ಮಂಗಳೂರು: ವಾಟ್ಸಾಪಲ್ಲಿ ಅಹ್ಮದ್ ಖುರೇಶಿ ಸಾವಿನ ವದಂತಿ
ಮಂಗಳೂರು, ಏಪ್ರಿಲ್ 17 : ಕೊಲೆ ಯತ್ನ ಪ್ರಕರಣವೊಂದರ ಆರೋಪಿ ಅಹ್ಮದ್ ಖುರೇಶಿ ಅವರ ಸಾವಿನ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಅಹ್ಮದ್ ಖುರೇಶಿ ಮೇಲೆ ಪೊಲೀಸ್ ದೌರ್ಜನ್ಯ ನಡೆದಿದೆ ಎನ್ನಲಾಗಿದ್ದರಿಂದ ಕಿಡಿಗೇಡಿಗಳು ಖುರೇಶಿ ಸಾವಿನ ವದಂತಿಗಳನ್ನು ಹಬ್ಬಿಸಿ ಅಶಾಂತಿ ಉಂಟು ಮಾಡಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.[ಪಿಎಫ್ಐ ಈಗ ನನ್ನನ್ನು ಟಾರ್ಗೆಟ್ ಮಾಡಿದೆ: ಸಚಿವ ಖಾದರ್]

ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸ್ ಕಮಿಷನರ್ ಚಂದ್ರಶೇಖರ್, ಆರೋಪಿ ಅಹ್ಮದ್ ಖುರೇಶಿ ಆರೋಗ್ಯ ಸ್ಥಿರವಾಗಿದೆ. ವ್ಯಾಟ್ಸಾಪ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಸ್ಪಷ್ಟನೆ ನೀಡಿದ್ದಾರೆ.
ಖಾಸಗಿ ಚಾನೆಲ್ ವೊಂದರ ಲೋಗೋ, ವಾಟರ್ ಮಾರ್ಕ್ ಮತ್ತು ಬಾಟಮ್ ಸ್ಟಾಲ್ ಗಳನ್ನು ಫೋಟೋ ಶಾಪ್ ಮೂಲಕ ಎಡಿಟ್ ಮಾಡಿ, ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಖುರೇಶಿ ಸ್ಥಿತಿ ಗಂಭೀರವಾಗಿದೆ ಎಂದು ಸುಳ್ಳು ಸುದ್ದಿ ಹರಡಿಸುತ್ತಿರುವ ಕಿಡಿಗೇಡಿಗಳ ವಿರುದ್ಧ ಚಾನೆಲ್ ಮಾಲಿಕ ಕದ್ರಿ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕಾಶ್ ಪೂಜಾರಿ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಖುರೇಶಿ ಎಂಬಾತನ ಆರೋಗ್ಯ ಸ್ಥಿತಿ ಬಗ್ಗೆ ಇಲ್ಲಸಲ್ಲದ ವದಂತಿಯನ್ನು ಸೃಷ್ಟಿಸಿ ಕೆಲವು ದುಷ್ಕರ್ಮಿಗಳು ಸಮಾಜದ ಸ್ವಾಸ್ಥ್ಯ ಕೆಡಿಸಲು ಯತ್ನಿಸುತ್ತಿದ್ದಾರೆ.
ಇದಕ್ಕಾಗಿ ವಾಟ್ಸಾಪ್ ದುರ್ಬಳಕೆ ಮಾಡಿಕೊಂಡು ಜನರಲ್ಲಿ ಗೊಂದಲ, ಆತಂಕ ಸೃಷ್ಟಿಸಿ ಅಪರಾಧ ಎಸಗಲು ಪ್ರಚೋದನೆ ನೀಡುತ್ತಿದ್ದಾರೆ.
ಸಮಾಜದಲ್ಲಿ ವೈಮನಸ್ಸು, ಅಶಾಂತಿಯನ್ನು ಉಂಟುಮಾಡುವ ಕೃತ್ಯದಲ್ಲಿ ತೊಡಗಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಉಲ್ಲೇಖಸಿದ್ದಾರೆ.












Click it and Unblock the Notifications