ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಚೇಸ್ ಮಾಡಿ ಬಂಧಿಸಿದ ಪೊಲೀಸರು
ಬಂಟ್ವಾಳ, ಜೂನ್ 01: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರವಾಣಿ ಮೂಲಕ ಕರೆಮಾಡಿ "ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಸುಮಾರು 4 ರಿಂದ 5 ಜನ ಕೈಯ್ಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಓಡಾಡುತ್ತಿದ್ದಾರೆ. ನಾವು ಕೂಗಿಕೊಂಡಾಗ ಕಾರ್ ಅನ್ನು ವೇಗವಾಗಿ ಚಲಾಯಿಸಿಕೊಂಡು ಗುರುವಾಯನ ಕೆರೆಕಡೆ ಹೋದರು" ಎಂದು ಗೇರುಕಟ್ಟೆ ನಿವಾಸಿಯೊಬ್ಬರು ಎಸ್ಪಿ ರವಿಕಾಂತೇಗೌಡ ಅವರಿಗೆ ಮಾಹಿತಿ ನೀಡಿದ್ದಾರೆ.
ಈ ಮಾಹಿತಿ ಆಧರಿಸಿ ಗುರುವಾಯನಕೆರೆ ಪೊಲೀಸ್ ಚೆಕ್ ಪೊಸ್ಟ್ ನಲ್ಲಿ ಕೆಂಪುಬಣ್ಣದ ಸ್ವಿಫ್ಟ್ ಕಾರನ್ನು ನಿಲ್ಲಿಸಲು ಸೂಚಿಸಿದಾಗ, ಕಾರನ್ನು ನಿಲ್ಲಿಸದೆ ಬಿ.ಸಿ ರೋಡ್ ಕಡೆ ಪರಾರಿಯಾಗಿದ್ದಾರೆ. ಕೊನೆಗೆ ಬಂಟ್ವಾಳ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ಗೆ ಮಾಹಿತಿ ರವಾನಿಸಲಾಗಿದೆ. ಅವರು ಪುಂಜಾಲಕಟ್ಟೆ ಪೊಲೀಸ್ ಚೆಕ್ ಪೋಸ್ಟ್ ನಲ್ಲಿಯೂ ಕೂಡ ನಿಲ್ಲಿಸದೆ ಪರಾರಿಯಾಗಿದ್ದಾರೆ.
ದುನಿಯಾ ವಿಜಯ್ ಮೇಲೆ ಎಫ್.ಐ.ಆರ್: 'ಕರಿಚಿರತೆ' ಫೋನ್ ಸ್ವಿಚ್ ಆಫ್.!
ಆ ನಂತರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಮದ್ವ ಚೆಕ್ ಪಾಯಿಂಟ್ ನಲ್ಲಿದ್ದ ಸಿಬ್ಬಂದಿ ಪಿಸಿ ಆದರ್ಶ ಮತ್ತು ಹೊಮ್ ಗಾರ್ಡ್ ಭಾಸ್ಕರ್ ರಿಂದ ಕಾರನ್ನು ನಿಲ್ಲಿಸಲು ಯತ್ನಿಸಿದಾಗ, ಕಾರ್ ನಲ್ಲಿ ಇದ್ದ ವ್ಯಕ್ತಿಗಳು ಸಿಬ್ಬಂದಿಗೆ ರಾಡ್ ಮತ್ತು ತಲವಾರಿನಿಂದ ಹಲ್ಲೆ ಮಾಡಲು ಪ್ರಯತ್ನಿಸಿದ್ದಾರೆ. ಆಗ ರಕ್ಷಣೆಗಾಗಿ ಬಂಟ್ವಾಳ ನಗರ ಠಾಣೆ ಪಿಎಸ್ಐ ಚಂದ್ರಶೇಖರ್ ಕೈಯಲ್ಲಿದ್ದ ಪಂಪ್ ಆಕ್ಷನ್ ವೆಪನ್ ನಿಂದ, ಗ್ರಾಮಾಂತರ ಸಬ್ ಇನ್ಸ್ಪೆಕ್ಟರ್ ಪ್ರಸನ್ನ ತಮ್ಮ ಪಿಸ್ತೂಲ್ ನಿಂದ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಕಾರು ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿದೆ. ತಕ್ಷಣ ಸಿಬ್ಬಂದಿ ಕಾರನ್ನು ಸುತ್ತುವರೆದು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿ ಎರಡು ತಲವಾರು, ಒಂದು ರಾಡ್, ಮೆಣಸಿನಪುಡಿ, ಮಂಕಿ ಕ್ಯಾಪ್ ಪತ್ತೆಯಾಗಿದೆ. ಆರೋಪಿಗಳನ್ನು ಮೊಹಮ್ಮದ್ ಮುಕ್ಸಿನ್ (23), ಮೊಹಮ್ಮದ್ ಇರ್ಷಾದ್ (29), ಸದ್ದಂ ಮಾರಿಪಳ್ಳ ಎಂದು ಗುರುತಿಸಲಾಗಿದೆ. ಮೊಹಮ್ಮದ್ ಮುಕ್ಸಿನ್ ಮೇಲೆ ವಿವಿಧ ಠಾಣೆಗಳಲ್ಲಿ 14 ಕ್ಕೂ ಹೆಚ್ಚು ಪ್ರಕರಣಗಳಿವೆ. ಸದ್ದಂ ಮಾರಿಪಳ್ಳ ಮೇಲೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಕೊಲೆ ಯತ್ನದ ಪ್ರಕರಣವಿರುತ್ತದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ ಸಂಖ್ಯೆ 94/18 ಕಲಂ 307,353,399,402 IPC ರಂತೆ ಪ್ರಕರಣ ದಾಖಲಾಗಿದೆ.