ದಾನೆ. ಉಳಿದ ನೋಟುಗಳ ಕಂತೆಯನ್ನು ಹಿಡಿದು ಮುಂದಕ್ಕೆ ಹೋಗಲಾಗದ ಶಿವರಾಜ್ ಮತ್ತೆ ವೈನ್ಶಾಪ್ಗೆ ಹೋಗಿ ಕಂಠಪೂರ್ತಿ ಮದ್ಯ ಇಳಿಸಿದ್ದಾನೆ.

ದೂರು ದಾಖಲಿಸದ ಪೊಲೀಸರು
ಅಲ್ಲಿಂದ ಹೊರಬರುವಾಗ ಕಂಕನಾಡಿ ಠಾಣಾ ಪೊಲೀಸರು ಈತನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಅಲ್ಲಿ ತಾನು ಒಂದು ಬಂಡಲ್ ಹಣವನ್ನು ಕೂಲಿ ಕಾರ್ಮಿಕನಿಗೆ ನೀಡಿದ್ದನ್ನು ಆತ ತಿಳಿಸಿದ್ದಾನೆ. ಆದರೆ ಆತನನ್ನು ಹುಡುಕಾಡಿದರೂ ಈವರೆಗೆ ಪತ್ತೆಯಾಗಿಲ್ಲ. ಇದೀಗ ವಾರಸುದಾರರಿಲ್ಲದೇ ಹಣ ಕಂಕನಾಡಿ ಠಾಣೆಯಲ್ಲಿಯೇ ಕೊಳೆಯುತ್ತಿದೆ. ಮೂಲಗಳ ಮಾಹಿತಿಯ ಪ್ರಕಾರ ಈ ಹಣ ಅಡಿಕೆ ವ್ಯಾಪರಸ್ಥರಿಗೆ ಸೇರಿದ್ದಾಗಿದ್ದು, ಹಣ ಕಳೆದುಹೋದ ದಿನದಂದೇ ಕಂಕನಾಡಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದರೆ ಪೊಲೀಸರು ಇದು ನಿಮ್ಮ ಹಣ ಅಲ್ಲ ಅಂತಾ ಹಿಂದೆ ಅವರನ್ನು ಕಳುಹಿಸಿದ್ದರು. ಹತ್ತು ಲಕ್ಷ ರೂಪಾಯಿ ಇರಲಿಲ್ಲ, ಇದ್ದದ್ದು 49 ಸಾವಿರ ರೂಪಾಯಿ ಮಾತ್ರ ಅನ್ನುವುದು ಪೊಲೀಸರ ವಾದವಾಗಿದೆ. ಆದರೂ ಈ ಬಗ್ಗೆ ದೂರು ದಾಖಲಾಗಿಲ್ಲ. ಈವರೆಗೆ ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ ಅನ್ನುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.











Click it and Unblock the Notifications