ವಿನಾಯಕ ಬಾಳಿಗ ಹತ್ಯೆ ಕೇಸ್, ಮೊಬೈಲ್ ಅಂಗಡಿ ಮೇಲೆ ದಾಳಿ
ಮಂಗಳೂರು, ಸೆಪ್ಟೆಂಬರ್ 14 : ಬೇನಾಮಿ ಸಿಮ್ ಬಳಕೆ ನೀಡಿದ ಆರೋಪದ ಮೇಲೆ ಮೊಬೈಲ್ ಅಂಗಡಿಗಳ ಮೇಲೆ ಮಂಗಳೂರಿನಲ್ಲಿ ದಾಳಿ ನಡೆದಿದೆ. ನಗರದ 4 ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪೊಲೀಸರು ಬೇನಾಮಿ ಸಿಮ್ ಬಳಸುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.
ಪೊಲೀಸರ ಕಾರ್ಯಾಚರಣೆ ವೇಳೆ ಈಗಾಗಲೇ ದಾಖಲೆಗಳನ್ನು ನೀಡಿ ಸಿಮ್ ಪಡೆದಿರುವ ವ್ಯಕ್ತಿಯ ದಾಖಲೆಯನ್ನು ಬಳಸಿಕೊಂಡು ಬೇನಾಮಿ ಸಿಮ್ ಪಡೆಯುತ್ತಿರುವ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಸಿಮ್ ಬಳಸುತ್ತಿರುವವರಲ್ಲಿ ಇಬ್ಬರು ವಿಚಾರಣಾಧೀನ ಕೈದಿಗಳಾಗಿದ್ದಾರೆ.[ವಿನಾಯಕ ಬಾಳಿಗ ಹತ್ಯೆ, ನರೇಶ್ ಶೆಣೈ ಜಾಮೀನು ಅರ್ಜಿ ವಜಾ]

ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದ ಆರೋಪಿಯಾದ ಶಿವಪ್ರಸಾದ್ ನಕಲಿ ವಿಳಾಸ ನೀಡಿ ಸಿಮ್ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧಾರವಾಗಿಟ್ಟುಕೊಂಡು ದಾಳಿ ನಡೆಸಲಾಗಿದೆ.[ಬಾಳಿಗ ಹತ್ಯೆ : 770 ಪುಟಗಳ ಚಾರ್ಜ್ ಶೀಟ್]
ಹಂಪನಕಟ್ಟೆ ಕಟ್ಟಡದ ಸಿಮ್ ವಿತರಕ ಸಂಸ್ಥೆ ಮೇಲೆ ದಾಳಿ ನಡೆಸಿದ ಬಳಿಕ ದಾಖಲೆ ಸಂಗ್ರಹ ಏಜೆನ್ಸಿಯ ಸಿಬ್ಬಂದಿ ಕೊಟ್ಟಾರದ ಕಲ್ಬಾವಿಯ ಬಾಡಿಗೆ ಮನೆಯೊಂದರಲ್ಲಿ ದಾಖಲೆಗಳನ್ನು ಇರಿಸಿದ್ದ ಬಗ್ಗೆ ಮಾಹಿತಿ ಪಡೆದು ಅಲ್ಲಿಯೂ ದಾಳಿ ನಡೆಸಲಾಗಿದೆ.[ನರೇಶ್ ಶೆಣೈ ಮೂರು ದಿನಗಳ ಕಾಲ ಪೊಲೀಸರ ವಶಕ್ಕೆ]
ಈ ವೇಳೆ ಹಲವು ಬೇನಾಮಿ ಸಿಮ್ ಗಳ ಬಳಕೆಯ ಬಗ್ಗೆ ಮಾಹಿತಿ ದೊರಕಿದೆ. ಎಸಿಪಿ ಉದಯ ನಾಯ್ಕ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಬಂದರು ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್, ಸಬ್ ಇನ್ಸ್ಪೆಕ್ಟರ್ ಮದನ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಈ ಪ್ರಕರಣದಲ್ಲಿ ಸಿಮ್ ಮಾರಾಟ ಮಾಡಿದ್ದ ಅಂಗಡಿ, ಕಿಯೋಸ್ಕ್ ಹಾಗೂ ವಿತರಕ ಸಂಸ್ಥೆಯ ಸಿಬ್ಬಂದಿಗಳ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬರ್ಕೆ, ಕದ್ರಿ ಪೊಲೀಸರಿಂದಲೂ ದಾಳಿ ನಡೆದಿದೆ. ಪಾಂಡೇಶ್ವರ ಹಾಗೂ ಬೈಕಂಪಾಡಿ ವ್ಯಾಪ್ತಿಯಲ್ಲಿ ಮೊಬೈಲ್ ಅಂಗಡಿಗಳ ಮೇಲೆ ದಾಳಿ ನಡೆಸಲಾಗಿದೆ.
ವಶಪಡಿಸಿಕೊಳ್ಳಲಾದ ದಾಖಲಾತಿ ಬಗ್ಗೆ ತನಿಖೆ ನಡೆಯುತ್ತಿದ್ದು, ದಾಳಿ ಪ್ರಕ್ರಿಯೆ ಮುಂದುವರೆಯಲಿದೆ ಹಾಗೂ ಬೇನಾಮಿ ಸಿಮ್ ನೀಡಿ ಮೋಸ ಮಾಡಿದ ವ್ಯಕ್ತಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications