ಮಂಗಳೂರಿನಲ್ಲಿ ಭದ್ರತೆಗೆ ಬಂದ ಪೊಲೀಸರ ಗೋಳು ಕೇಳೋರು ಯಾರು..
ಮಂಗಳೂರು, ಆಗಸ್ಟ್ 2: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಿನಿಂದ ಭದ್ರತಾ ಕರ್ತವ್ಯ ನಿರ್ಮಿಸಲು ಆಗಮಿಸಿದ ಪೊಲೀಸರಿಗೆ ಕೆಲವು ದಿನಗಳಿಂದೀಚೆಗೆ ಜ್ವರ ಬಾಧೆ ಕಾಡುತ್ತಿದ್ದು ಹಲವು ಮಂದಿ ಊರಿನತ್ತ ತೆರಳಿದ್ದಾರೆ.
ಮೇ 27 ರಿಂದ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹಾಕಲಾಗಿದ್ದು, ಬಂಟ್ವಾಳ ತಾಲ್ಲೂಕಿಗೆ ಮಾತ್ರ ಜುಲೈ 26ರವರೆಗೆ ಸೀಮಿತವಾಗಿತ್ತು. ಸುಮಾರು ಎರಡು ತಿಂಗಳಿನಿಂದ ರಾಜ್ಯದ ಚಿಕ್ಕಮಗಳೂರು, ಕಾರವಾರ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಹಾಸನ, ರಾಮನಗರ, ಉಡುಪಿ ಜಿಲ್ಲೆಯಿಂದ ನೂರಾರು ಪೊಲೀಸರು ಆಗಮಿಸಿದ್ದರು.

ಆದರೆ, ಇವರಿಗೆ ಇಲ್ಲಿನ ಮಳೆ ಗಾಳಿಗೆ ಹೊಂದಿಕೊಳ್ಳುವುದು ತುಂಬಾ ಕಷ್ಟವಾಗಿತ್ತು. ವಿಪರೀತ ಮಳೆ ಇರುವುದರಿಂದ ರಸ್ತೆ ಬದಿ ಅನ್ನಾಹಾರ ಸೇವಿಸಬೇಕು. ನುಸಿ ಕಾಟ ಎದುರಿಸಬೇಕು. ಇದರ ಪರಿಣಾಮ ಶಿರಸಿಯ ಮೂರು ಮಂದಿಗೆ ಡೆಂಗ್ಯೂ, ಹಾವೇರಿಯ ಐದು ಮಂದಿಗೆ ವೈರಲ್ ಜ್ವರ ಬಂದು ಊರಿಗೆ ತೆರಳಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಭದ್ರತೆಗೆ 500ಕ್ಕೂ ಅಧಿಕ ಪೊಲೀಸರು 18 ಇನ್ಸ್ಪೆಕ್ಟರ್, 42 ಸಬ್ಇನ್ಸ್ಪೆಕ್ಟರ್, ಸಶಸ್ತ್ರ ಮೀಸಲು ಪಡೆ ಸೇರಿದಂತೆ ಹೊರ ಜಿಲ್ಲೆಗಳಿಂದ ಆಗಮಿಸಿದ್ದರು ಆದರೆ ಇವರಿಗೆ ಇಲ್ಲಿಯ ವಾತಾವರಣ ಹೊಸತು ಅದರಲ್ಲೂ ಮಳೆಗಾಲವಾದ್ದರಿಂದ ರಸ್ತೆ ಬದಿ ನುಸಿಪೀಡೆಗೆ ಒಳಗಾಗುತ್ತಿದ್ದರು.

ಭದ್ರತಾ ಸಿಬ್ಬಂದಿಗೆ ವಾಸ್ತವಕ್ಕೆ ಬಂಟ್ವಾಳ ವ್ಯಾಪ್ತಿಯಲ್ಲಿ ಕೆಲವು ಹಾಲ್ ಗಳನ್ನು ಗುರುತಿಸಲಾಗಿತ್ತು ಅದರಲ್ಲಿ 150ರಿಂದ 200 ಮಂದಿ ವಾಸವಿದ್ದರು . ಇವರಿಗೆಲ್ಲ ಇದ್ದದ್ದು ಮೂರು ಟಾಯ್ಲೆಟ್ ಮಾತ್ರ. ಇನ್ನು ಮಳೆಗಾಲವಾದ್ದರಿಂದ ಸೊಳ್ಳೆ ಪರದೆ, ಸೊಳ್ಳೆ ಕಾಯಿಲ್ ಗಳು ಇಲ್ಲದೇ ಇದ್ದ ಕಾರಣ ರೋಗಕ್ಕೆ ತುತ್ತಾಗಿದ್ದಾರೆ.
ಸಾಮಾನ್ಯವಾಗಿ ಸೆಕ್ಷನ್ ಸಂದರ್ಭ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಎಂಟು ಗಂಟೆಯಂತೆ ಮೂರು ಪಾಳಿ ರಚನೆ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಹನ್ನೆರಡು ಗಂಟೆ ಕರ್ತವ್ಯ ಮಾಡುವ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿತ್ತು. ಇದು ಮಾತ್ರವಲ್ಲದೆ ಅವರಿಗೆ ಹೈಜಿನಿಕ್ ಆಹಾರ ಸಮಯಕ್ಕೆ ಸಿಗಲಿಲ್ಲ ಎಂಬ ಆರೋಪ ಭದ್ರತಾ ಪೊಲೀಸರದ್ದು.












Click it and Unblock the Notifications