ಕೋಟಿ ಚೆನ್ನಯರ ತಾಯಿ ವಿಗ್ರಹಕ್ಕೆ ಅಪಮಾನ ಮಾಡಿದ ಯುವಕ ಬಂಧನ
ಮಂಗಳೂರು, ಸೆಪ್ಟೆಂಬರ್ 11: ತುಳುನಾಡಿನ ಕಾರ್ಣಿಕ ಪುರುಷರೆಂದೇ ಕರೆಯಲಾಗುವ ಕೋಟಿ ಚೆನ್ನಯರ ತಾಯಿ ದೇಯಿ ಬೈದೇದಿ ವಿಗ್ರಹಕ್ಕೆ ಅಪಮಾನ ಮಾಡಿದ ಫೋಟೋವನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟ ಯುವಕನನ್ನು ಸಂಪ್ಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಈಶ್ವರಮಂಗಲ ನಿವಾಸಿ ಹನೀಫ್ ನನ್ನು ಸಂಪ್ಯ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಪುತ್ತೂರು ಪಡುಮಲೆಯ ಔಷಧಿ ವನದಲ್ಲಿರುವ ಕೋಟಿ ಚೆನ್ನಯ್ಯರ ತಾಯಿ ದೇಯಿ ಬೈದೇದಿ ವಿಗ್ರಹದೊಂದಿಗೆ ಅಶ್ಲೀಲ ಭಂಗಿಯಲ್ಲಿ ಫೋಟೋ ಕ್ಲಿಕ್ಕಿಸಿ ಹನೀಫ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಈ ಹಿನ್ನೆಲೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು .

ಬಿಲ್ಲವ ಸಂಘಗಳು ದೇಯಿ ಬೈದೇದಿಗೆ ಅಪಮಾನ ಮಾಡಿ ಅನಾಗರಿಕರಂತೆ ವರ್ತಿಸಿದ ಯುವಕನನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದವು . ಪುತ್ತೂರು ತಾಲ್ಲೂಕು ಬಿಲ್ಲವ ಸಂಘದ ಪದಾಧಿಕಾರಿಗಳು ಪುತ್ತೂರು ಗ್ರಾಮಾಂತರ ಸಂಪ್ಯ ಠಾಣೆಗೆ ಭೇಟಿ ನೀಡಿ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು.
ಈ ಹಿನ್ನೆಯಲ್ಲಿ ತನಿಖೆ ಆರಂಭಿಸಿದ ಸಂಪ್ಯ ಪೊಲೀಸರು ರಿಕ್ಷಾ ಚಾಲಕನಾಗಿರುವ ಆರೋಪಿ ಹನೀಫ್ ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ಕುರಿತು ನಾಲ್ಕು ದಿನಗಳ ಹಿಂದೆ ಮಾಹಿತಿ ಇದ್ದರೂ ಸಂಪ್ಯ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂದು ಆರೋಪಿಸಲಾಗಿದೆ .
ದೇಯಿ ಬೈದ್ಯೆತಿ ಮೂರ್ತಿಗೆ ಅವಮಾನ ಮಾಡಿದ ಫೋಟೋ ಪೊಲೀಸರಿಗೆ ದೊರೆತಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ದೂರಲಾಗಿದೆ . ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾಗುತ್ತಿದ್ದಂತೆ ದಕ್ಷಿಣ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ಅವರ ನಿರ್ದೇಶನದ ಮೇರೆಗೆ ಆರೋಪಿಯನ್ನು ಸಂಪ್ಯ ಪೊಲೀಸರು ಈಗ ಬಂಧಿಸಿದ್ದಾರೆ.












Click it and Unblock the Notifications